Saturday, September 26, 2009

ಮಹಾರಾಷ್ಟ್ರದಲ್ಲಿ ಮರಾಠತೆಗೆ ಪ್ರಾಧಾನ್ಯತೆ ದೊರಕಿಸುವುದೇ ನಮ್ಮ ಆಧ್ಯತೆ......

****
ಬರುವ ಅಕ್ಟೋಬರ್ ೧೩ ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಉಮೇದುವಾರರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನೆನ್ನೆಗೆ ಮುಗಿದಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಪ್ರಬಲವಾಗಿ ಬೇರೂರುವ ಲಕ್ಷಣ ತೋರುತ್ತಿರುವ ಪಕ್ಷವೊಂದನ್ನು ಹೊರತು ಪಡಿಸಿ! ಮಿಕ್ಕೆಲ್ಲಾ ಪಕ್ಷಗಳು, ಅದರ ಮುಖಂಡರು, ಅವರ ಸ್ಪರ್ಧಿಗಳಿಂದ ಅಲ್ಲಿನ ಎಲ್ಲಾ ಮತದಾರರನ್ನು (ಸ್ಥಳೀಯ ಮರಾಠರು ಮತ್ತು ಮರಾಠೇತರ ವಲಸಿಗರ) ಯಾವುದೇ ರೀತಿಯಲ್ಲಾದರೂ ಒಲಿಸಿಕೊಂಡು, ಹೇಗಾದರೂ ಮಾಡಿ ತಮ್ಮ ಪಕ್ಷಕ್ಕೆ ಮತ ಪಡೆದುಕೊಂಡು ಅಧಿಕಾರಕ್ಕೆ ಬರುವ ಕಸರತ್ತು ನಡೆದಿದೆ.

ಹೌದು, ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಮ.ನ.ಸೇ.) ಮಿಕ್ಕೆಲ್ಲಾ ಪಕ್ಷಗಳಿಗಿಂತ ಭಿನ್ನವಾಗಿ ಕೇವಲ ಸ್ಥಳೀಯ ಮರಾಠಿಗರು ಮತ್ತು ಅವರ ಮತಗಳ ಮೇಲೆ ಮಾತ್ರ ವಿಶ್ವಾಸವಿರಿಸಿ ಚುನಾವಣ ಕಣಕ್ಕಿಳಿದಿದೆ. ಬಹಳ ದಿನಗಳ ನಂತರ ರಾಜ್ ಠಾಕ್ರೆ, ರಾಷ್ಟ್ರೀಯ! ಇಂಗ್ಲೀಷ್ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾಗ ೧ ಮತ್ತು ಭಾಗ ೨(ಸಂದರ್ಶಕ ಇಂಗ್ಲೀಷ್ ನಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಮರಾಠಿಯಲ್ಲೆ ಉತ್ತರಿಸುತ್ತ) ಮಾತನಾಡುತ್ತ ತಮ್ಮ ಪಕ್ಷ ಮತ್ತು ಅದರ ನಿಲವು ಹೇಗೆ ಸ್ಥಳೀಯತೆ ಮತ್ತು ಮರಾಠಿಗರ ಹಿತ ಚಿಂತನೆಗೆ ಮಾತ್ರ ಬದ್ಧವಾಗಿದೆಯೆಂಬುದನ್ನು ಖಡಾಖಂಡಿತವಾಗಿ ಸಮರ್ಥಿಸಿಕೊಂಡರು.

ಭಾಷಾವಾರು ಪ್ರಾಂತ್ಯವಾಗಿ ವಿಂಗಡನೆಯಾಗಿರುವ ಭಾರತದಲ್ಲಿ ಅನೇಕತೆಯಲ್ಲಿ ಏಕತೆ ಉಳಿಯಬೇಕಾದರೆ, ಭಾರತ ನಿಜವಾಗಿ ಸಬಲ-ಸದೃಡವಾಗಬೇಕಾದರೆ ಆಯಾ ಪ್ರಾಂತ್ಯಗಳು ಎಲ್ಲಾ ರೀತಿಯಲ್ಲಿ ಬಲಗೊಳ್ಳಬೇಕು. ಅಂತೆಯೇ ಮಹಾರಾಷ್ಟ್ರದಲ್ಲಿ ಸರ್ವ ರೀತಿಯಲ್ಲಿ ಮರಾಠತೆ ಸ್ಥಾಪಿತವಾಗಿ ಅದು ಮಹಾರಾಷ್ಟ್ರವಾಗಿ ಉಳಿಯುವುದೇ ನಿಜವಾದ ರಾಷ್ಟ್ರೀಯತೆ ಮತ್ತು ಭಾರತವೆಂಬ ಹಲವು ಸ್ವತಂತ್ರ್ಯ ಪ್ರಾಂತ್ಯಗಳನ್ನೊಳಗೊಂಡ ರಾಷ್ಟ್ರವನ್ನು ರಚಿಸಿರುವುದರಲ್ಲಿನ ಸಾರ್ಥಕತೆ ಹಾಗು ಆ ದೊಡ್ಡ ಶಕ್ತಿಯನ್ನು ಮತ್ತಷ್ಟು ಬಲ ಪಡಿಸುವ ಸಾಧನ ಎಂಬ ಸ್ಪಷ್ಟತೆ ಅವರ ಮಾತುಗಳಲ್ಲಿದೆ. ಅವರ ಮಾತುಗಳಲ್ಲಿ ಇತರರಂತೆ ಬೂಟಾಟಿಕೆಯ ರಾಷ್ಟ್ರೀಯತೆಯ ಪ್ರತಿಪಾದನೆಯಿಲ್ಲ. ಆ ರೀತಿ ಬೂಟಾಟಿಕೆ ಪ್ರತಿಪಾದನೆ ಮಾಡಿ ಓಟುಗಳನ್ನು ಪಡೆದು ಚುನಾವಣೆ ಗೆಲ್ಲುವ ಇರಾದೆ ಅವರ ಮಾತುಗಳಲ್ಲಿ ಕಾಣಸಿಗುವುದಿಲ್ಲ. ಮರಾಠಿ ಮತದ ಬಲ ಏನೆಂದು ಸಾಬೀತು ಮಾಡುವ ಛಲ ಅವರಿಂದ ಹೊರಹೊಮ್ಮಿರುವುದನ್ನು ಕಾಣಬಹುದಾಗಿದೆ.

ಒಂದು ರಾಜ್ಯದ-ಪ್ರದೇಶದ, ಆಗು-ಹೋಗುಗಳನ್ನು ನಿರ್ದರಿಸುವವರು ಅಲ್ಲಿಯ ಸ್ಥಳೀಯರಾಗಿರಬೇಕು, ಆದರೆ ಮಹಾರಾಷ್ಟ್ರ ರಾಜ್ಯ ಸರ್ಕಾರ ರಚಿಸಲು ಇಂದು ವಲಸಿಗರ ಮತಗಳು ನಿರ್ಣಾಯಕವಾಗುವ ಹಂತ ತಲುಪಿದೆ. ಕೆಲಸ, ವ್ಯಾಪಾರ ಮತ್ತೊಂದನ್ನು ಅರಸಿ ಬರುವ ವಲಸಿಗರು ಎಂದೆಂದಿಗೂ ವಲಸಿಗರಾಗೆ ಉಳಿಯುತ್ತಿರುವುದು ಸಮಸ್ಯೆ. ಪರಿಹಾರವಾಗಿ ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಬರುವವರಿಗೆ ರಹದಾರಿ ಪತ್ರ ಕ್ರಮ ಅನುಸರಿಸುವುದರ ಅವಶ್ಯಕತೆಯ ಬಗ್ಗೆ ಸಹ ರಾಜ್ ಮಾತನಾಡಿದ್ದಾರೆ. ಭಾರತದಿಂದ ಮಹಾರಾಷ್ಟ್ರ ಪ್ರತ್ಯೇಕವಾಗಬೇಕೆಂಬ ವಾದ ನಮ್ಮದಲ್ಲ, ಮಹಾರಾಷ್ಟ್ರದಲ್ಲಿ ಮರಾಠಾತತೆಗೆ ಪ್ರಾಧಾನ್ಯತೆ ದೊರಕಿಸುವ, ಮರಾಠಿಗರ ಹಕ್ಕಿನ ಪರವಾದ ಹೋರಾಟ ನಮ್ಮದು ಎಂಬುದು ರಾಜ್ ಮಾತುಗಳಲ್ಲಿ ಕೇಳಿಬರುತ್ತದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಗಣನೀಯವಾಗಿ ಮ.ನ.ಸೇ.ಯನ್ನು ಬೆಂಬಲಿಸಿರುವುದು ಈ ಮರಾಠಿ ಮತಗಳೆ ಎಂದು ರಾಜ್ ವಿಶ್ವಾಸದಿಂದ ಸಮರ್ಥಿಸಿಕೊಳ್ಳುತ್ತ, ನಮ್ಮ "ಮಹಾರಾಷ್ಟ್ರದಲ್ಲಿ ಮರಾಠತೆ" ಯಲ್ಲಿ ನಂಬಿಕೆಯಿಟ್ಟವರು, ವಲಸಿಗರಾಗಿದ್ದವರು ನೈಜ ರಾಷ್ಟ್ರೀಯತೆಯೆಂದರೆನೆಂದು ಅರಿತವರು ನನ್ನ ಪಕ್ಷಕ್ಕೆ ಮತ ಹಾಕುತ್ತಾರೆ ಮತ್ತು ಇಂತಹ ಮತಗಳು ಮಾತ್ರ ನನಗೆ ಸಾಕು ಎಂಬ ಎಂಬ ಅವರ ಆತ್ಮ ವಿಶ್ವಾಸದಿಂದ ಕೂಡಿದ, ಕೇವಲ ಮರಾಠಿ ಬಲದ 'ನವ ಮಹಾರಾಷ್ತ್ರ' ವನ್ನು ಕಟ್ಟುವ ಗಟ್ಟಿತನವನ್ನು ಅವರ ಹೇಳಿಕೆಗಳಿಂದ ಅರಿಯಬಹುದಾಗಿದೆ.
*****
ನಮ್ಮ ಕರ್ನಾಟಕವನ್ನು ಸಹ ಇದುವರೆಗೆ ಆಳಿದವರು, ಈಗ ಆಧಿಕಾರದಲ್ಲಿರುವವರು ನಮ್ಮ ನಾಡಿನ ಹಿತಕಾಯುವ ಕಾಯಕವೇ ಇಲ್ಲಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವವರ ಆಧ್ಯ ಕರ್ತವ್ಯ ಎಂದು ಮನಗಾಣದೆ, ಸುಭದ್ರ-ಸಮೃದ್ಧ ಕನ್ನಡ ನಾಡು ಕಟ್ಟುವೆಡೆ ಗಮನ ಹರಿಸದೆ, ಕೇಂದ್ರದದವರ ಅಡಿಯಾಳು, ಆಡಿಸಿಕೊಳ್ಳುವ ಗೊಂಬೆಗಳಾಗಿ, ಪೊಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ಮುಳುಗಿ ಹೋಗಿ, ತಮ್ಮತನ ಮತ್ತು ಬದ್ಧತೆಯನ್ನು ಮರೆತು ಎಲ್ಲಾ ರೀತಿಯಲ್ಲೂ ಕನ್ನಡ-ಕನ್ನಡಿಗ-ಕರ್ನಾಟಕ ದ ಹಿತಚಿಂತನೆಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.

