Monday, August 31, 2009

ಮಾಹಿತಿ ಹಕ್ಕು ಕಾಯಿದೆ ಮತ್ತು ಕನ್ನಡ ಅನುಷ್ಠಾನ

ದಟ್ಸ್ ಕನ್ನಡ.ಕಾಮ್ ನಲ್ಲಿ ಶ್ರೀ ಗುರುಪ್ರಸಾದ್ ಅವರ "ರಾಷ್ಟ್ರ ಭಾಷೆ ಹಿಂದಿಯೇ ಆಗಬೇಕೆ?" ಸಂವಾದ ಲೇಖನವನ್ನು ಎಲ್ಲರೂ ಗಮನಿಸಿರಬಹುದು.

ಈ ಲೇಖನದಲ್ಲಿ ಗಮನಸೆಳೆವ ಬಹುಮುಖ್ಯ ಅಂಶ

ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆ ಅನ್ವಯ ಕೇಂದ್ರ ಸರ್ಕಾರದ ಆಧೀನದಲ್ಲಿರುವ ಭಾರತೀಯ ಭಾಷಾ ಇಲಾಖೆಗೆ ಪತ್ರ ಬರೆದಾಗ ಅವರಿಂದ ಬಂದ ಉತ್ತರ "ನಮ್ಮ ದೇಶಕ್ಕೆ ರಾಷ್ಟ್ರ ಭಾಷೆ ಎಂಬುದಿಲ್ಲ, ಇರುವುದೇನಿದ್ದರೂ ಅಧಿಕೃತ ಭಾಷೆ" - ಹೀಗೆ ಮೇಲಿನ ವಿವರಣೆಯನ್ನು ಪುಷ್ಠೀಕರಿಸಿದರು. ಯಾರಿಗಾದರು ಇನ್ನೂ ಇದರ ಬಗ್ಗೆ ಸಂದೇಹವಿದ್ದರೆ RTI ಕೆಳಗೆ ಕೇಂದ್ರಕ್ಕೆ ಒಂದು ಪತ್ರ ಬರೆದು ತಿಳಿದುಕೊಳ್ಳಬಹುದಾಗಿದೆ

ಹೌದು, ಇಂದು ಮಾಹಿತಿ ಹಕ್ಕು ಕಾಯಿದೆ (RTI) ಪ್ರಬಲವಾದ 'ಅರಿವಿನ ಅಸ್ತ್ರ' ವಾಗಿ ಹೊರ ಹೊಮ್ಮಿರುವುದನ್ನು ನಾವೆಲ್ಲರೂ ಅರಿಯಬೇಕಿದೆ. ಇಂದು ಅನೇಕರು, ವೈಯುಕ್ತಿಕವಾಗಿ ಅಥವ ಸಂಘಟಿತರಾಗಿ ಈ ಕಾಯಿದೆಯನ್ನು ಚಲಾಯಿಸುತ್ತ ಸಮಾಜದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ನಾವು ಜವಾಬ್ದಾರಿಯುತ-ನೆಮ್ಮದಿ-ಹೊಂದಾಣಿಕೆ-ಹೊಣೆಗಾರಿಕೆ-ಗುಣಮಟ್ಟದ ಜೀವನ ನಡೆಸಲು ನಮಗೆ ಲಭ್ಯವಿರುವ ಮೂಲಭೂತ ಹಕ್ಕುಗಳಲ್ಲಿ ಈ ಮಾಹಿತಿ ಹಕ್ಕು ಸಹ ಒಂದಾಗಿದೆ. ನಮಗೆ ಲಭ್ಯವಾಗಬೇಕಾದ - ಮನವರಿಕೆಯಾಗಬೇಕಾದ ನಮ್ಮ ಹಕ್ಕಿನ ಬಗ್ಗೆ ಅನೇಕ ಗೊಂದಲಗಳಿರಬಹುದು. ಮಾಹಿತಿ ಹಕ್ಕು ಕಾಯಿದೆ ಈ ತೊಡಕುಗಳ ಪರಿಹಾರಕ್ಕೆ ಕ್ರಮಾವಳಿಯ ಹೆಚ್ಚೆಯಾಗಿದೆ.

ಹಿಂದಿ ನಮ್ಮ ರಾಷ್ಟ್ರ ಭಾಷೆಯೆ? ಎಂದು ನಮ್ಮಲ್ಲಿ ಅನೇಕರಿಗೆದುರಾಗುವ ಪ್ರಶ್ನೆಯಂತೆ, ಕರ್ನಾಟಕದಲ್ಲಿ ಗ್ರಾಹಕನಿಗೆ 'ಕನ್ನಡದಲ್ಲಿ ಗ್ರಾಹಕ ಸೇವೆ' ಅಡಿಯಲ್ಲಿ ನಮಗೆ,
ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲಿ ಬರೆಯಬಹುದೆ?

ಬ್ಯಾಂಕ್ ಖಾತೆ ತೆರೆಯಲು - ಜೀವ ವಿಮೆ ಮಾಡಿಸುವಾಗ ಕನ್ನಡ ಅರ್ಜಿಯನ್ನು ಯಾಕೆ ವಿತರಿಸುತ್ತಿಲ್ಲ?

ಬೆಂಗಳೂರಿನ ಹೋಟಲ್ ತಿಂಡಿಪಟ್ಟಿ (ಮೆನು) ಕನ್ನಡದಲ್ಲಿ ಏಕಿಲ್ಲ?

ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘೋಷಣೆಗಳು ಕನ್ನಡದಲ್ಲಿ ಏಕೆ ಮೂಡುತ್ತಿಲ್ಲ?

ಸದರಿ ವರ್ಷವನ್ನು ಕರ್ನಾಟಕ ಸರ್ಕಾರ ಕನ್ನಡ ಅನುಷ್ಠಾನ ವರ್ಷವಾಗಿ ಹೇಳಿದೆ. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ನಗರ ಸಾರಿಗೆ ಯಾವ ಕಾರ್ಯಕ್ರಮ ಹಮ್ಮಿಕೊಂಡಿದೆ?

ಈ ಮೇಲಿನೆಲ್ಲವೂ ಅನುಷ್ಠಾನವಾಗುವುದಕ್ಕೆ ಯಾರು ಜವಾಬ್ದಾರರು? ಅವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರ?


ಹೀಗೆ ಪಟ್ಟಿ ಮಾಡ ಬಹುದಾದ ನೂರಾರು ಪ್ರಶ್ನೆಗಳಿರಬಹುದು.

ಈ ಕಾಯಿದೆ ಉಪಯೋಗಿಸಿ, ಈ ಮೇಲಿನವು ಮತ್ತು ಹೀಗೆ ಕರ್ನಾಟಕದಲ್ಲಿ ಕನ್ನಡ ಅನುಷ್ಠಾನ ಕುರಿತಾಗಿ ಲಭ್ಯವಿರುವ {ಅನುಷ್ಠಾನಕ್ಕೊಳಗಾಗದ!}ಕಾನೂನು-ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗಳನ್ನು ಪ್ರಶ್ನಿಸಿ, ದೊರಕುವ ಉತ್ತರಗಳಿಂದ ಕ್ರಮಬದ್ಧವಾದ ಪರಿಹಾರ ರೂಪಿಸಿಕೊಳ್ಳಬಹುದಾಗಿದೆ.

ನಮ್ಮ ಅರಿವನ್ನು ಇಮ್ಮಡಿಗೊಳಿಸಲು, ನಮಗೆ ದೊರಕುತ್ತಿರುವ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ನಮ್ಮ ಪ್ರಜಾಸತ್ತೆ ಒದಗಿಸಿರುವ ಈ ಅನುಕೂಲವನ್ನು ಚಲಾಯಿಸುವುದು ಸಾರ್ವಜನಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ.