ಕನ್ನಡಿಗರಿಗಾಗಿ, ಕನ್ನಡಕ್ಕೋಸ್ಕರ, ಕನ್ನಡಿಗರದೇ ಆದ ಎಡ-ಬಲ-ಕೇಂದ್ರದ ಹಂಗಿಲ್ಲದ ಕೇವಲ ಕನ್ನಡತ್ವದ ಸಿದ್ದಾಂತ ಪ್ರತಿಪಾದಿಸುವ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇಂದು ಹೆಚ್ಚಾಗಿದೆ. ಸಧ್ಯಕ್ಕೆ ಕನ್ನಡದ ಎಲ್ಲಾ ಸಮಸ್ಯೆಗಳಿಗೆ ಹೆಗಲು ಕೊಟ್ಟು, ಎಲ್ಲೆಡೆ ಜನಾಂದೋಲನ ಮೂಡಿಸುವಲ್ಲಿ ಸಫಲರಾಗಿ, ಕನ್ನಡಿಗರ ಆಶಾಕಿರಣವಾಗಿ ಬೇರೂರುತ್ತಿರುವ ಕ.ರ.ವೇ. ಯಂತಹ ಸಂಘಟನೆಗಳು ಈ ನಾಡಿನ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳಗುವಲ್ಲಿ ಸಹ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕಿದೆ. ಕನ್ನಡ ನಾಡು-ನುಡಿ ಪರವಾದ ಪ್ರಾಮಾಣಿಕ ಯುವ ಸಂಘಟನೆಯನ್ನು ಬೆಂಬಲ ಕೊಟ್ಟು ಬೆಳೆಸುವತ್ತ ಇಡೀ ಕನ್ನಡ ಸಮುದಾಯ ಕಂಕಣ ತೊಡಬೇಕಿದೆ.

****

Friday, September 18, 2009

ಕನ್ನಡಿಗ ಆಸೆಯ ಕಣ್ಣುಗಳಿಂದ ಇನ್ನೂ ಎದುರು ನೋಡುತ್ತಿದ್ದಾನೆ!

***

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ ಎ ಎಲ್) ತನ್ನ ಬೆಂಗಳೂರು ಸಂಕೀರ್ಣದಲ್ಲಿ ನೂರಕ್ಕೂ ಹೆಚ್ಚಾಗಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇವರ ಅಂತರ್ಜಾಲ ತಾಣ (www.hal-india.com)ದಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೩.೯.೨೦೦೯ ಎಂದು ತಿಳಿಸಲಾಗಿದೆ. ಯಾವುದೇ ಹೊಸ ಯೋಜನೆಗಳು ಒಂದು ಪ್ರದೇಶದಲ್ಲಿ ಕಾರ್ಯರೂಪಗೊಂಡಾಗ ಅಲ್ಲಿ ದೊರಕಬಹುದಾದಂತ ಕೆಲಸ-ಅವಕಾಶಗಳಿಗಾಗಿ ಸ್ಥಳೀಯ ಉದ್ಯೋಗಾಕಾಂಕ್ಷಿ ಕಾತರ ಮತ್ತು ನೀರೀಕ್ಷೆಗಳಿಂದ ಎದುರು ನೋಡುವುದು ಸಹಜವಾದದ್ದು. ಒಂದು ರಾಜ್ಯದ ಜನರ ಏಳಿಗೆ ಆಗುವುದು, ಅಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಆಗುವುದರಿಂದ ಮತ್ತು ಅಲ್ಲಿನ ಜನ ದುಡಿಮೆ ಮಾಡಲು ತೊಡಗಿದಾಗ. ಇಂಥ ಏಳಿಗೆಗೆ ಸಾಧನವಾಗಿ ಪ್ರತಿ ರಾಜ್ಯಗಳಲ್ಲೂ ಉಂಟಾಗುವ ಹೊಸ ಉದ್ದಿಮೆಗಳಲ್ಲಿ ಮತ್ತು ಹಾಲಿ ಇರುವ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಕೆಲಸದವಕಾಶ ಹೆಚ್ಚಿಸಿಸುವುದು ಅತ್ಯಗತ್ಯವಾದದ್ದು. ಸರ್ಕಾರಗಳು ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಬಹು ಪ್ರಮುಖ ಕಾರಣ ಜನಗಳಿಗೆ ಉದ್ಯೋಗ ಸೃಷ್ಟಿ ಆಗುವ ಕಾರಣಕ್ಕಾಗಿಯೇ ಮತ್ತು ಅದು ಆಯಾ ರಾಜ್ಯದ ಜನರ ಅನುಕೂಲಗಳಿಗೆ ಪರಿವರ್ತನೆಯಾಗಬೇಕಾದ್ದು ಬಹು ಮುಖ್ಯವಾದದ್ದು. ಇವು ರಾಜ್ಯಗಳನ್ನು ಸುಭದ್ರಗೊಳಿಸಿ ಒಕ್ಕೂಟವನ್ನು ಬಲಪಡಿಸುವ ಬಹುದೊಡ್ಡ ಸಾಧನ.

ಆದರೆ ಹೆಚ್ ಎ ಎಲ್ ತನ್ನ ಬೆಂಗಳೂರು ಸಂಕೀರ್ಣಕ್ಕಾಗಿ ಈಗ ಬಿಡುಗಡೆ ಮಾಡಿರುವ ನೇಮಕಾತಿ ಅರ್ಹತೆಯ ಸೂಚನೆಗಳಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯದವರಾಗಿರಬೇಕು, ಕಡ್ಡಾಯ ಕನ್ನಡ ಭಾಷೆಯ ಅರಿವಿರಬೇಕು ಎಂದು ಎಲ್ಲೂ ನಮೂದಾಗಿಲ್ಲದಿರುವುದನ್ನು ಕಾಣಬಹುದಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಹೆಚ್ ಎ ಎಲ್ ಸಂಸ್ಥೆಯ ಬೆಂಗಳೂರಿನ ಇದೇ ಸಂಕೀರ್ಣದಲ್ಲಿ ಆಗಿರುವ ೮೦೦ ಕ್ಕೂ ಹೆಚ್ಚಿನ ಇಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ ಕೆಲಸ ಪಡೆದ ಕನ್ನಡಿಗರ ಸಂಖ್ಯೆ ಬೆರಳಣಿಕೆಯಷ್ಟಿರಿವುದು ನಮ್ಮದೇ ಊರುಗಳಲ್ಲಿ ಕನ್ನಡಿಗನಿಗೆ ಉದ್ಯೋಗದಲ್ಲಿ ಆಧ್ಯತೆ ಇಲ್ಲದಿರುವುದು ಕಂಡು ಬರುತ್ತದೆ. ಈ ಸಮಸ್ಯೆ ಕೇವಲ ಕರ್ನಾಟಕ್ಕ ಮಾತ್ರ ಸೀಮಿತವಾಗಿರುವುದನ್ನು ಸಹ ಹೆಚ್ ಎ ಎಲ್ ನ ಅಂತರ್ಜಾಲ ತಾಣವೇ ನಮಗೆ ತಿಳಿಸುತ್ತದೆ! ಇತ್ತೀಚೆಗೆ ಒರಿಸ್ಸಾದ ಕೊರಪುಟ್ ನಲ್ಲಿರುವ ಹೆಚ್ ಎ ಎಲ್ ಘಟಕದಲ್ಲಿನ ಖಾಲಿ ಹುದ್ದೆಗೆ ನಡೆದ ನೇಮಕಾತಿಯಲ್ಲಿ ಬಹುತೇಕ ಸ್ಥಳೀಯರೆ ಆಯ್ಕೆಯಾಗಿರುವುದು ಈ ಮೂಲಕ ಮನವರಿಕೆಯಾಗುತ್ತದೆ.

ಕೆಲದಿನಗಳ ಹಿಂದೆ ಕೇಂದ್ರ ರೈಲ್ವೇ ಸಚಿವರು ಸ್ಥಳೀಯರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲು ನೀಡುವುದನ್ನು ಇಲಾಖೆ ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ ಮತ್ತು ಲಿಖಿತ ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸುವುದರ ಬಗ್ಗೆ ತೀರ್ಮಾನಿಸಲಾಗುವುದರ ಬಗ್ಗೆ ವರದಿಯಾಗಿದೆ. ಹೆಚ್ ಎ ಎಲ್ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರದ ಸಾರ್ವಜನಿಕ ಸಂಸ್ಥೆಗಳು ಸಹ ಈ ಮೇಲ್ಪಂಕ್ತಿಯನ್ನು ಅನುಸರಿರಿಸುವುದು ಭಾಷಾವಾರು ಒಕ್ಕೂಟದ ಆಧಾರದಲ್ಲಿ ರಚಿತವಾಗಿರುವ ಭಾರತದ ಸಂವಿಧಾನಾವನ್ನು ಗೌರವಿಸುವ ಜವಾಬ್ದಾರಿಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರದ ಆಯಾ ರಾಜ್ಯದ ಘಟಕಗಳಿಗೆ ಬೇಕಾದ ಮಾನವ ಸಂಪನ್ಮೂಲಗಳನ್ನು ಆಯಾ ರಾಜ್ಯಗಳಿಂದಲೇ ಪೂರೈಕೆ ಮಾಡಿಕೊಳ್ಳುವಂತಹ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವುದರಿಂದ ಅನವಶ್ಯಕ ವಲಸೆಯಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ.

ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿನ (ಮುಖ್ಯವಾಗಿ ಬೆಂಗಳೂರು ನಗರದಲ್ಲಿ) ಕೇಂದ್ರ ಸರ್ಕಾರದ ಸಾವರ್ಜನಿಕ ಸಂಸ್ಥಗಳಲ್ಲಿ, ಖಾಸಗೀ ಕ್ಶೇತ್ರಗಳಲ್ಲಿ ನೇಮಕವಾಗಿರುವ ಉದ್ಯೋಗಿಗಳ ಸಂಖ್ಯೆ ಮತ್ತು ಇದರಲ್ಲಿ ಕನ್ನಡಿಗರು ಎಷ್ಟು ಎಂಬ ಮಾಹಿತಿ ಹೆಕ್ಕಿ ತೆಗೆದು ಕನ್ನಡಿಗರ ಮುಂದಿರಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಸ್ಥಳೀಯರಿಗೇ ಉದ್ಯೋಗ ದೊರಕಿಸಿಕೊಡುವ "ಉದ್ಯೋಗ ನೀತಿಯನ್ನು" ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಮತ್ತೊಂದು ವಿಷಯವೆಂದರೆ, ಕನ್ನಡ ನಿರುದ್ಯೋಗಿಗಳ ಹಿತ ಕಾಯಲು ಜಾರಿಯಾಗಬೇಕಾಗಿರುವ ಮಹಿಷಿ ವರದಿಯನ್ನು ತುಕ್ಕು ಹಿಡಿಸಿ ಮಲಗಿಸಿಡಲಾಗಿದೆ. ಅದಕ್ಕೆ ಸಾಣಿ ಹಿಡಿದು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯಿರುವ ನಾಯಕ ಯಾರೆಂದು ಕನ್ನಡಿಗ ಆಸೆಯ ಕಣ್ಣುಗಳಿಂದ ಇನ್ನೂ ಎದುರು ನೋಡುತ್ತಿದ್ದಾನೆ.

******************************************

ಈ ಅಹವಾಲು ಬೆಂಗಳೂರಿನ 'ಹೊಸದಿಗಂತ' ಮತ್ತು 'ಉದಯವಾಣಿ' ಯಲ್ಲಿ ಪ್ರಕಟವಾಗಿದೆ.






***

Thursday, September 17, 2009

ಜಾಗೃತ ಕನ್ನಡಿಗರ ಪತ್ರಗಳು ನಿಮ್ಮ ಗಮನಕ್ಕೆ.

ಪ್ರತಿ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ನಡೆಯುವ ಭಾರತದ ಕೇಂದ್ರ ಸರ್ಕಾರಿ ಕೃಪಾಪೋಷಿತ 'ಹಿಂದಿ ಸಪ್ತಾಹ', 'ಹಿಂದಿ ದಿವಸ್' ಏಕೆ? ಇದು ಎಷ್ಟು ಸರಿ? ಹಿಂದಿ ಕಲಿಸಲು ಬಲವಂತವೇಕೆ? ತ್ರಿಭಾಷಾ ಸೂತ್ರಕ್ಕೆ ಏಕೆ ತಿಲಾಂಜಲಿ? ಎಂದು ಬೆಂಗಳೂರಿನ ಪತ್ರಿಕೆಗಳ ಮೂಲಕ ಪ್ರಶ್ನಿಸಿದ ಕೆಲವು ಜಾಗೃತ ಕನ್ನಡಿಗರ ಪತ್ರಗಳು ನಿಮ್ಮ ಗಮನಕ್ಕೆ.



















ಬಲವಂತದ ಹಿಂದಿ ಹೇರಿಕೆ ನಮಗೆ ಬೇಡ - ಹಿಂದಿ ಭಾಷಿಕರಿಗೆ ಅನ್ವಯಿಸದ ಮೂರು ಭಾಷೆ ಸೂತ್ರ ನಮಗೆ ಮಾತ್ರ ಏಕೆ? ಎಂಬ ಪ್ರಶ್ನೆ-ಧ್ವನಿ ನಿಮ್ಮೆಲ್ಲರಿಂದಲೂ ಹೊರಡಲಿ

***

Wednesday, September 16, 2009

ಹಿಂದಿ ರಾಜ್ಯದವರಿಗಿಲ್ಲದ ಮೂರು ಭಾಷೆ ಸೂತ್ರ ನಮಗೆ ಮಾತ್ರ ಏಕೆ?

ಪ್ರತಿವರ್ಷ ಸೆಪ್ಟಂಬರ್ ೧೪ ರಂದು ಭಾರತದಾದ್ಯಂತ ಕೇಂದ್ರ ಸರ್ಕಾರದ ಬೆಂಬಲದಲ್ಲಿ "ಹಿಂದಿ ದಿವಸ್" ಆಚರಿಸಲಾಗುತ್ತದೆ. ಈ ಹಿಂದಿ ದಿವಸ್ ಬರುವ ಕೆಲದಿನಗಳಿಗೆ ಮೊದಲು, ಹಿಂದಿ ಕಾರ್ಯಾಗರಗಳು, ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಮನರಂಜನೆಗಳನ್ನು ಆಯೋಜಿಸುವ ಮೂಲಕ ವ್ಯಾಪಕವಾಗಿ ಎಲ್ಲೆಡೆ ಹಿಂದಿ ಪ್ರಚಾರಗಳನ್ನು ಕೈಗೊಳ್ಳಲಾಗುತ್ತದೆ. ಇದಕ್ಕೆಪೂರಕವಾಗಿ ಎಲ್ಲಾ ಕೇಂದ್ರ ಸರ್ಕಾರದ ಕಚೇರಿಗಳು, ಉದ್ದಿಮೆಗಳು, ನಿಗಮ ಮಂಡಳಿಗಳು,ಬ್ಯಾಂಕುಗಳು, ವಿಮಾ ಕಚೇರಿಗಳು ವರ್ಷವಿಡೀ ಹಿಂದಿ ಪ್ರಚಾರದ ಕಾರ್ಯಗಳಲ್ಲಿ ಕಟ್ಟುನಿಟ್ಟಾಗಿ ತೊಡಗಿಸಿಕೊಳ್ಳಲು ನಾನ ರೀತಿಯ ವ್ಯವಸ್ಥೆಗಳನ್ನು ಆದೇಶಗೊಳಿಸಲಾಗಿದೆ. ಒಂದುಸಣ್ಣ ಉದಾಹರಣೆ ನೀಡಬೇಕೆಂದರೆ, ನಾವು ಈ ಮೇಲಿನ ಯಾವುದೇ ಕಚೇರಿಗಳಿಗೆ ಯಾವುದೇ ದಿನಹೋದಲ್ಲಿ, ಅಲ್ಲಿನ ಒಳಭಾಗದ ಸೂಚನಾ ಫಲಕದಲ್ಲಿ ಅವರು ದಿನಕ್ಕೊಂದು ಹಿಂದಿ ಪದವನ್ನುಪರಚಯಿಸುವ ಪದ್ಧತಿಯನ್ನು ಕಾಣಬಹುದಾಗಿದೆ. ಈ ರೀತಿ ಹಿಂದಿ ಪ್ರಚಾರಕ್ಕಾಗಿ ಸಮಯಮೀಸಲಿಡಲು ಇಲ್ಲಿ ಅವಕಾಶಗಳಿವೆ, ಈ ರೀತಿ ಹಿಂದಿ ಪ್ರಚಾರವನ್ನು ಅಚ್ಚು ಕಟ್ಟಾಗಿಮಾಡಿದವರಿಗೆ ಭಡ್ತಿಯಲ್ಲಿ ಸಹ ಮೀಸಲಿದೆ. ಕೇಂದ್ರ ಸರ್ಕಾರ ಹಲವಾರು ಕೋಟಿ ರೂಗಳನ್ನು ಈಕಾರ್ಯಕ್ಕೆ ಪ್ರತಿ ವರ್ಷ ಮೀಸಲಿಟ್ಟು ವ್ಯಯಿಸುತ್ತದೆ.

ಭಾರತ ಗಣತಂತ್ರದ ಒಕ್ಕೂಟ ವ್ಯವಸ್ಥೆಯ ಇತರ ಅಧಿಕೃತ ಭಾಷೆಗಳಿಗಿರುವ ಸ್ಥಾನಮಾನವೇಹಿಂದಿಗೂ ಸಹ ಇರುವುದು ಎಂಬುದನ್ನು ನಾವೆಲ್ಲರೂ ಗಮನಿಸಬೇಕಿದೆ. ಆದರೆ "ಹಿಂದಿ ಕೇಂದ್ರಸರ್ಕಾರದ ಆಡಳಿತ ಭಾಷೆ, ಅದು ನಮ್ಮೆಲ್ಲರ ರಾಷ್ಟ್ರ ಭಾಷೆ ಮತ್ತು ಹಿಂದಿ ಬಲ್ಲವ ಮಾತ್ರರಾಷ್ಟ್ರ ಪ್ರೇಮಿ" ಎಂಬ ಪೊಳ್ಳು ಪ್ರಚಾರವನ್ನು ಮಾಡುವುದರ ಮೂಲಕ, ಹಿಂದಿಗಿಂತಲೂ ಪ್ರಾಚೀನವೂ, ವೈವಿಧ್ಯಮಯವೂ ಆದ ಭಾರತದ ಇತರ ಭಾಷೆ ಮತ್ತು ಸಂಸ್ಕೃತಿಯನ್ನು ಕಡೆಗಣಿಸಿಕೇವಲ ಹಿಂದಿ ಭಾಷೆಗೆ ಮಾತ್ರ ಪ್ರಾಧಾನ್ಯತೆ ನೀಡಿ, ಬಲವಂತವಾಗಿ ಆ ಭಾಷೆಯದಿನಾಚರಣೆಯನ್ನು ಭಾರತದೆಲ್ಲೆಡೆ ಅಚರಿಸುತ್ತಿರುವುದು ಎಷ್ಟು ಸಮಂಜಸ?