*****

Friday, August 21, 2009

ಬರಹ ಅಂತರಜಾಲ ನಿಘಂಟು

ಸ್ನೇಹಿತರೆ,

"ಗೌರಿ-ಗಣೇಶ ಹಬ್ಬದ ಶುಭಾಶಯಗಳು"

ಬರಹ ಅಂತರಜಾಲ ತಾಣದಲ್ಲಿ ಇದೀಗ ಪ್ರೊ. ಡಿ. ಎನ್. ಶಂಕರ ಭಟ್ ಅವರ "ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು" ನಿಘಂಟನ್ನು ಅಳವಡಿಸಲಾಗಿದೆ.

ಈ ನಿಘಂಟು ತಾಣದಲ್ಲಿ ಲಭ್ಯವಿರದ ಪದ/ನುಡಿಗಟ್ಟು ಗಳನ್ನು ಸೇರಿಸುವ ಅವಕಾಶ ಸಹ ಒದಗಿಸಲಾಗಿದೆ.

ಅಂತರ್ಜಾಲ ಮಾಧ್ಯಮದ ಮೂಲಕ ಲೇಖನಗಳನ್ನು ಬರೆಯುವ, ಮಿಂಚೆ ಕಳಿಸುವ, ಬ್ಲಾಗ್ ಮಾಡುವ ಎಲ್ಲ ರೀತಿಯ ಕನ್ನಡ ಬರಹಗಾರರಿಗೆ ಇದೊಂದು ಉಪಯುಕ್ತ ಸಾಧನವಾಗಿದೆ.


*****

Monday, August 17, 2009

ಕನ್ನಡಕ್ಕಾಗಿ ಮನವಿ ಸಲ್ಲಿಸಿ ಗಲಾಟೆಗಾರ! ಎನ್ನಿಸಿಕೊಂಡವ...

ಪರಿಚಿತರಾದ, ಹಾಸನದ ಹೆಚ್. ಎಸ್. ಅನಂತ ರಾಮಯ್ಯ ತಮ್ಮ ಮಗಳ ಮದುವೆಗೆ ಕರೆಯೋಲೆ ಕೊಡಲು ಬಂದಿದ್ದರು.

ಹಾಗೆ ಮಾತಾಡ್ತ, ನೆನ್ನೆಯ ದಿನ ಬೆಂಗಳೂರಿನ ಅಚ್ಚ ಕನ್ನಡ ಪ್ರದೇಶ! ಬಸವನಗುಡಿ, ಡಿವಿಜಿ ರಸ್ತೆಯ ಅಂಗಡಿಯೊಂದರಲ್ಲಿ (ಮಗಳ ಮದುವೆಗೆ ಬಟ್ಟೆ ಖರೀದಿಸಲು ಹೋಗಿದ್ದಾಗ) ಅವರು ಕನ್ನಡಕ್ಕಾಗಿ ಮನವಿ ಸಲ್ಲಿಸಿದ್ದಕ್ಕೆ, ಗಲಾಟೆಗಾರ! ಎನ್ನಿಸಿಕೊಂಡು ಬಂದ ವಿಷಯದ ಬಗ್ಗೆ ಪ್ರಸ್ತಾಪಿಸಿದರು. ಅವರು ಹೇಳಿದ್ದು .......
*************************
" ಸುಮಾರು ದಿವಸದ ನಂತ್ರ ಬೆಂಗಳೂರಲ್ಲಿ ಗ್ರಾಹಕನಾಗಿ ಒಂದು ಅಂಗಡಿಗೆ ಹೋದೆ. ಸಾವ್ರಾರು ರೂಪಾಯಿ ಬಟ್ಟೆ ವ್ಯಾಪಾರ ಮಾಡ್ದೆ. ಅಂಗ್ಡಿ ಅವ್ರು ನನ್ಹತ್ರ ದುಡ್ಡು ತೊಗೊಂಡು, ರಶೀದಿ ಜತೆ ಪ್ಲಾಸ್ಟಿಕ್ ಚೀಲದಲ್ಲಿ ನಾನು ಕೊಂಡ ಬಟ್ಟೆನ ಹಾಕಿ ಕೊಟ್ರು. ಪ್ಲಾಸ್ಟಿಕ್ ಚೀಲ ಗಮನಿಸಿದ ನಾನು, ಅಂಗ್ಡಿ ಯಜಮಾನಂಗೆ, ಏನ್ರಿ.. ಎಲ್ಲಾ ಸರಿ.. ನೀವು ಕೊಟ್ಟಿರೋ ಚೀಲದಲ್ಲಿ ಒಂದು ಕಡೆನಾದ್ರೂ ನಿಮ್ಮ ಅಂಗ್ಡಿ ವಿವರಾನ ಕನ್ನಡದಲ್ಲಿ ಬರ್ಸಿಲ್ವಲ್ರಿ. ಮತ್ತೆ ನೀವು ಕೊಟ್ಟಿರೋ ರಶೀದಿಲಿ ನೀವು ಯಾರೂಂತ ಕನ್ನಡದಲ್ಲಿ ಬರೆದಿಲ್ವಲ್ರಿ ಅಂತಂದೆ. ಅದಕ್ಕೆ ಯಜಮಾನನ ಜತೆ ಅಂಗ್ಡಿಲಿದ್ದವರೆಲ್ಲ ನನ್ನ ಜತೆ ವಿವಾದಕ್ಕೆ ಇಳಿದು ಬಿಟ್ರು. ನಾನು ಅವರ್ಗೆ ಹೇಳ್ದೆ. ನಿಮ್ಮ ವಿವಾದ ಸ್ವಲ್ಪ ಆಚೆಗಿಟ್ಟು ಯೋಚ್ನೆ ಮಾಡಿ. ನಾನು ಯಾರು ಗೊತ್ತ? ಒಬ್ಬ ಕನ್ನಡ ಗ್ರಾಹಕ. ನೀವು ನನ್ಗೆ ಕೊಟ್ಟ ಸೇವೆ ಸಮರ್ಪಕವಾಗಿಲ್ಲ - ಸರಿ ಮಾಡ್ಕೋಳ್ಳಿ ಅಂತ ಹೇಳೋ ಹಕ್ಕು ನನಗಿದೆ. ಕರ್ನಾಟಕದಲ್ಲಿ-ಬೆಂಗ್ಳೂರಲ್ಲಿ ನೀವು ಅಂಗ್ಡಿ ಇಟ್ಟಿರೋದ್ರಿಂದ ಕನ್ನಡದಲ್ಲಿಲ್ಲದ ನಿಮ್ಮ ಜಾಹೀರಾತು ಬಗ್ಗೆ ಹೇಳ್ದೆ. ಅದೇ ನಿಮ್ ಅಂಗ್ಡಿ ಚೆನ್ನೈ ನಲ್ಲಿದ್ದಿದ್ದ್ರೆ ಯಾಕೆ ನಿಮ್ಮ ಜಾಹೀರಾತು ತಮಿಳ್ನಲ್ಲಿಲ್ಲ ಅಂತ ಕೇಳ್ತಿದ್ನೆ ಹೊರ್ತು ಕನ್ನಡದಲ್ಲಿಲ್ವಲ್ಲ ಅಂತ ಪ್ರಸ್ನಿಸುತ್ತಿರಲಿಲ್ಲ. ಗ್ರಾಹಕನನ್ನು ಸಂತೃಪ್ತಿಗೊಳಿಸಲು ವ್ಯಾಪರಸ್ಥರು ಅಳವಡಿಸಿಕೊಳ್ಳಬೇಕಾದ ಧರ್ಮ ಇದು. ನೋಡಿದ್ರೆ ನೀವು ಮೂಲ ಕನ್ನಡದವರಲ್ಲದಂತೆ ಕಾಣಿಸ್ತಿದೆ. ನೀವು ಇಲ್ಲಿ ಅಂಗ್ಡಿ ವ್ಯಾಪಾರ ಶುರು ಮಾಡಿದ್ಮೇಲೆ ನಿಮ್ಮ ಮೊದಲ್ನೆ ಕೆಲ್ಸ ನೀವು ಕನ್ನಡತನ ಬೆಳೆಸ್ಕೊಂಡು, ಕನ್ನಡದವ್ರಾಗಿ ಕನ್ನಡಿಗರಿಗೆ ಹತ್ತಿರವಾಗ್ಬೇಕಾಗಿರೋದು. ನಿಮ್ಮ ನಿಲುವು ಹೀಗೆ ಇದ್ರೆ, ಮುಂದಿನ್ ಸಲ ನಿಮ್ಮ ಅಂಗ್ಡಿಗೆ ಬರ್ದೆ ಇರೋದು ಆಮೇಲಿನ್ ಮಾತು ಈಗ ನಾನು ಕೊಂಡ್ಕೊಂಡಿರೋದನ್ನೂ ನೀವು ವಾಪಸ್ ತಗೋಳೊ ಹಾಗೆ ಮಾಡ್ಕೋಬೇಡಿ ಅಂದೆ. ಕೊನೆಗೂ ಅವರು ಮುಂದಿನ ಸಲ್ದೋಳಗೆ ಸರಿ ಮಾಡ್ಕೋತಿವಿ ಅಂತ ಹೇಳಿದ್ದಕ್ಕೆ ಅಲ್ಲಿಂದ್ ಹೊರ್ಟೆ.