ನಾವು ಇಂಗ್ಲೀಷನ್ನು ಇನ್ನೂ ಅಪ್ಪಿಕೊಂಡು, ಒಪ್ಪಿಕೊಂಡಿರುವುದು, ಗುಲಾಮಗಿರಿಯೆಷ್ಟೋ ಅಷ್ಟೇ ಗುಲಾಮಗಿರಿ ಹಿಂದಿಯೇತರರು ಹಿಂದಿ ಸಾಮ್ರಾಜ್ಯವಾದವನ್ನು ಬೆಳಸಲು, ಪಸರಿಸಲುಬಿಟ್ಟು ಬಿಡುವುದು. ಇಂಗ್ಲೀಷಿಗೆ ಸಧ್ಯಕ್ಕಿರುವ ಜ್ಞಾನ-ವಿಜ್ಞಾನಗಳ ಭಾಷೆ ಎಂಬಸ್ಥಾನವನ್ನು ಕನ್ನಡಿಗರು ಮಾತ್ರ ಏನೂ ನಂಬಿಲ್ಲ, ನಮ್ಮಷ್ಟೇ ಇಂಗ್ಲೀಷ್-ದಾಸರು ಹಿಂದಿಯವರೂ ಸಹ ಆಗಿದ್ದಾರೆ. ನಾವು ಹಿಂದಿ ಕಲಿತು ಉತ್ತರ ಭಾರತಕ್ಕೆ ವಲಸೆ ಹೋಗಿ ಹಿಂದಿ ರಾಜ್ಯಗಳಲ್ಲಿ, ಹಿಂದಿಯವರಾಗುತ್ತೇವೆ ಎನ್ನುವುದು ಸರಿಯಾದುದೆ. ಅದೇ ತಮಿಳುನಾಡು, ಆಂದ್ರಾ, ಓರಿಸ್ಸಾ, ಗುಜರಾತ, ಬಂಗಾಳಗಳಿಗೆ ನಾವು ವಲಸೆ ಹೋಗಿನೆಲಸಬೇಕಾಗಿ ಬಂದಾಗ ಆಯಾ ರಾಜ್ಯಗಳ ಭಾಷೆ ಕಲಿತು, ಅಲ್ಲಿಯ ಸಂಸ್ಸೃತಿಯನ್ನು ಅರಿತು ಆ ಜನರೊಡನೆ ಬೆರೆತು ಮುಖ್ಯವಾಹಿನಿಯಲ್ಲಿ ಮುನ್ನಡೆಯುವುದು ಮಾತ್ರ ಸರಿಯಾದಮಾರ್ಗವಲ್ಲವೇ? ಹಿಂದಿ ಜತೆಗೆ ನಮಗೆ ಇಂಗ್ಲೀಷ್ ಸಾಕು, ಕನ್ನಡ ಭಾಷೆ ನಮಗೆ ಬೇಡ ಎನ್ನುವ ಹಿಂದಿಯವರಿಂದ ಕನ್ನಡಿಗರ ಮೇಲೇಕೆ ಹಿಂದಿ ಹೇರಿಕೆಯಾಗುತ್ತಿದೆ? ಹಿಂದಿಭಾಷಿಕರಿಗೆ ಬೇಡದ ಈ ತ್ರಿಭಾಷ ಸೂತ್ರ ನಮಗೆ ಮಾತ್ರ ಏಕೆ ಎಂದು ನಮ್ಮೆಲ್ಲರ ಮನದಲ್ಲಿ ಸಹಜವಾಗಿ ಮೂಡಬೇಕಾಗಿರುವ ಪ್ರಶ್ನೆಯಿದಲ್ಲವೆ? ಹಿಂದಿ ಭಾಷೆಯ ಅಭಿವೃದ್ಧಿ ಮಾಡಲು,ಅದನ್ನು ಬೆಳೆಸಲು ಹಿಂದಿ ರಾಜ್ಯಗಳಾದ ದೆಹಲಿ, ಮದ್ಯಪ್ರದೇಶ, ಉತ್ತರ ಮತ್ತು ಇತರ ಪ್ರದೇಶಗಳಿವೆ. ಅವುಗಳು ಅಲ್ಲಿ ಬೆಳವಣಿಗೆಯಾಗಬೇಕಾಗಿರುವುದು ಸಹಜವೇ. ಅದರಂತೆ ಕನ್ನಡನಾಡಿನ ಸಂಸ್ಕೃತಿ, ಧರ್ಮ ಕನ್ನಡ ಭಾಷೆಯನ್ನು ಅನುವರ್ತಿಸುವಂತದ್ದು, ಕೇಂದ್ರ ಸರ್ಕಾರ ಹಿಂದಿಯನ್ನು ಪ್ರಚಾರ ಮಾಡುವುದು ಬೆಳೆಸುವುದನ್ನು ಹಿಂದಿ ರಾಜ್ಯಗಳಿಗೆ ಮಾತ್ರಮೀಸಲಿರಿಸಿ ಅದರಂತೆಯೇ ಕರ್ನಾಟಕದಲ್ಲಿ ಕನ್ನಡ, ಕೇರಳದಲ್ಲಿ ಮಲಯಾಳಂ ಗೆ ಪ್ರಚಾರನೀಡಲು ಮಾತ್ರ ಮುಂದಾಗಬೇಕಿದೆ.

ಮನುಷ್ಯ ಆಭಿಮಾನ ಜೀವಿ, ಅವನ ಜೀವನದಲ್ಲಿ ಉಂಟಾಗುವ ಮುಖ್ಯವಾದ ಪ್ರಗತಿ ಅಭಿಮಾನದಿಂದಲೇ ಸಾಧನೆಯಾಗುತ್ತದೆ. ದೇಶಾಭಿಮಾನ, ಆತ್ಮಾಭಿಮಾನ, ಕಲಾಭಿಮಾನ, ಭಾಷಾಭಿಮಾನ ಇವುಗಳೇ ಮನುಷ್ಯನ ಜೀವನದ ಉಸಿರು. ಹೀಗಾಗಿ ನಮ್ಮ ಜೀವನ ಹಾಗು ರಾಷ್ಟ್ರದ ಸಂಸ್ಕೃತಿಯ ಉನ್ನತಿಗೆ ಆಯಾ ರಾಜ್ಯದ ಭಾಷೆಗಳಿಗೆ ಸಮನಾದ ಗೌರವವನ್ನು ಸಲ್ಲಿಸುವುದನ್ನು ಈ ರಾಷ್ಟ್ರದಲ್ಲಿರುವವರೆಲ್ಲರೂ ಮುಖ್ಯವಾಗಿ ಕೇಂದ್ರ ಸರ್ಕಾರದ ಹಿಂದಿ ಪ್ರಚಾರ ಪ್ರಿಯರುಅರಿಯಬೇಕಿದೆ. ಇದೇ ನಾವು ಈ ಒಕ್ಕೂಟ ವ್ಯವಸ್ಥೆಗೆ ತೋರುವ ಅತಿದೊಡ್ಡ ಗೌರವವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ಕೃಪಾಪೋಷಿತ "ಹಿಂದಿದಿವಸ್" ಅನ್ನು ಕನ್ನಡಿಗರೆಲ್ಲರೂ ಸಾಂಕೇತಿಕವಾಗಿ ಪ್ರತಿಭಟಿಸಬೇಕಿದೆ. ನಮ್ಮ ಈ ಹಿಂದಿವಿರೋಧವನ್ನು ನಾವು ನಮ್ಮ ಕನ್ನಡ ಪ್ರೀತಿಗೆ ಸಮೀಕರಿಸಬೇಕಿದೆ. ಜತೆಗೆ ನಮ್ಮ ಭಾಷೆಯಬಗ್ಗೆ ಅಭಿಮಾನ ಮೂಡಿಸಿಕೊಳ್ಳಲು ಕನ್ನಡ ನಮ್ಮ ರಾಷ್ಟ್ರ ಭಾಷೆಎಂದು ಹೇಳುವಪರಿಪಾಠವನ್ನು ಬೆಳೆಸಿಕೊಳ್ಳಬೇಕಿದೆ.


***

Friday, September 11, 2009

ವಾಸ್ಕೋಡಗಾಮ ಚೆನ್ನೈ ರೈಲಿನಲ್ಲಿ ಹಿಂದಿ ಯಾಕೆ?

ನೆನ್ನೆ ರೈಲು ಸಂಖ್ಯೆ ೭೩೧೨ ರಲ್ಲಿ (ವಾಸ್ಕೋಡಗಾಮದಿಂದ - ಚೆನ್ನೈ) ಬೆಂಗಳೂರಿಗೆ ಪ್ರಯಾಣ ಮಾಡಿದೆ. ರಾತ್ರಿ ರೈಲು ಹುಬ್ಬಳ್ಳಿ ದಾಟಿದ ನಂತರ ಮಲಗಲು ಸಿದ್ಧತೆ ಮಾಡಿಕೊಳ್ಳುವಾಗ, ರೈಲ್ವೆಯವರು ಮಲಗಲು ಅನುಕೂಲ ಮಾಡಿಕೊಡುವ ಸಲುವಾಗಿ ಕಂಬಳಿ, ದಿಂಬು ಮತ್ತು ಹೊದಿಕೆ ಇಟ್ಟದ್ದು ಕಣ್ಣಿಗೆ ಬಿತ್ತು. ೨ ಬಿಳಿ ಹೊದಿಕೆಗಳನ್ನು ಅಚ್ಚುಕಟ್ಟಾಗಿ ಒಂದು ಕಾಗದದ ಕವಚದಲ್ಲಿ ಇಟ್ಟಿದ್ದರು.


ಆ ಕಾಗದದ ಕವಚದ ಮೇಲಿನ ಬರಹ ಕಂಡಾಗ ನಾನು ಬೆಂಗಳೂರಿನ ರೈಲು ಹತ್ತಿದ್ದೀನ ಎಂದು ಒಂದು ಕ್ಷಣ ಅನುಮಾನ ಮೂಡಿತು. ಎಚ್ಚೆತ್ತ ಮನಕ್ಕೆ ಹೊಳೆದದ್ದು ನಮ್ಮ ರೈಲು ಇಲಾಖೆಯ "ಹಿಂದಿ ಹೇರಿಕೆಯ" ಮುಂದುವರೆದ ಮತ್ತೊಂದು ದರ್ಶನ. ಆ ಕಾಗದದ ಮೇಲೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ವಿವರಗಳನ್ನು ಮುದ್ರಿಸಿದ್ದರು. ಅದು ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿತ್ತು.


ಈ ಕಾಗದದ ಕವಚವನ್ನು ಜಂಟಿಯಾಗಿ ಬೆಂಗಳೂರಿನ ನೈರುತ್ಯ ರೈಲು ವಲಯ ಮತ್ತು ಮಾಚಿದೇವ ಗ್ರಾಮೋದ್ಯೋಗ ಹಾಗು ವಿದ್ಯಾ ಸಂಸ್ಥೆಯವರು (ಈ ಸಂಸ್ಥೆಗೂ ಈ ಕವಚದ ಬರಹಕ್ಕೂ ಏನು ಸಂಬಂಧವೋ ತಿಳಿಯಲಿಲ್ಲ) ಹೊರಡಿಸಿರುವುದು ಕಂಡು ಬರುತ್ತದೆ.


ಇವತ್ತು ಬೆಂಗಳೂರಿಗೆ ಬಂದ ಮೇಲೆ ಕವಚದ ಮೇಲೆ ನಮೂದಿಸಿದ್ದ ದೂರವಾಣಿ ಸಂಖ್ಯೆಗೆ (೯೪೪೮೦೭೭೭೯೦) ಕರೆ ಮಾಡಿದೆ. ಜಿ.ಡಿ ಗೋಪಾಲ್ ಎಂಬುವವರು ಮಾತಿಗೆ ಸಿಕ್ಕರು. ಅವರು ಮಾಚಿದೇವ ಗ್ರಾಮೋದ್ಯೋಗ ಹಾಗು ವಿದ್ಯಾ ಸಂಸ್ಥೆಯವರಂತೆ, ಇದು ಯಶವಂತಪುರದಲ್ಲಿರುವ ಲಗ್ಗೆರೆಯಲ್ಲಿದೆಯಂತೆ. ಅವರಿಗೆ ನಾನು ಕೇಳಿದೆ ಪ್ರಶ್ನೆ

  • ರೈಲು ಇಲಾಕೆ ಮೂರು ಭಾಷೆ ಸೂತ್ರ ಅನುಸರಿಸಬೇಕು ಏಕೆ ಇದರಲ್ಲಿ ಕನ್ನಡ ಇಲ್ಲ
  • ರೈಲು ಇಲಾಖೆ ಮೂರು ಭಾಷೆ ಅನುಸರಿಸಬೇಕಾಗಿದ್ರೆ ಇಲ್ಲಿ ಕೊಂಕಣಿ-ಕನ್ನಡ ಮತ್ತು ತಮಿಳು ಇರಬೇಕಿತ್ತು. (ಏಕೆಂದ್ರೆ ಈ ರೈಲು ಸಂಚರಿಸುತ್ತಿರುವುದು ಗೋವ-ಕರ್ನಾಟಕ-ತಮಿಳುನಾಡು ನಡುವೆ)
ನಾನು ಮತ್ತೆ ಮಾತಾಡೋದರೊಳಗೆ ಆಸಾಮಿ ಇದನ್ನು ಡಿಪಾರ್ಟ್ ಮೆಂಟ್ ಗೆ ತಿಳಿಸ್ತೀನಿ ಅಂತ ಪೋನು ಮಡಗಿಬಿಟ್ಟರು. ಬೆಂಗಳೂರಿನ ರೈಲು ನಿಲ್ದಾಣದಲ್ಲಿ ನೀಡುವ ಟಿಕೆಟ್ಟುಗಳಲ್ಲಿ ಕನ್ನಡ ಮಾಯವಾಗಿದೆ. ರೈಲು ಡಬ್ಬಿಯ ಮೇಲೆ ಅಂಟಿಸುವ ಪ್ರಯಾಣಿಕರ ಪಟ್ಟಿ ಕನ್ನಡದಲ್ಲಿಲ್ಲ. ಇತ್ತೀಚೆಗೆ ಗಣಕ ಪರದೆಯಲ್ಲಿ ಟಿಕೆಟ್ ಗಾಗಿ "ಕಾಯುವ ಪ್ರಯಾಣಿಕರ" ಪಟ್ಟಿ ಪ್ರಕಟವಾಗುತ್ತಿದೆ. ಅದರಲ್ಲಿ ಕನ್ನಡ ಇಲ್ಲ. ಎಲ್ಲೆಡೆ ಇಂಗ್ಲೀಷ್ ಜತೆ ಹಿಂದಿ ರಾರಾಜಿಸುತ್ತಿದೆ. ಕರ್ನಾಟಕದ ಮೂರು ಮುಖ್ಯ ನಿಲ್ದಾಣಗಳಾದ ಬೆಂಗಳೂರು-ಮೈಸೂರು-ಹುಬ್ಬಳ್ಳಿಯನ್ನು ಒಳಗೊಂಡಿರುವ ನೈರುತ್ಯ ರೈಲ್ವೆ ನಿರ್ಮಾಣವಾಗಿರುವುದು ಕರ್ನಾಟಕ ಮತ್ತು ಕನ್ನಡಿಗರ ಅನುಕೂಲಕ್ಕಾಗಿ ಇಲ್ಲಿನ ಹೆಚ್ಚಿನ ರೈಲುಗಳಲ್ಲಿ ಪ್ರಯಾಣಿಸುವವರು ಕನ್ನಡಿಗರು. ರೈಲುಗಳಲ್ಲಿ ಪ್ರಯಾಣಿಸುವ ಕನ್ನಡ ಗ್ರಾಹಕರಾದ ನಾವು ಕನ್ನಡಿಗರಿಗಾಗಿ ರೈಲುಗಳಲ್ಲಿ ಆಗಿರುವ ಅನ್ಯಾಯಗಳನ್ನು ಸಂಬಂಧ ಪಟ್ಟವರ ಗಮನಕ್ಕೆ ತರಬೇಕಾಗಿರುವುದು ಸಹ ನಮ್ಮ ಕರ್ತವ್ಯವಾಗಿದೆ.


ಈಗೋ ನೋಡಿ ನಾನು ಗಮನಿಸಿದ ಜಾಹೀರಾತು ಹೀಗಿತ್ತು. ನೀವು ಸಹ ಕರೆ ಮಾಡಿ ಯಾಕೆ ಇಲ್ಲಿ ಕನ್ನಡ ಇಲ್ಲಾ ಅಂತ ಕೇಳ್ತೀರಾ?







****

Monday, September 7, 2009

ಅನಕೃ ಕಂಡಕೊಂಡಿದ್ದ ಅನೇಕತೆಯಲ್ಲಿನ ಏಕತೆ.

ಭಾರತ ಎಂಬ ನಮ್ಮ ಇಂದಿನ ಭೂ ಪ್ರದೇಶವನ್ನು ಬ್ರಿಟೀಷರ ಆಳ್ವಿಕೆಯಿಂದ ಬಿಡುಗಡೆಗೊಳಿಸಲು ಮತ್ತು ಹಲವು ಜನಾಂಗ-ಭಾಷೆ-ಸಂಸ್ಕೃತಿಗಳನ್ನು ಹೊಂದಿದ್ದ ಆ ಭೂ ಪ್ರದೇಶವನ್ನು ಅಂದು 'ಭಾರತ' ಎಂಬ ಹೆಸರಿನಲ್ಲಿ ಒಂದು ದೇಶವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದವರು, ಈ ಮಹತ್ತರವಾದ ಕೆಲಸಕ್ಕೆ ಎಲ್ಲಾ ಜನರನ್ನು ಒಗ್ಗೂಡಿಸಲು ಏಕ ಭಾಷೆ-ಏಕ ಲಿಪಿ ಅವಶ್ಯಕ ಎಂದು ಹೇಗೆ ಅವರಿಗೆ ಮನವರಿಕೆಯಾಯಿತೋ ಗೊತ್ತಿಲ್ಲ ಆದರೆ ಅಂದಿನಿಂದ ಈ "ಹಿಂದಿ" ಭಾಷೆಯನ್ನು ಎಲ್ಲೆಡೆ ಪ್ರಚಾರ ಮಾಡುವ ಕೆಲಸ ಶುರುವಾಯಿತು. ಇದಕ್ಕೆ ಬ್ರಿಟೀಷರ ಹಿಡಿತದಲ್ಲಿದ್ದ ಈ ಭೂ ಪ್ರದೇಶದಲ್ಲ ಹೆಚ್ಚಿನ ಜನರು ಮಾತನಾಡುವ ಭಾಷೆ ಅದೆಂದು ಕಾರಣ ಕೊಟ್ಟಿರುವುದನ್ನು ನಾವು ಕಾಣಬಹುದು!