ವಿಪರ್ಯಾಸ ನೋಡ್ರಿ, ನನ್ನ ಹಕ್ಕಿನ ಬಗ್ಗೆ ಮಾತಾಡ್ವಾಗ, ಪಕ್ಕದಲ್ಲಿದ್ದ ಕನ್ನಡದವ್ರೆ ಒಬ್ರು ಯಾಕ್ರಿ ಸುಮ್ನೆ ಗಲಾಟೆ ಅಂದ್ರು. ನಾನು ಅವ್ರಿಗೆ ಇದು ನನ್ನ ಮತ್ತು ಕನ್ನಡದ ವೈಯುಕ್ತಿಕ ಹಕ್ಕಿನ ಪ್ರಶ್ನೆ ಎಂದು ಸುಮ್ನೆ ಮಾಡಬೇಕಾಯ್ತು. ಬೆಂಗ್ಳೂರಲ್ಲಿ ಕನ್ನಡಿಗರು ತಮ್ಮ ಹಕ್ಕುಗಳನ್ನು ಚಲಾಯಿಸೋದು, ಹಕ್ಕುಗಳ ಬಗ್ಗೆ ಪ್ರಶ್ನಿಸೋದೆ ಮರೆತು ಬಿಟ್ಟಿದ್ದಾರೆ. ನಾಳೆ ಇದು ನಮ್ಮ ಸಣ್ಣ ಊರುಗಳಿಗೂ ಹಬ್ಬಿ ಬಿಡುತ್ತೆ ಇವರಿಗೆಲ್ಲ ಯಾರು ಹೇಳೋರು"
*************************
ಜಾಗೃತ ಕನ್ನಡ ಗ್ರಾಹಕನ ಹಕ್ಕುಗಳನ್ನ ನೆನಪಿಸೋಣ ಅಂತ ಇದನ್ನು ತಿಳಿಸ್ಬೇಕು ಅನ್ನಿಸ್ತು. ಗ್ರಾಹಕನ ಹಕ್ಕುನ್ನು ನಾವು ಕೊಳ್ಳುವ ವಸ್ತುವಿನ ಗುಣಮಟ್ಟ, ತೂಕ, ಪ್ರಮಾಣ, ಅಳತೆ, ಮುಖಬೆಲೆ ಇವಕ್ಕೆ ಮಾತ್ರ ಸೀಮಿತ ಮಾಡಿ ವಸ್ತುವಿನ ಮಾಹಿತಿ ಮತ್ತು ಮಾಹಿತಿಯ ಭಾಷೆ ಬಗ್ಗೆ ಉದಾಸೀನ ಮಾಡಿರುವುದು ಸರಿಯಲ್ಲ. ನಾವು ಇದನ್ನು ಪ್ರಶ್ನಿಸದಿರುವುದರಿಂದಲೇ ಅನಂತ ರಾಮಯ್ಯನಂತಹವರು ಹಾಸನದಿಂದ ಬೆಂಗಳೂರಿಗೆ ಬಂದು ತಮ್ಮ ಹಕ್ಕಿನ ಬಗ್ಗೆ ತಿಳಿಸಿದಾಗ, ಗಲಾಟೆಗಾರ! ಎಂದು ಅನ್ನಿಸಿಕೊಂಡಿರುವುದು.

ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಕನ್ನಡದಲ್ಲಿ ಗ್ರಾಹಕ-ಸೇವೆಗೆ ಒತ್ತಾಯಿಸಬೇಕಾದ್ದು, ಜನರಲ್ಲಿ ಈ ವಿಚಾರದ ಬಗ್ಗೆ ತಿಳಿಸಬೇಕಾದು ನಮ್ಮ ಕರ್ತವ್ಯ. ಇನ್ನೇನು ಬರೋ ಭಾನುವಾರ ಗಣೇಷನ ಹಬ್ಬ ಆಚರಿಸೋಕ್ಕೆ ನಾವು ತಯಾರಾಗ್ತಿದೀವಿ. ಹೊಸ ಬಟ್ಟೆ, ಇತರೆ ಸಾಮಾನು-ಸರಂಜಾಮು ಕೊಳ್ಳೋಕೆ ಎಲ್ಲಾ ರೀತಿಯ ಅಂಗ್ಡೀಗೂ ಹೋಗಿ ಬಂದೇ ಬರ್ತೀವಿ. ಹೀಗೆ ಹೋದಲ್ಲೆಲ್ಲ ಕನ್ನಡದಲ್ಲಿ ಗ್ರಾಹಕ ಸೇವೆಗೆ (ಅವರು ಕೊಡೊ ಪ್ಲಾಸ್ಟಿಕ್ - ಕಾಗದದ ಚೀಲ, ರಶೀತಿ ಆಗಿರ್ಬಹುದು, ಹೊರಡಿಸಿರೋ ಜಾಹೀರಾತು, ಹಾಕಿಸಿರೋ ನಾಮಫಲಕ ಇರಬಹುದು ಎಲ್ಲೆಡೆ ಕನ್ನಡ ಬಳಸಿ ಎಂದು) ಒತ್ತಾಯ ಮಾಡಬೇಕಿದೆ.

ಅಂದ ಹಾಗೆ ಈ ಅನಂತ ರಾಮಯ್ಯನವರಿಗೆ ಈಗ ಸುಮಾರು ೮೦ ವರ್ಷ. 'ಸಾವಿತ್ರಿ ತನಯ' ಎಂಬ ಹೆಸರಿನಲ್ಲಿ ಇವರು ಅನೇಕ ಸಾಹಿತ್ಯ ಲೇಖನಗಳನ್ನು ಬರೆದಿದ್ದಾರೆ. ೧೯೬೦ ರ ದಶಕದ ಅನಕೃ ನೇತೃತ್ವದ ಕನ್ನಡ ಚಳವಳಿಯಲ್ಲಿ ಸಹ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.

ನಮಗೆ ಕನ್ನಡವನ್ನು ಹೀಗೆಯೂ ಪ್ರಸಾರ ಮಾಡಬಹುದು ಎಂದು ನೆನಪಿಸಿದ್ದಕ್ಕೆ ಅವರಿಗೆ ನಮನಗಳು.


*****

Saturday, August 15, 2009

ಕನ್ನಡತನ ಮತ್ತು ರಾಷ್ಟ್ರೀಯತೆ

ಇವತ್ತು ೬೩ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಷ್ಟ್ರೀಯತೆ ಕುರಿತಾಗಿ ಕನ್ನಡದ ಇಬ್ಬರು ಹಿರಿಯ ಚೇತನಗಳ ವ್ಯಾಖ್ಯಾನಗಳು ನೆನಪಿಗೆ ಬಂದವು.