೧೯೩೦-೪೦ ರ ದಶಕದಲ್ಲಿ ಈ ಹಿಂದಿ ಪ್ರಚಾರ ಕರ್ನಾಟಕಕ್ಕೂ ಕಾಲಿಟ್ಟಾಗ, ಬಹುಷ: ಅದನ್ನು ಮೊದಲಿಗೆ ವಿರೋಧಿಸಿದವರು ಕನ್ನಡ ಕಾದಂಬರಿ ಸಾರ್ವಭೌಮ, ಕನ್ನಡ ಚಳವಳಿ ಪಿತಾಮಹ ಅನಕೃ ಎಂದು ನಮಗೆ ಇಂದು ಲಭ್ಯವಿರುವ ದಾಖಲೆಗಳಿಂದ ಕಂಡು ಬರುತ್ತದೆ. ೧೯೪೪ ರಲ್ಲಿ ಪ್ರಕಟವಾಗಿರುವ ಅನಕೃ ಅವರ "ನನ್ನನ್ನು ನಾನೆ ಕಂಡೆ" ಎಂಬ ಗ್ರಂಥದಲ್ಲಿ ಹಿಂದಿ ಹುಟ್ಟುಹಾಕಿದ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಹಿಂದಿ ಕುರಿತಾಗಿ ಸುಮಾರು ೬೫ ವರ್ಷಗಳ ಹಿಂದೆಯೇ ಅನಕೃ ಅವರು ಯಾವ ರೀತಿ ಯೋಚಿಸಿದ್ದರು ಮತ್ತು ಅವರ ದೂರದರ್ಶಿತ್ವ ಎಂತಹುದೆಂದು ಮನವರಿಕೆಯಾಗುತ್ತದೆ. ಹಿಂದಿ ಭಾಷೆ ಒಂದೆ ಭಾರತಕ್ಕೆ ಪರಿಹಾರವಲ್ಲ. ಸ್ವಾಂತಂತ್ರ್ಯ ದೊರೆತ ಮೇಲೆ ನಮಗೆ ಅಂತರರಾಷ್ಟ್ರೀಯ ಸಂಪರ್ಕ ನಿಕಟವಾಗುತ್ತದೆ. ಆಗ ಜಗತ್ತಿನ ಭಾಷೆಯ ಹೊರೆಯೂ ನಮ್ಮ ಮೇಲಾಗುತ್ತದೆ ಎಂದು ಅನಕೃ ಅಂದೇ ಮನಗಂಡಿದ್ದು ತಿಳಿದುಬರುತ್ತದೆ.

'ನನ್ನನ್ನು ನಾನೆ ಕಂಡೆ' ಪುಸ್ತಕ ಸಹ ಅಂದಿನ ಸಮಯಕ್ಕೆ ಹೊಸ ಪ್ರಯೋಗ ಎಂದೆ ಹೇಳಬಹುದಾಗಿದೆ. ಇದರಲ್ಲಿ ಅನಕೃ ಅವರು ತಮಗೆ ತಾವೆ (ಸಂದರ್ಶಕನಾಗಿ) ಪ್ರಶ್ನೆ ಹಾಕಿಕೊಳ್ಳುತ್ತ ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅನಕೃ ಈ ಕೃತಿಯನ್ನು ಸ್ವಯಂ ಸಂದರ್ಶನ ಕಲೆ ಎಂದು ಸಹ ಕರೆದಿದ್ದಾರೆ.

********

ಸಂದರ್ಶಕ: ಹಿಂದೂಸ್ಥಾನಕ್ಕೆ ಏಕ ಭಾಷೆ - ಏಕ ಲಿಪಿ ಬೇಕೆಂಬುದರ ಬಗ್ಗೆ ತಮ್ಮ ಅಭಿಪ್ರಾಯವೇನು?
ಅನಕೃ: ನಾನು ಹಲವು ಸಲ ಆ ಬಗ್ಗೆ ಬರೆದಿದ್ದೇನೆ. ಆದರೆ ನನ್ನ ಹಿಂದಿನ ವಿಚಾರಗಳು ಕೆಲವು ಸ್ವಲ್ಪ ಮಾರ್ಪಾಟು ಹೊಂದಿವೆ.
ಸಂದರ್ಶಕ: ಏಕೆ?
ಅನಕೃ: ಅನುಭವ, ವ್ಯಾಸಂಗ ಮತ್ತು ಕಾಲ ಪರಿವರ್ತನೆಗಳಿಂದ
ಸಂದರ್ಶಕ: ಹಾಗಾದರೆ ಈಗ ನೀವು ಏನು ಹೇಳುತ್ತೀರಿ
ಅನಕೃ: ಸಾಕ್ರೆಟಿಸನ ಮಾರ್ಗವನ್ನವಲಂಬಿಸಿ ಕೆಲವು ಪ್ರಶ್ನೆಗಳನ್ನು ನಾನು ಕೇಳುತ್ತೇನೆ. ಸಮಂಜಸವಾಗಿ ಉತ್ತರ ಹೇಳಬೇಕು.
ಸಂದರ್ಶಕ: ಪ್ರಯತ್ನಿಸುತ್ತೇನೆ.
ಅನಕೃ: ಏಕ ಭಾಷೆ ಯಾರಿಗೆ ಬೇಕು?
ಸಂದರ್ಶಕ: ಒಂದು ರಾಷ್ಟ್ರಕ್ಕೆ
ಅನಕೃ: ಹಿಂದೂಸ್ಥಾನವು ಈಗ ಒಂದು ರಾಷ್ಟ್ರವಾಗಿದೆಯೋ?
ಸಂದರ್ಶಕ : ಸಾಂಸ್ಕೃತಿಕ ದೃಷ್ಟಿಯಿಂದ ಆಗಿದೆ. ರಾಜಕೀಯ ದೃಷ್ಟಿಯಿಂದ ಆಗಿಲ್ಲ
ಅನಕೃ: ಇನ್ನು ಹಿಂದೂಸ್ಥಾನ ಸ್ವಾತಂತ್ರ್ಯವನ್ನು ಗಳಿಸಿಕೊಂಡು ಒಂದು ರಾಷ್ಟ್ರವಾದ ಮೇಲೆ ತಾನೆ ಈ ಪ್ರಶ್ನೆ ಏಳುವುದು?
ಸಂದರ್ಶಕ: ಹೌದು, ಆದರೆ ಅದಕ್ಕೆ ಏಕ ಭಾಷೆ ಒಂದು ಸಾಧನವಲ್ಲವೇ?
ಅನಕೃ: ಸ್ವತಂತ್ರವಾಗಿರುವ ಯಾವ ದೇಶದಲ್ಲಿ ಏಕ ಭಾಷೆ ಪ್ರಚಾರದಲ್ಲಿದೆ ಹೇಳಿ? ಅಮೇರಿಕಾ, ಸ್ವಿಟ್ಚರ್ಲೆಂಡ್, ಇಂಗ್ಲೆಂಡ್, ರಷ್ಯಾ ದೇಶಗಳಲ್ಲೆಲ್ಲಾ ಹಲವಾರು ಭಾಷೆಗಳು ಪ್ರಚಾರದಲ್ಲಿಲ್ಲವೆ? ಹಿಂದೂಸ್ಥಾನಕ್ಕೆ ಸ್ವಾತಂತ್ರ್ಯ ಸಿಕ್ಕದಂತೆ ಮಾಡುವುದಕ್ಕೆ ಆಳರಸರು ಹೂಡಿದ ಒಂದು ಕುಹಕವಿದು. ನಮ್ಮವರು ಅದೇ ಕಿನ್ನರಿಯನ್ನು ಬಾರಿಸುತ್ತ ಹೊರಟಿದ್ದಾರೆ.
ಸಂದರ್ಶಕ: ಗಾಂಧೀಜಿಯವರೇ ಇದರ ಪುರಸ್ಕೃತರಾಗಿದ್ದಾರಲ್ಲ?
ಅನಕೃ: ಗಾಂಧೀಜಿಯವರು ಹೇಳಿದ್ದೊಂದು. ಜನ ತಿಳಿದುಕೊಂಡಿದ್ದೊಂದು. ದೊಡ್ಡವರ ಮಾತು ಸಣ್ಣವರ ಮೂಲಕ ಬಂದಾಗ ಪರ್ವತಧಾರೆ ಕಿರುಗಾಲವೆಯಲ್ಲಿ ಹರಿದಂತೆ ಆಗುತ್ತದೆ. ಗಾಂಧೀಜಿಯವರು ವ್ಯವಹಾರ ದೃಷ್ಟಿಯಿಂದ ಏಕಭಾಷೆ ಬೇಕೆಂದರು. ಹಿಂದಿಯನ್ನು ಹಿಂದೂಸ್ಥಾನದ ಹತ್ತನೆಯ ನಾಲ್ಕು ಅಂಶ ಜನ ಮಾತಾಡುವುದರಿಂದ ಅದನ್ನು ರಾಷ್ಟ್ರಭಾಷೆಯನ್ನಾಗಿ ಅಳವಡಿಸಬೇಕೆಂದು ಹೇಳಿದರು.
ಸಂದರ್ಶಕ: ನ್ಯಾಯವಾಗಿಯೇ ಇದೆ. ಭಿನ್ನಾಭಿಪ್ರಾಯಕ್ಕೆ ಅವಕಾಶವೆಲ್ಲಿಂದ ಬಂತು?
ಅನಕೃ: ಬರುತ್ತದೆ. ಮೂಲ ತತ್ವದಲ್ಲಲ್ಲ. ಸೂಕ್ಷ್ಮ ಆಚರಣೆಯಲ್ಲಿ. ಗಾಂಧೀಜಿಯವರು ಹಿಂದಿಯನ್ನು ಬಲವದ್ಬಂದನದಿಂದ ಪ್ರಚಾರ ಮಾಡಬೇಕೆಂದು ಹೇಳಲಿಲ್ಲ ಅಲ್ಲವೇ?
ಸಂದರ್ಶಕ: ಹೌದು