-------------------------

  • "ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರು ವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ, ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ"

ಅ.ನ.ಕೃಷ್ಣರಾಯ (ಕೃತಿ: ನನ್ನನ್ನು ನಾನೆ ಕಂಡೆ, ೧೯೪೪)

-------------------------

  • ಪ್ರಾಂತೀಯತೆ ಎಂದರೆ ಪ್ರಾಂತದ ದುರಭಿಮಾನವಲ್ಲ. ಪ್ರಾಂತೀಯತೆಯೇ ಸರ್ವಸ್ವವಲ್ಲವೆಂಬುದು ಕರ್ನಾಟಕರಿಗೆ ಗೊತ್ತಿದೆ. ಅನ್ಯರು ಕಲಿಸುವದು ಬೇಡ. ಕರ್ನಾಟಕರು ಇಂದಿನ ವರೆಗೆ ಎಂದೂ ಅಧಿಕೃತವಾಗಿ ರಾಷ್ಟ್ರೀಯತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ, ಹೋಗುವುದಿಲ್ಲ. ಪ್ರಾಂತೀಯತೆಯನ್ನು ಜಾತೀಯತೆಗೆ ಹೋಲಿಸುವುದು ತಪ್ಪು.ಕರ್ನಾಟಕಕ್ಕೆ ಭಾರತದಂತೆ ಸ್ವಾಧೀನ ಕರ್ತೃತ್ವವು ಬೇಡ. ಭಾರತಾಧೀನ ಕರ್ತೃತ್ವ ಬೇಕಿದೆ. ಸರ್ವತಂತ್ರತ್ವವು ಬೇಡ. ದತ್ತ ಸ್ವಾತಂತ್ರ್ಯವು ಬೇಕು. ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು.

ಆಲೂರು ವೆಂಕಟರಾಯರು ( ಕೃತಿ:ಕರ್ನಾಟಕತ್ವದ ವಿಕಾಸ)

-------------------------

ಎಲ್ಲರಿಗೂ ೬೩ನೇ "ಬಿಡುಗಡೆ ಹಬ್ಬದ" ಶುಭಾಶಯಗಳು





*****

Friday, August 14, 2009

ಗಂಟಲು ಸತ್ತ ಬುದ್ಧಿವಂತರ ಮಾರ್ಗ ಮತ್ತು ದರ್ಶನ ಬೇಕೆ?


ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಷರತ್ತು ಬದ್ಧವಾಗಿ ವಿರೋಧಿಸಿ-ಪ್ರತಿಭಟಿಸಿದ ಕನ್ನಡ ಪರ ಸಂಘಟನೆಗಳ ನಿಲುವನ್ನು ಕೆಲವರು ಇನ್ನೂ ಅವಹೇಳನ ಮಾಡುವುದನ್ನು ಮುಂದುವರೆಸಿದ್ದಾರೆ. ಶಿವಮೊಗ್ಗದ ಡಿ.ಎಸ್. ನಾಗಭೂಷಣ ಎಂಬುವವರು ಕನ್ನಡ ಪರ ಸಂಘಟನೆಗಳನ್ನು ದಿನಾಂಕ ೧೧ ನೇ ಆಗಸ್ಟ್ ೨೦೦೯ ರ ಪ್ರಜಾವಾಣಿ - ವಾಚಕರ ವಾಣಿ ವಿಭಾಗದಲ್ಲಿ "ಗಲಾಟೆ ಸಂಘಟನೆಗಳು"! ಎಂದು ನಾಮಕರಣ ಮಾಡಿದ್ದಾರೆ.

ನಾಗಭೂಷಣ ಅವರ ಹೇಳಿಕೆ ಅನುಚಿತವಾದದ್ದು ಎಂಬುದಾಗಿ ಪ್ರಜಾವಾಣಿ-ವಾಚಕರವಾಣಿಯಲ್ಲಿ ಈ ದಿನ ಪ್ರಕಟವಾಗಿರುವ ಒಂದು ಪತ್ರ ! ನಿಮ್ಮೆಲ್ಲರ ಗಮನಕ್ಕೆ.

ನಾಗಭೂಷಣ ಅವರ ಈ ರೀತಿಯ ಅಭಿಪ್ರಾಯವುಳ್ಳ, "ಮಾರ್ಗ ಮತ್ತು ದರ್ಶನ"! ನಮಗೆ ಅವಶ್ಯಕತೆಯಿಲ್ಲ ಎಂದು ಚಂಪಾ ಅವರು ನೀಡಿರುವ ಚುಚ್ಚುಮದ್ದನ್ನು ಒದುಗರೆಲ್ಲಾ ಗಮನಿಸಬೇಕಿದೆ.



*****

Wednesday, August 12, 2009

ತುಟಿ ಬಿಚ್ಚುವುದಿಲ್ಲ ಮತ್ತು ಶಾಯಿ ಖರ್ಚು ಮಾಡುವುದಿಲ್ಲ!


ಬಹುಜನ ಕನ್ನಡಪರ ಸಂಘಟನೆಗಳ ಷರತ್ತು ಬದ್ಧ ವಿರೋಧದ ನಡುವೆಯೂ, ಕರ್ನಾಟಕ ಸರ್ಕಾರ ತಾನೆ ವಿಶೇಷವಾಗಿ "ಸಜ್ಜು ಪಡಿಸಿದ ಎಲ್ಲ ವರ್ಗಗಳ ವಿಶೇಷ ಕಾರ್ಯಪಡೆ ದಳ"! ಗಳ ಬಲದಿಂದ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಿದೆ.

ಕನ್ನಡಪರ ಸಂಘಟನೆಗಳ ಮುಖಂಡರನ್ನು ಪ್ರತಿಮೆ ಅನಾವರಣಕ್ಕೆ ಎರಡು ದಿನಗಳಿಗೆ ಮುಂಚಿತವಾಗಿ ಬಂಧಿಸಿ, ಜೈಲಿನಲ್ಲಿರಿಸಿ ಅವರು ನಡೆಸಲು ಯೋಜಿಸಿದ್ದ ಪ್ರತಿಭಟನೆಗೆ ಅವಕಾಶವಾಗದಂತೆ ತಡೆಹಿಡಿಯಲಾಯಿತು. ಈ ಸಮಯದವೆರೆಗೂ ಅವರನ್ನು ಇನ್ನೂ ಬಿಡುಗಡೆಗೊಳಿಸಿಲ್ಲ ಎಂಬ ಸುದ್ಧಿ ಎಲ್ಲೆಡೆ ಕೇಳಿ ಬರುತ್ತಿದೆ. ಆದರೂ ನಾಳೆ ಚೆನ್ನೈ ನಗರದಲ್ಲಿ ಆಯೋಜಿಸಿರುವ ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಎಲ್ಲಾ ಕನ್ನಡ ಪರ ಹೋರಾಟಗಾರರು-ಸಂಘಟನೆಗಳು ಭಾಗವಹಿಸಬೇಕು ಎಂದು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ!

ಹಳದಿ-ಕೆಂಪು ಶಾಲು ಹೊದ್ದು ಬರುವವರನ್ನು ಅಸೂಯೆಯವ, ಸಂಕುಚಿತದವ ಇನ್ನಿತ್ಯಾದಿಯಾಗಿ ಬರೆದು-ಜರೆದು-ಕರೆದು ಅವರನ್ನು ಜೈಲು ಕಂಬಿ ಎಣಿಸಲು ರವಾನಿಸಿದ ನಮ್ಮ ಸರ್ಕಾರ ತಿರುವಳ್ಳುವರ್ ಪ್ರತಿಮೆ ಅನಾವರಣದ ಸಮಯದಲ್ಲಿ ಕಂಡು ಬಂದ ಒಂದು ವಿಷಯವನ್ನು ಕಂಡೂ ಕಾಣದಂತೆ ಇದ್ದುದು ಏಕೆ ಎಂದು ಮಾತ್ರ ಆರ್ಥವಾಗಲಿಲ್ಲ?