ಅನಕೃ: ಚಕ್ರವರ್ತಿ ರಾಜಗೋಪಾಲಚಾರ್ಯರು ಕಾಂಗ್ರೆಸ್ ಮಂತ್ರಿಮಂಡಲವನ್ನು ಸ್ಥಾಪಿಸಿದ ಕೂಡಲೇ ಮದರಾಸು ಪ್ರಾಂತ್ಯದಲ್ಲಿ ಕಾನೂನಿನ ಮೊರೆಹೊಕ್ಕರು. ತಮ್ಮ ತತ್ವಕ್ಕೆ ವಿರೋಧಿಸಿದವರನ್ನು ಕಾರಾಗಾರಕ್ಕೆ ಕಳುಹಿಸಿದರು. ಬ್ರಿಟಿಷ್ ಸಾಮ್ರಾಜ್ಯವಾದಿಗಳನ್ನು ಮೀರಿಸುವಷ್ಟು ದಬ್ಬಾಳಿಕೆ ನಡೆಸಿಬಿಟ್ಟರು.
ಸಂದರ್ಶಕ: ಹೌದು ತುಂಬಾ ಅನ್ಯಾಯ ಮಾಡಿ ಅನವಶ್ಯಕವಾಗಿ ದ್ವೇಷಾಸೂಯೆಗಳನ್ನು ಜನತೆಯಲ್ಲಿ ಬಿತ್ತಿದರು.
ಅನಕೃ: ಗಾಂಧೀಜಿಯವರು ಹಿಂದೀ ಪ್ರಾಂತ್ಯಭಾಷೆಗಳನ್ನು ಪ್ರತಿಭಟಿಸಕೂಡದೆಂದು, ಅವುಗಳ ಮೇಲೆ ಅಪಪ್ರಚಾರ ಮಾಡಕೂಡದೆಂದು ಖಂಡಿತವಾಗಿ ಹೇಳಿಲ್ಲವೇ?
ಸಂದರ್ಶಕ: ಹೇಳಿದ್ದಾರೆ.
ಅನಕೃ: ಹಿಂದೀ ಪ್ರಚಾರಕರು ಏನು ಮಾಡಿದರು? ಹೋದ ಕಡೆ, ಪ್ರಾಂತ್ಯಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ತೆಗಳುತ್ತ ಬಂದರು. ಹಿಂದೀ ಪ್ರಚಾರವನ್ನು ಮರೆತು ಅವರು ಪ್ರಾಂತ್ಯ ಭಾಷೆಗಳ ಅಪ-ಪ್ರಚಾರವನ್ನು ಮಾಡಿದರು. ಸ್ಥಳೀಯ ಸಂಸ್ಥೆಗಳ ನೆರವು ಪಡೆದು ಪ್ರಾಂತ್ಯ ಭಾಷೆಗಳನ್ನು ಉಪವಾಸ ಸಾಯಿಸುತ್ತ ಬಂದರು.
ಸಂದರ್ಶಕ: ತಪ್ಪು ಸ್ಥಳೀಯ ಸಂಸ್ಥೆಗಳದೇ ವಿನಾ ಗಾಂಧೀಜಿಯವರದಲ್ಲ - ಹಿಂದೀ ಪ್ರಚಾರಕರದೂ ಅಲ್ಲ
ಅನಕೃ: ನಿಮ್ಮ ತಿಳಿವಳಿಕೆ ತಪ್ಪು. ಗಾಂಧೀ, ನೆಹರು, ಆಜಾದರ ಹೆಸರುಗಳನ್ನು ಮುಂದೆ ಮಾಡಿಕೊಂಡು ಪ್ರಚಾರಕರು ನಿಂತರು. ಕಾಂಗ್ರೆಸ್ ನ ಭಕ್ತರಾಗಿದ್ದ ಸ್ಥಳೀಯ ಸಂಸ್ಥೆಗಳ ಪ್ರವರ್ತಕರು ದೊಡ್ಡ ಹೆಸರುಗಳಿಗೆ ಮರುಳಾಗಿ ಆತ್ಮ ಘಾತಕ ಮಾಡಿಕೊಳ್ಳಲಾರಂಭಿಸಿದರು.
ಸಂದರ್ಶಕ: ಹಿಂದೀ ಪ್ರಚಾರ ಸಂಸ್ಥೆಗಳ ಮೇಲೆ ನಿಮ್ಮ ಆಕ್ಷೇಪವೇನು?
ಅನಕೃ: ಎರಡು. ಒಂದು, ಅದು ಬಂಡವಾಳಗಾರರ ಸಂಸ್ಥೆ. ಕನ್ನಡನಾಡು ಬಡವರ ದೇಶ. ಇಲ್ಲಿ ಹಣ ಕೊಟ್ಟು ಪ್ರಚಾರ ನಡೆಸುವ ಸಂಸ್ಥೆಗಳಿಲ್ಲ. ಈ ಕಾರಣದಿಂದ ಹಣದ ಸೌಲಭ್ಯವಿದೆಯಂದು ಹಿಂದೀ ಪ್ರಚಾರ ಸಂಘಗಳು ಕನ್ನಡದ ಮೇಲೆ ಧಾಳಿ ನಡೆಸಿದವು. ಎರಡು, ಪ್ರಚಾರಕರ ಉದ್ದೇಶ, Hinidi Imperialism (ಹಿಂದೀ ಸಾಮ್ರಾಜ್ಯವಾದ) ಸ್ಥಾಪಿಸುವುದು. ಗುರುದೇವ ರವೀಂದ್ರರು ಹೇಳಿದಂತೆ ಸ್ವಾಭಿಮಾನವುಳ್ಳ ಯಾವ ನಾಡಿನವನೇ ಆಗಲಿ, ಭಾಷಾಸಂಬಂಧಿ ಸಾಮ್ರಾಜ್ಯವಾದವನ್ನು ಸಹಿಸನು.
ಸಂದರ್ಶಕ: ಇದಕ್ಕೆ ಪರಿಹಾರವೇನು?
ಸಂದರ್ಶಕ: ಇದಕ್ಕೆ ಪರಿಹಾರವೇನು?
ಅನಕೃ: ರವೀಂದ್ರರೆ ಅದನ್ನು ಸೂಚಿಸಿದ್ದಾರೆ. Do not rest content with the accidental advantage of your numbers. Attract people by creating great creative literature. ( ಹಿಂದೀ ಮಾತನಾಡುವವರ ಸಂಖ್ಯೆ ತುಂಬ ಇದೆಯೆಂದು ಸಂತುಷ್ಟ್ರರಾಗಿ ಕೂಡಬೇಡಿ. ಅದೊಂದು ಆಕಸ್ಮಿಕ ಅನುಕೂಲ ಲಾಭ ಮಾತ್ರ. ನೀವು ಉಚ್ಚಕೋಟಿಯ ಸೃಷ್ಟಿಕಾರಕ ಸಾಹಿತ್ಯವನ್ನು ರಚಿಸಿ ಜನರನ್ನು ಆಕರ್ಷಿಸಿರಿ). ಹಿಂದೀ ಪ್ರಚಾರಕರು ಕೇವಲ ಭಾಷಾ ಪ್ರಚಾರವಲ್ಲ. ಜನತೆಯಲ್ಲಿ ಸಾಹಿತ್ಯ ಸಂಸ್ಕೃತಿಯ ಪ್ರಸಾರವನ್ನು ಕೈಗೊಳ್ಳಬೇಕು
ಸಂದರ್ಶಕ: ಆ ಬಗ್ಗೆ ನಿಮ್ಮ ವಿರೋಧವಿಲ್ಲವೇ?
ಅನಕೃ: ನಾನು ಅದನ್ನು ಹೃತ್ಪೂರ್ವಕ ಸ್ವಾಗತಿಸುತ್ತೇನೆ. ಹಿಂದೀ ಬಗ್ಗೆ ನಾನೆಷ್ಟು ವಿರೋಧವನ್ನು ವ್ಯಕ್ತಪಡಿಸಿದ್ದೇನೆಯೋ ಅದರ ಹತ್ತರಷ್ಟು ಸಾಂಸ್ಕೃತಿಕ ಭಾಂಧವ್ಯಕ್ಕಾಗಿ ಹೆಣಗಾಡುತ್ತಿದ್ದೇನೆ. ಹಿಂದಿಯ ಕಥೆ ಕಾದಂಬರಿಗಳು ಕನ್ನಡಕ್ಕೆ ಅನುವಾದಿಸಲು ಶ್ರಮಿಸಿದ್ದೇನೆ. ಹಾಗೆ ಹಿಂದೀ ಜನಗಳಿಗೆ ಕನ್ನಡದ ಬಗ್ಗೆ ಅರಿವುಂಟುಮಾಡಲೆತ್ನಿಸಿದ್ದೇನೆ. ಭಾರತದಲ್ಲಿ ಮೂಡಿಬರುವ ಈ ಅನೈಕಮತ್ಯಕ್ಕೆ ಸಾಕಷ್ಟು ಪರಸ್ಪರ ಬಳಕೆ, ಪರಿಚಯಗಳಿಲ್ಲದಿರುವುದೇ ಕಾರಣವೆಂದು ನನ್ನ ಮತ. ಪ್ರಸಾರ ದೃಷ್ಟಿಯಿಂದ ಕೆಲಸ ಮಾಡುತ್ತಿರುವವರು ತಾವು ದಿಗ್ವಿಜಯ ಮಾಡುತ್ತಿದ್ದೇವೆಂದು ಭಾವಿಸಿರುತ್ತಾರೆ. ಇದು ತಪ್ಪು. ನಮ್ಮ ದುರ್ದೈವ ನೋಡಿ ಫ್ರೆಂಚ್, ಇಂಗ್ಲಿಷ್, ರಷ್ಯನ್, ಇಟಾಲಿಯನ್, ಕವಿಗಳು, ಕತೆಗಾರರು, ವಿಮರ್ಷಕರು ಇವರ ಬಗ್ಗೆ ಸಾಕಷ್ಟು ಗೊತ್ತಿದೆ. ಹೆಚ್ಚು ತಿಳಿಯಲು ಬಯಸಿದರೆ ಅಪಾರವಾದ ಅನುಕೂಲವಿದೆ. ನಮ್ಮ ದೇಶ ಭಾಷೆಗಳ ಬಗ್ಗೆ ಎಂತಹ ದಾರಿದ್ರ್ಯ ಮೂಡಿದೆ ನೋಡಿ. ನೆರೆ ಪ್ರಾಂತ್ಯಗಳಾದ ತಮಿಳು, ತೆಲುಗಿನ ಬಗ್ಗೆ ಕೂಡ ನಮಗೇನೂ ಗೊತ್ತಿಲ್ಲ. ಹಿಂದೀ, ಬಂಗಾಳಿ, ಗುಜರಾತಿ, ಅಸಾಮಿ ಹೆಸರುಗಳನ್ನು ಮಾತ್ರ ಕೇಳಿಬಲ್ಲೆವು.
ಸಂದರ್ಶಕ: ಈ ಅಜ್ಞಾನಾಂಧಕಾರವನ್ನು ಹೋಗಲಾಡಿಸುವುದು ಹೇಗೆ?
ಅನಕೃ: ಮುಂಬಯಿಯ ಪಿಇಎನ್ ಸಂಸ್ಥೆ ಮೇಲ್ಪಂಕ್ತಿ ಹಾಕಿ ತೋರಿಸಿದೆ, ಎಲ್ಲಾ ಭಾರತೀಯ ಭಾಷೆಗಳ ಸಾಹಿತ್ಯ ಪರಿಚಯ ಮಾಡಿಕೊಡುವ ಒಂದು ಉತ್ತಮ ವರ್ಗದ ಮಾಸಪತ್ರಿಕೆಯನ್ನು ನಡೆಸುತ್ತಿದೆ. ಇದುವರೆಗೆ ಅಸಾಮಿ, ಬಂಗಾಳಿ ಭಾಷಾ ಸಾಹಿತ್ಯ ಇತಿಹಾಸಗಳನ್ನು ಪ್ರಕಟಿಸಿದೆ. ಮುಂದೆ ಬೇರೆ ಬೇರೆ ಭಾಷೆಗಳ ಸಾಹಿತ್ಯೇತಿಹಾಸಗಳನ್ನು ಪ್ರಕಟಿಸುತ್ತದೆ. ಪ್ರತಿಯೊಂದು ಭಾರತೀಯ ಭಾಷೆಯಲ್ಲಿಯೂ ಇಂತಹ ಪ್ರಯತ್ನವಾಗಬೇಕು.
ಸಂದರ್ಶಕ: ಪರಿಷತ್ತು ಈ ಕಾರ್ಯವನ್ನೇಕೆ ಕೈಗೊಳ್ಳಬಾರದು?
ಅನಕೃ: ಪರಿಷತ್ತು ಕೈಗೊಳ್ಳಬೇಕಾದ ಅನೇಕ ಕಾರ್ಯಗಳಲ್ಲಿ ಇದೊಂದು. ಈ ಸಂಸ್ಥೆಗೆ ಮೊದಲು ಆಕ್ಸಿಜನ್ ಗ್ಯಾಸ್ ಕೊಟ್ಟು ಬದುಕಿಸಿ ಅನಂತರ ಮಂದಿನ ವಿಷಯವನ್ನು ಯೋಚಿಸಬೇಕಿದೆ
ಸಂದರ್ಶಕ: ಹಿಂದಿಯ ಬಗ್ಗೆ ಇಂದು ಪರಿಷತ್ತು ತೆಳೆದಿರುವ ಧೋರಣೆಯೇನು?