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆಗೈದ, ಇತ್ತೀಚೆಗೆ ಶ್ರೀಲಂಕಾ ಸರ್ಕಾರದ ಕಾರ್ಯಾಚರಣೆಯಲ್ಲಿ ಮರಣ ಹೊಂದಿದ ಮತ್ತು ನಿಷೇಧವಾದ ಸಂಘಟನೆಯೊಂದರ ನಾಯಕನಾದ ಪ್ರಭಾಕರನ್ ಭಾವಚಿತ್ರವನ್ನು ಪ್ರದರ್ಶಿಸಿಕೊಂಡು ಬಂದ ಕೆಲವರು ತಿರುವಳ್ಳುವರ್ ಪ್ರತಿಮೆ ಅನಾವಾರಣದ ಸಮಯದಲ್ಲಿ ಹಾಜರಿದ್ದುದು ಕರ್ನಾಟಕ ಸರ್ಕಾರಕ್ಕಾಗಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕಾಗಿಯೆ ಹುಟ್ಟಿಕೊಂಡ "ಸಜ್ಜು ಪಡಿಸಿದ ಎಲ್ಲ ವರ್ಗಗಳ ವಿಶೇಷ ಕಾರ್ಯಪಡೆ ದಳ" ದ ಗಮನಕ್ಕೂ ಬಂದಂತಿಲ್ಲ ಏಕೆಂದರೆ ಈ ವಿಷಯವಾಗಿ ಇದುವರೆಗೂ ಇವರ್ಯಾರು ಇನ್ನೂ ತುಟಿ ಬಿಚ್ಚಲ್ಲ ಮತ್ತು ಮತ್ತು ಶಾಯಿ ಖರ್ಚು ಮಾಡಿಲ್ಲ!
ನಾಳೆ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣಗೊಳ್ಳಲಿರುವ ಕಾರ್ಯಕ್ರಮಕ್ಕೆ ಯಾರಾದ್ರೂ ಹೋಗೋರಿದ್ರೆ ಬರೀ ಕೈಲಿ ಹೋಗಿ ಬನ್ನಿ! ಸುಮ್ನೆ ಅಣ್ಣಾವೃ-ಆಲೂರು-ಗೊರುರು-ಅನಕೃ ಫೋಟೋ ಇಟ್ಕೊಂಡೋ ಅವರ ಬಗ್ಗೆ ಘೋಷಣೆ ಕೂಗಿನೋ, ನಮ್ಮವರ ಬಾಯಲ್ಲೇ ಮುಠ್ಠಾಳ ಅನ್ನಿಸಿಕೊಂಡು ಬಂದೀರಿ ಜೋಕೆ!

Saturday, August 8, 2009

ಕರ್ನಾಟಕದಲ್ಲಿ ಹೊಸ ದ್ವಿಭಾಷ ಸೂತ್ರ!

ಆಗಸ್ಟ್ ೯, ೨೦೦೯ ರ ಬೆಂಗಳೂರು ಹಲಸೂರು ಕೆರೆ ದಂಡೆಯಲ್ಲಿ, ತಿರುವಳ್ಳುವರ್ ಪ್ರತಿಮೆ ಅನಾವರಣ ಪ್ರಕ್ರಿಯೆಯ, ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಸಹಮತ ತೋರಿಸಿರುವ ನಾಡಿನ ಹಿತಚಿಂತಕ ಕವಿಗಳು! ಸಾಹಿತಿಗಳು! ಪತ್ರಿಕೆಗಳು, ನ್ಯಾಯವಾದಿಗಳು ಹಾಗು ಇತರರ ತಂಡ ಕನ್ನಡದ ಒಂದು ಹೊಸ ಶಕ್ತಿ ಯಾಗಿ ಉದಯಿಸಿದೆ! ಇವರ ಜತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹ ಕೈ ಜೋಡಿಸಿರುವುದು ಇವರಿಗೆ ನೈತಿಕ ಬೆಂಬಲ ಒದಗಿಸಿದೆ!

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಆಡಳಿತದ ಎಲ್ಲಾ ಆಯಾಮ - ವಿಭಾಗಗಳಲ್ಲಿ ಕನ್ನಡ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ, ಜಾಹೀರಾತುಗಳಲ್ಲಿ ಕನ್ನಡ, ಇಲ್ಲಿನ ಎಲ್ಲಾ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು, ಹೀಗೆ ಇವುಗಳ ಅನುಷ್ಠಾನದ ಬಗ್ಗೆ ಪುಂಖಾನುಪುಂಖವಾಗಿ ಹೇಳಿಕೆ ನೀಡುತ್ತ, ಪತ್ರಿಕೆಗಳ ಮೂಲಕ ವರದಿ ದಾಖಲಿಸುತ್ತ ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ಜನತೆಯಲ್ಲಿ ಅವರ ಹಕ್ಕುಗಳ ಬಗ್ಗೆ ಆಶಾಭಾವನೆ ಮೂಡಿಸಿದ್ದರು. ಬಹುಷ: ಈ ಎಲ್ಲಾ ಕೆಲಸಗಳು ಈಗಾಗಲೆ ಯಶಸ್ವಿಯಾಗಿ ಅನುಷ್ಠಾನಗೊಂಡಿರಬಹುದು! ಈ ಹಿನ್ನಲೆಯಲ್ಲಿ ಇವರು ಉದಯಿಸಿರುವ ಈ ಹೊಸ ಕನ್ನಡ ಶಕ್ತಿಯನ್ನು! ಬೆಂಬಲಿಸುತ್ತ ಕರ್ನಾಟಕದಲ್ಲಿ ಹೊಸ ದ್ವಿಭಾಷಾ ಸೂತ್ರಕ್ಕೆ ನಾಂದಿ ಹಾಡಲು ಮುಂದಾಗಿರುವವರಿಗೆ ಸಹಮತಿ ತೋರಿಸಿದ್ದಾರೆ!

'ಕಾವೇರಿ'ರುವ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರ ಕನ್ನಡ-ತಮಿಳಿನಲ್ಲಿ ಮಾತ್ರ ಆಹ್ವಾನ ಪತ್ರಿಕೆ ಮುದ್ರಿಸಿದೆ. ಕನ್ನಡದ ಜತೆಗೆ-ತಮಿಳನ್ನೊಳಗೊಂಡ ಈ ಹೊಸ ದ್ವಿಭಾಷ ಸೂತ್ರ ಏತಕ್ಕಾಗಿ ಎಂದು ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಶರು ತಮ್ಮ ಸರ್ಕಾರದ ವತಿಯಿಂದ ನಡೆದಿರುವ ಈ ಉದ್ದೇಶಿತ! ಅಚಾತುರ್ಯದ ಬಗ್ಗೆ ತುಟಿಕ್-ಪಿಟಕ್ ಎನ್ನದೆ ಜಾಣ ಮೌನ ವಹಿಸಿರುವುದು ಈ ಕಾರಣಕ್ಕಾಗಿಯೇ ಇರಬಹುದೇನೋ?

*****

ಕನ್ನಡ ಅನುಷ್ಠಾನದ ಯಾವುದೇ ಕೆಲಸಗಳಿಗೆ ಅದೆಂತಹುದೆ ಅಡ್ಡಿ-ಆತಂಕ ಒದಗಿದರೂ, ಕನ್ನಡದ ವಿರುದ್ಧವಾಗಿ ಯಾವುದೇ ವಿರೋಧಿ ಶಕ್ತಿ ಎದುರಾಗಿ ನಿಂತರೂ, ರಾಜಕೀಯ-ರಾಜೀರಹಿತವಾಗಿ ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇವರುಗಳಿಗೆ ಸಿಂಹಸ್ವಪ್ನವಾಗಿರುತ್ತಾರೆ ಎಂಬ ತಿಳುವಳಿಕೆ ಕನ್ನಡಿಗರ ನಂಬಿಕೆಯಾಗಿತ್ತು. ಆದರೆ ಇಂದು ಇವರು ತಿರುವಳ್ಳುವರ್ ಪ್ರತಿಮೆ ಅನಾವರಣ ವಿಷಯ ಕುರಿತಾದ ವಿಷಯದಲ್ಲಿ ತೆಗೆದುಕೊಂಡಿರುವ ನಿಲವು ಮುಂದಿನ ಇವರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಡೆಯಿಂದಾಗಬೇಕಾದ ಕನ್ನಡ ಕೆಲಸಗಳ ಅನುಷ್ಠಾನದ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

ಕನ್ನಡ ಆಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿರುವ ಉದ್ದೇಶವೇನು ಎಂಬುದನ್ನು ತಿಳಿಯಲು ಒಮ್ಮೆ ಎಲ್ಲರೂ ಈ ತಾಣವನ್ನು ವೀಕ್ಷಿಸಬೇಕಿದೆ. ವಿಪರ್ಯಾಸವೆಂದರೆ ಈ ತಾಣವನ್ನು ಇದರ ಈಗಿನ ಅಧ್ಯಕ್ಷರು ಒಮ್ಮೆಯಾದರೂ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಕಳೆದ ಹಲವು ವರ್ಷಗಳ, ಈ ಕಚೇರಿಯ ಹೊಸ ವಿದ್ಯಮಾನಗಳ ಅದ್ಯತನ ಇದರಲ್ಲಿ ಸೇರ್ಪಡೆಯಾಗಿಲ್ಲ. ಹೊಸ ಕನ್ನಡ ಶಕ್ತಿಯೊಡಗೂಡಿ! ಅವರ ನಿಲುವುಗಳಿಗೆ ಬದ್ಧರಾಗುವಲ್ಲಿ ಮೊದಲಿಗರಾಗಿರುವ ಇವರಿಗೆ, ಇದರ ಬಗ್ಗೆ ಗಮನ ಹರಿಸುವ ಸಮಯವೆಲ್ಲಿದೆ ಅಲ್ಲವೇ?



*****

Wednesday, August 5, 2009

ಇದು ಕರ್ನಾಟಕದ ಶೇಕಡ ೯೫ ರಷ್ಟು ಜನರ ಅಭಿಪ್ರಾಯವೆ?

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಬೆಂಗಳೂರು ನಿವಾಸಕ್ಕೆ ತೆರಳಿ ಹಲಸೂರು ಕೆರೆಯಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಆಹ್ವಾನ ನೀಡಿ ಬಂದಿದ್ದಾರೆ.

ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಹಿತಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಮಾದ್ಯಮಗಳಲ್ಲಿ ದುಡಿಯುತ್ತಿರುವವರು, ನ್ಯಾಯವಾದಿಗಳು ಹೀಗೆ ಈ ವರ್ಗದವರ ಸರ್ಕಾರದ ಪರವಾದ 'ವೈಯುಕ್ತಿಕ' ಅಭಿಪ್ರಾಯಗಳು, ಬೆಂಬಲವನ್ನು ಪ್ರತಿಮೆ ಅನಾವರಣಕ್ಕೆ ಶೇಕಡ ೯೫ ರಷ್ಟು ಬಲ ಬಂದಿದೆ (ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡ ೯೫ ರಷ್ಟು ಜನರ ಅಭಿಪ್ರಾಯ ಇದೆ ಆಗಿದೆ ಎಂಬ ಅರ್ಥದಲ್ಲಿ ) ಅಂತ ನಮ್ಮ ಮಾನ್ಯ ಗೃಹಮಂತ್ರಿಗಳು ಹೇಳಿಕೆ ಇತ್ತಿದ್ದಾರೆ. ಹಾಗೆಯೆ ಕನ್ನಡ ಪರ ಸಂಘಟನೆಗಳ ಷರತ್ತುಗಳನ್ನು ಕಣ್ಣು ಬಿಟ್ಟು ಸಹ ನೋಡದೆ. ಬಹುಜನ ಬೆಂಬಲಿತ ಕನ್ನಡಪರ ಸಂಘಟನೆಗಳ ಹೇಳಿಕೆಗಳಿಗೆ ಪ್ರಜಾಪ್ರಭುತ್ವದಲ್ಲಿ ಬೆಲೆಯೆ ಇಲ್ಲದಂತೆ ಮಾಡಿದ್ದಾರೆ.

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಆರೋಗ್ಯ ತಪಾಸಣೆಗೆ ಚೆನ್ನೈಗೆ ಹೋಗಿದ್ದಾಗ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರನ್ನು ಬೇಟಿ ಮಾಡಬೇಕಾಗಿದ್ದ ಅಗತ್ಯವೇನಿತ್ತು ಎಂಬುದೇ ಪ್ರಶ್ನೆಯಾಗಿದೆ. ಹಾಗೆಯೆ ಇಲ್ಲಿಗೆ ವಿಶ್ರಾಂತಿಗೆ, ದೇವರ ದರ್ಶನಕ್ಕೆ, ಇನ್ಯಾವುದಕ್ಕೊ ಆಗಾಗ ಆಗಮಿಸುವ ತಮಿಳುನಾಡು ಮುಖ್ಯಮಂತ್ರಿಗಳು(ಈಗ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕರುಣಾನಿಧಿಯನ್ನು ಒಳಗೊಂಡಂತೆ) ಸಮಯದಲ್ಲಿ ಈ ರೀತಿಯ ವಿನಿಮಯಗಳು ನಡೆದದ್ದು ಯಾರಾದ್ರು ನೋಡಿದ್ದೀರ?.

ನೆನ್ನೆ ಯಡಿಯೂರಪ್ಪನವರು ಕರುಣಾನಿಧಿ ಮನೆಗೆ ತೆರಳಿ ಹಿಂತಿರುಗುತ್ತಿದ್ದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತ " ತಿರುವಳ್ಳುವರ್ ವಿಷಯ ಹೊರತಾಗಿ ಅಲ್ಲಿ ಬೇರೆ ಯಾವ ಪ್ರಸ್ತಾಪ ಮಾಡಲಿಲ್ಲ. ಪಾಪ ಅವರು ವಿಶ್ರಾಂತಿಗಾಗಿ ಇಲ್ಲಿಗೆ ಆಗಮಿಸಿದ್ದಾರೆ ಈ ಸಮಯದಲ್ಲಿ ಅವರೊಡನೆ ಬೇರೆ ವಿಷಯ ಚರ್ಚಿಸುವುದು ಸರಿಯೆ" ಎಂಬಂತೆ ಉತ್ತರಿಸಿದರು. ತಾನು ಚೆನ್ನೈಗೆ ಹೋಗಿರುವುದು ಆರೋಗ್ಯ ತಪಾಸಣೆಗೆ ಮಾತ್ರ, ಅಲ್ಲಿ ಕರುಣಾನಿಧಿಯನ್ನು ಭೇಟಿ ಮಾಡುವ, ರಾಜಕೀಯ ವಿಷಯ ಚರ್ಚಿಸುವ ಅಗತ್ಯವಿರಲಿಲ್ಲ ಎಂದು ನಮ್ಮ ಯಡಿಯೂರಪ್ಪನವರಿಗೆ ಅಂದು ಹೊಳೆದಿರಲಿಲ್ಲವೆ? ಮತ್ತು ಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ಇರುವ ಹಲವಾರು ವಿಷಯಗಳನ್ನು ಬದಿಗಿತ್ತು ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡಿದರು? ಈ ಪ್ರಶ್ನೆಗಳಿಗೆ ಅಂದು ಅನಾರೋಗ್ಯದಿಂದ ಬಳಲುತ್ತಿದ್ದ, ಇಂದು ಆರೋಗ್ಯವಾಗಿರುವ! ಯಡಿಯೂರಪ್ಪನವರೆ ಉತ್ತರಿಸಬೇಕಿದೆ.

ತಮಿಳುನಾಡು ಕರ್ನಾಟಕಕ್ಕೆ ತೊರಿರುವ ಮತ್ತೊಂದು ದೊಡ್ಡತನ ನೆನ್ನೆ ಪತ್ರಿಕೆಗಳಲ್ಲಿ ಪ್ರಕಟವಾಗಿದೆ! ಇದನ್ನು ಯಡಿಯೂರಪ್ಪನವರು ಕಂಡರೋ ಇಲ್ಲವೋ ಗೊತ್ತಿಲ್ಲ. ಕರುಣಾನಿಧಿಯವರನ್ನು ಅಭಿನಂದಿಸಿ ದೊಡ್ಡತನ ಮೆರೆದು ಬಂದಿದ್ದಾರೆ.

ಕರ್ನಾಟಕದಲ್ಲಿ ಈ ಕುರಿತಾಗಿ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ, "ಕಾವೇರಿ"ರುವಾಗ, ತಮಿಳುನಾಡಿನಲ್ಲಿನ 'ಶೇಕಡ ೯೫ ವರ್ಗದದವರ'! ಅಭಿಪ್ರಾಯ ಏನಿದೆ? ಅದು ಅಲ್ಲಿನ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆಯ? ಬೆಂಗಳೂರಿನಲ್ಲಿ ನೆಲೆಸಿರುವ ತಮಿಳರಿಗೆ ಕರ್ನಾಟಕ ಹಿತಾಸಕ್ತಿ ಕುರಿತಂತೆ ಯಾವ ಅಭಿಪ್ರಾಯಗಳಿವೆ? ಅಂತ ನಮ್ಮ ಮಾಧ್ಯಮದವರು ಯಾರೂ ಇನ್ನೂ ಮುಖಪುಟದ ಸುದ್ದಿ ಮಾಡದಿರುವುದು - ಪಂಚ್ ಲೈನ್ ಹೆಡ್ಡಿಂಗ್ ಕೊಡದಿರುವುದು ಕರ್ನಾಟಕದ ಉಳಿದ ಶೇಕಡ ೫ 'ಬಹುಜನರಿಗೆ' ಬೇಸರ ತಂದಿದೆ ಎಂದು ನಿಮಗನಿಸುತ್ತಿಲ್ಲವೆ?

ಕರ್ನಾಟಕದ ಈ ಶೇಕಡ ೯೫ ಜನರ ಅಭಿಪ್ರಾಯಗಳಿಂದ ಉಳಿದ ಶೇಕಡ ೫ ಬಹುಜನರು ಇನ್ಯಾವ ರೀತಿಗಳಲ್ಲಿ ನಲುಗಬೇಕಾಗಿದೆಯೋ ಕಾದು ನೋಡೋಣವೆ!


*****

Tuesday, August 4, 2009

ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ!

೨೦೦೯ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವನ್ನಾಗಿ ಘೋಷಿಸಿ! ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತೆಮೆ ಅನಾವರಣಕ್ಕೆ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಪಣ ತೊಟ್ಟು ನಿಂತಿದೆ. ಕಳೆದೆರಡು ವಾರಗಳಿಂದ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಪತ್ರಿಕೆಗಳವರು,ನ್ಯಾಯವಾದಿಗಳು ಸರ್ಕಾರದ ಈ ಯೋಚನೆಗೆ ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡುತ್ತ, ಸಮಸ್ತ ಕನ್ನಡಿಗರು ತಮ್ಮ ಸಣ್ಣತನ, ಅಸಹನೆ, ಸಂಕುಚಿತತೆ, ವಿರೋಧ, ವೈಮನಸ್ಯ ತೊರೆದು ಸರಕಾರದ ಈ ನಿಲುವಿಗೆ ಬೆಂಬಲ ತೋರಬೇಕೆಂದು ಕರೆ ನೀಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ನಾವೆಲ್ಲ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಏಕೆ ತಡೆ ಹಿಡಿಯಲಾಗಿದೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡಬೇಕಿದೆ:

೧೯೯೧ರಲ್ಲಿ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಕೆಲವು ತಮಿಳು ಹಿತಾಸಕ್ತಿದಾರರು ಮುಂದಾಗಿದ್ದಾಗ, ಕನ್ನಡಪರ ಸಂಘಟನೆಗಳ ಒಗ್ಗೂಡಿದ ಪ್ರತಿಭಟನೆಯಿಂದಾಗಿ ಅನಾವರಣ ಸ್ಥಗಿತಗೊಂಡಿತ್ತು.

ಈ ೧೮ ವರ್ಷಗಳಲ್ಲಿ ತಮಿಳರ ಪರವಾದ (ಸಂಕೇತವಾದ!) ಈ ಪ್ರತಿಮೆ ಅನಾವರಣದ ವಿರೋಧಕ್ಕೆ ಕಾಲಾನುಕಾಲವಾಗಿ ಪಟ್ಟಿ ಮಾಡಬಹುದಾದ ಕಾರಣಗಳು: ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು , ತಿರುವಳ್ಳುವರ್ "ರಾಷ್ಟ್ರ ಕವಿ" ಅವರ ಪ್ರತಿಮೆ ಸ್ಥಾಪನೆ ಬೇಡ ಎನ್ನುವ ಕನ್ನಡಿಗರು ಎಂತಹ ದೇಶ ಭಕ್ತರು ಎಂದು ಸಹೃದಯಿಗಳಾದ ಕನ್ನಡಿಗರನ್ನೇ ಪ್ರಶ್ನಿಸಿದ್ದು, ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಎಂದು ಬರಹಗಳನ್ನು ಬರೆಸಿ, ಸರ್ಕಾರವನ್ನು ಆಗ್ರಹಿಸಿ, ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು, ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು. ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು.ಹೀಗೆ ಕನ್ನಡಿಗನ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಪದೆ ಪದೆ ಕೆಣಕಲು ಪ್ರಯತ್ನಿಸುತ್ತಿರುವುದೇ ಆಗಿದೆ.

ಮೇಲಿನ ತಮಿಳರ ಈ ಎಲ್ಲ ಸಣ್ಣತನಗಳನ್ನು ಸಹಿಸಿಕೊಂಡು ಅವರೊಡನೆ ಇನ್ನೂ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗನದು ಸಂಕುಚಿತ ಸ್ವಭಾವ ಎನ್ನುವುದಾದರೆ ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ ಎಂದು ಒಪ್ಪಿಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನ ಬೇಡವೇ ಬೇಡ ಎಂದು ಅಂದು - ಮತ್ತು ಎಂದೆಂದೂ ಕನ್ನಡಿಗರು ಹೇಳಿಲ್ಲ. ಪರ್ಯಾಯವಾಗಿ ಚೆನ್ನೈನ ಪ್ರಮುಖ ಸ್ಥಳದಲ್ಲಿ ನಮ್ಮ ಸರ್ವಜ್ಞ ಕವಿಯ ಪ್ರತಿಮೆಯಿರಿಸಿ ಎಂಬ ಬೇಡಿಕೆ ಮಾತ್ರ ಕನ್ನಡಿಗರದಾಗಿತ್ತು. ಇದನ್ನು ಅವರು ಇದುವರೆವಿಗೆ ಒಪ್ಪಿಕೊಳ್ಳದೆ ನೆರವೇರಿಸದಿದ್ದದ್ದು ಕನ್ನಡಿಗರ ತಪ್ಪೇ? ಈಗ ಅವರಲ್ಲಿಗೆ ಹೋಗಿ ಅವರನ್ನು ಒಪ್ಪಿಸಿ ಬಂದಿರುವುದು ಸಹ ಕನ್ನಡದ ಮುಖ್ಯಮಂತ್ರಿಯೇ ಅಲ್ಲವೇ. ಇದನ್ನು ಕನ್ನಡಿಗರ ಸಂಕುಚಿತ ಭಾವನೆ ಎಂದರೆ ಕನ್ನಡಿಗ ಪ್ರತಿಮೆ ಪ್ರತಿಷ್ಠಾಪನೆಗೆ ವಿರೋಧಿಸುತ್ತಿದ್ದಾನೆ ಎಂದು ಒಪ್ಪಿಕೊಳ್ಳಬಹುದಿತ್ತು.

ತಮಿಳರು ಸೇರಿದಂತೆ ಇತರ ಭಾಷಿಕರನ್ನು ಕನ್ನಡಿಗರು ಇಲ್ಲಿ ಸಹೋದರರಂತೆ ಬೆಳೆಸಿದ್ದಾರೆ. ಅವರ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸಿದ್ದಾರೆ. ಬೆಂಗಳೂರಿನಲ್ಲಿ "ರಾಜಾಜಿ" ನಗರವಿದೆ, "ಕಾಮರಾಜ್" ರಸ್ತೆಯಿದೆ, "ರವೀಂದ್ರ" ಕಲಾಕ್ಷೇತ್ರವಿದೆ. ಕನ್ನಡಿಗರಲ್ಲದ ಅನೇಕರನ್ನು ನಮ್ಮನ್ನಾಳಲು ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದ್ದೇವೆ. ಅಣ್ಣಮ್ಮ ಗುಡಿಗಿಂತ ಹೆಚ್ಚಾಗಿ ಅಯ್ಯಪ್ಪ ದೇವಸ್ಥಾನಕ್ಕೆ ಜಾಗ ಮಾಡಿಕೊಟ್ಟಿದ್ದೇವೆ. ಈ ದೇಶದ ಇನ್ಯಾವ ಊರಿನಲ್ಲೂ ಇರದಷ್ಟು ಪರಭಾಷ ಚಲನಚಿತ್ರಗಳು ಹಾಗು ಮನರಂಜನೆ ಬೆಂಗಳೂರು-ಕರ್ನಾಟಕದಲ್ಲಿ ಚಾಲನೆಯಲ್ಲಿದೆ. ಕನ್ನಡಿಗನ ಈ ಎಲ್ಲಾ ನಿಲುವುಗಳು ಸಂಕುಚಿತವೆನಿಸಿದರೆ ಕನ್ನಡಿಗ ಪ್ರತಿಮೆ ಸ್ಥಾಪನೆಗೆ ಸಂಕುಚಿತತೆ ವೈಮನಸ್ಯ, ಅಸಹನೆ ತೋರುತ್ತಿದ್ದಾನೆ ಎಂದು ಒಪ್ಪಿಕೊಳ್ಳಬಹುದಿತ್ತು.

ಕನ್ನಡಿಗರು ಬೆರೆಲ್ಲೋ ಹೋಗಿ ತಮ್ಮ ಅಸ್ಥಿತ್ವಕ್ಕಾಗಿ ದಬ್ಬಾಳಿಕೆ ತೋರಿದ ಕುರುಹಿಲ್ಲ. ಕೆಲವೊಮ್ಮೆ ಇಲ್ಲಿ ಶಿಷ್ಟತೆಯನ್ನು ಮೀರಿದ್ದರೂ ಅದು ಕನ್ನಡಕ್ಕೆ ಪ್ರಾಧಾನ್ಯತೆ ದೊರೆಯಲಿ ಎಂಬ ಕಳಕಳಿಯ ಭಾವನೆಯಿಂದ ಹೊರಹೊಮ್ಮಿರುವುದೇ ಆಗಿದೆ. ಇದುವರೆಗಿನ ಎಲ್ಲಾ ಕನ್ನಡಪರ ಚಳವಳಿ / ಕಾಳಜಿಯು ಸಾಮಾನ್ಯ ಕನ್ನಡಿಗನ ಜೀವನ ಶೈಲಿಗೆ ಮನ್ನಣೆ ದೊರಕಿಸಿಕೊಡುವ ಪ್ರಯತ್ನ ಮಾತ್ರ ಎಂಬುದು ಸ್ಪಷ್ಟ. ಸಹೃದಯಿಯಾದ ಕನ್ನಡಿಗರನ್ನು, ಕನ್ನಡಿಗರೆ ಆದ ಕೆಲವರು "ಸಂಕುಚಿತ ಸ್ವಭಾವದವ- ಸಣ್ಣವ - ಅಸಹನೆಯವ" ಎಂದು ಹಣೆ ಪಟ್ಟಿ ಕಟ್ಟುತ್ತಿರುವುದು ವಿಪರ್ಯಾಸವಾಗಿದೆ.

ತಿರುವಳ್ಳುವರ್ ತಮ್ಮ ಕವಿತೆಗಳಲ್ಲಿ ಹೇಳಿದ್ದಾರೆ : ತಮ್ಮ ಕರ್ತವ್ಯದಲ್ಲಿ ದೋಷವುಂಟಾಗದಂತೆ ಇನ್ನೊಬ್ಬರ ವಿಷಯದಲ್ಲಿ ಅನುಕಂಪವನ್ನು ತೋರಿಸುವವನಿಗೆ ಮತ್ತು ಕೊಟ್ಟು-ಪಡೆಯುವವನಿಗೆ ಈ ಜಗತ್ತೇ ಅಧೀನನಾಗುವುದು. ತಮಿಳು ನಾಯಕರು ತಿರುಕ್ಕುರಳ್ ಅನ್ನು ಮತ್ತೊಮ್ಮೆ ಅಧ್ಯಯನ ಮಾಡಿ ಪರರಾಜ್ಯಗಳವರೊಡನೆ ಹೇಗೆ ಅನ್ಯೋನ್ಯದಿಂದಿರಬೇಕು ಎಂಬುದನ್ನು ಇನ್ನೂ ಸರಿಯಾಗಿ ಅರಿಯಬೇಕಿದೆ. ಇಲ್ಲಿ ಕನ್ನಡಿಗರು "ಸಣ್ಣ ಮನಸ್ಸಿನವರು-ಅಸಹನೆಯವರು" ಎಂಬ ಮಾತುಗಳಿಗಿಂತ, ತಿರುವಳ್ಳುವರ್ ನ ಆರಾಧಕರಾದ ತಮಿಳರು ಮೊದಲು ಸರ್ವಜ್ಞ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಿ ಒಮ್ಮೆಯಾದರೂ ದೊಡ್ಡವರೆನಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎನ್ನುವುದು ಮಾತ್ರ ಸತ್ಯವಾದದ್ದು. ಈ ವಿಷಯವನ್ನು ತಮಿಳುನಾಡಿನ ಬುದ್ದಿಜೀವಿಗಳು ತಮ್ಮ "ಮಕ್ಕಳ್" ಗಳಿಗೆ ತಿಳಿಸಿಕೊಡಬೇಕಾಗಿರುವುದು ಈಗ ಅಗತ್ಯವಾದದ್ದು.

ಕರ್ನಾಟಕದಲ್ಲಿ ತಿರುವಳ್ಳುವರ್ ಕುರಿತಾಗಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿರುವಾಗ, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಬೆಂಗಳೂರಿನಲ್ಲಿಯೇ ಆರಾಮವಾಗಿ ಕಾಲ ಕಳೆಯುತ್ತಿದ್ದು ನಮ್ಮ ನಮ್ಮವರೆ ಕಿತ್ತಾಡುವುದನ್ನು ನೋಡಿ ಪುಳಕಿತಗೊಂಡಿರುವುದು ಸತ್ಯ. ತಮಿಳರು ತಮ್ಮ ದೊಡ್ಡತನ ಮೆರೆಯುವ ಒಂದು ಹೇಳಿಕೆ ನೀಡುವ ಬಗ್ಗೆ ತಲೆಯೆ ಕೆಡಿಸಿಕೊಂಡಿಲ್ಲ.


ತಮಿಳರು ಎಂದಿಗೂ ಸ್ವಾಭಿಮಾನಿಗಳು, ದೊಡ್ಡತನ ಮೆರೆದು ದಡ್ಡರಾಗುವವರಲ್ಲ ಎಂದು ಮಾತ್ರ ಇದರಿಂದ ಸಾಬೀತಾಗುತ್ತಿದೆ.

ಯಾವ ಕಾರಣಕ್ಕಾಗಿ ನಮ್ಮನ್ನಾಳುತ್ತಿರುವವರು ಅವರ ಹಿಂಬಾಲಕರು ಈ ನಿಲುವಿಗೆ ತಲೆಬಾಗಿದ್ದಾರೆ? ಉತ್ತರವಿದೆಯೇ


*****