ಅನಕೃ: ಹರಿಯುವ ದೋಣಿಯಲ್ಲಿ ತೇಲುವುದು.(Drifting). ಹಿಂದೆ ಪರಿಷತ್ತು ತಾನೇ ಈ ಸಮಸ್ಯೆಯನ್ನು ಹುಟ್ಟಿಹಾಕಿತು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಶ್ರೀ ಡಿ.ವಿ.ಗುಂಡಪ್ಪನವರೂ, ಪರಿಷತ್ಪತ್ರಿಕೆಯ ಸಂಪಾದಕರಾಗಿದ್ದ ಪ್ರೊ. ಎ. ಆರ್. ಕೃಷ್ಣಶಾಶ್ತ್ರೀಗಳು ಗಂಡುಗಲಿಗಳಂತೆ ಕಾದಿದ್ದರು. ಪ್ರೊ. ಬಿ.ಎಂ.ಶ್ರೀಕಂಠಯ್ಯನವರು ಉಪಾಧ್ಯಕ್ಷರಾದರು. ಅವರೂ ಕೆಲಕಾಲ ಹಿಂದಿಯ ದಾಳಿಯನ್ನು ಎದುರಿಸಿ ಹೋರಾಡಿದರು. ಆದರೆ ಒಂದು ದಿನ ಶ್ರೀ ರಂ.ರಾ. ದಿವಾಕರರನ್ನು ಬಳ್ಳಾರಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿದರು. ಅಂದಿನಿಂದ ಶ್ರೀ ಶ್ರೀಯವರ ಧೋರಣೆ ಬದಲಾಯಿಸಿತು. ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿದ್ದ ಶ್ರೀ ದಿವಾಕರರು ಹಿಂದೀ ಪ್ರಚಾರಕ್ಕೆ ಬಂದರು. ಸರ್ಕಾರದ ಮರೆಹೊಕ್ಕರು. ದೇಶದಲ್ಲೆಲ್ಲಾ ಸಂಚರಿಸಿ ಹಿಂದೀ ಪ್ರಚಾರ ಮಾಡುತ್ತಾರೆಂದ ಮೇಲೆ ಹಿಂದೀ ಪ್ರಚಾರಕರಿಗೆ ಏನು ಕಡಿಮೆಯಾದ ಹಾಗಾಯಿತು. ಪರಿಣಾಮ ಕರ್ಣಾಟಕ ಸಂಘಗಳು, ಹಿಂದೀ ಪ್ರಚಾರಕ ಸಂಘಗಳಾಗುತ್ತ ಬಂದವು. ಕನ್ನಡದ ಕೆಲಸಗಾರರು ಹಿಂದೀ ಪ್ರಚಾರಕರಾಗುತ್ತ ಬಂದರು. ಸ್ಥಳೀಯ ಸಂಸ್ಥೆಗಳು, ಕನ್ನಡ ವಾಚನಾಲಯ ಪುಸ್ತಕ ಭಂಡಾರಗಳಿಗೆ ಕೊಡುತ್ತಿದ್ದ ಹಣವನ್ನು ಹಿಂದಿಗೆ ಕೊಡುತ್ತ ಬಂದರು. ಶಾಲೆ ಕಾಲೇಜುಗಳಿಗೆ ಹಿಂದಿ ಕಾಲಿಟ್ಟು ಕನ್ನಡವನ್ನು ಒತ್ತರಿಸುತ್ತ ಬಂದಿತು. ಹೆಣ್ಣು ಮಕ್ಕಳು ಬಯಲು ಭ್ರಾಂತಿಯಿಂದ ಹಿಂಡು ಹಿಂಡಾಗಿ ಹಿಂದಿಯನ್ನು ಕಲಿಯುತ್ತ ಬಂದರು. ಕನ್ನಡಕ್ಕೆ ಸರ್ವತೋಮುಖವಾದ ಪೆಟ್ಟು ಬೀಳುತ್ತ ಬಂದಿತು. ಆಗ ನಾನು ಪರಿಷತ್ತಿನ ವಾರಪತ್ರಿಕೆಯ ಸಂಪಾದಕನಾಗಿದ್ದೆ. ಎಚ್ಚರಕೊಟ್ಟೆ. ದಿವಾಕರರ ದೇಶದ್ರೋಹವನ್ನು ಖಂಡಿಸಿದೆ. ಶ್ರೀ ಶ್ರೀ ಯವರು ಕುಪಿತರಾದರು. ದಿವಾಕರರಿಗೆ ನಾನು ಶರಣಾಗಬೇಕೆಂದರು-ನಾನು ಸಾಧ್ಯವಿಲ್ಲವೆಂದೆ. ನನ್ನ ಪರವಾಗಿ ತಾವು ಆ ಕೆಲಸ ಮಾಡಲು ಮುಂದುವರೆದರು. ನನ್ನ ಹೆಸರಿರುವ ಕನ್ನಡ ನುಡಿಯಲ್ಲಿ 'ಕ್ಷಮಯಾಚನೆ' ಬರಕೂಡದೆಂದು ಕನ್ನಡ ನುಡಿ ಪತ್ರಿಕೆಗೆ ನನ್ನ ಅಂತ್ಯ ಪ್ರಣಾಮವನ್ನು ಸಲ್ಲಿಸಿಬಿಟ್ಟೆ. ಅಂದಿನಿಂದ ಹಿರಿಯರ ಕಣ್ಣಿಗೆ ನಾನೊಬ್ಬ ಕ್ರಾಂತಿಪುರುಷ, ಅಶ್ಲೀಲ ವ್ಯಕ್ತಿ, ವಿವೇಕ ಶೂನ್ಯನಾದ ಬಿಸಿ ರಕ್ತದ ಒಬ್ಬ ಬಂಡಾಯಗಾರ.
ಸಂದರ್ಶಕ: ಅಂದಿಗೂ ಇಂದಿಗೂ ಪರಿಷತ್ತಿನಲ್ಲಿ ಏನೂ ಬದಲಾವಣೆಯಾಗಿಲ್ಲವೇ?
ಅನಕೃ: ಆಗಿದೆ, ವ್ಯಕ್ತಿಗಳು ಬದಲಾಯಿಸಿದ್ದಾರೆ. ಆದರೆ ಅದೇ ಮನೋಧರ್ಮ. ಅದೇ ಸಂಕುಚಿತ ಮನಸ್ಸು- ಅದೇ ನೈಚ್ಯಾನುಸಂಧಾನ.
ಸಂದರ್ಶಕ: ಸಂಕುಚಿತ ಮನಸ್ಸೆ!
ಅನಕೃ: ಹೌದು, ನಾನು ವೀರಶೈವ ಸಾಹಿತ್ಯ ಸಂಸ್ಕೃತಿ ಗ್ರಂಥ ಬರೆದದ್ದಕ್ಕೆ, ಇಂದಿನವರು ಲಿಂಗಾಯರನ್ನು ಎತ್ತಿಕಟ್ಟಿ ಪರಿಷತ್ತಿಗೆ ವಿರೋಧವಾಗಿ ನಡೆಯುತ್ತಿದ್ದೇನೆಂದು ಹೇಳುತ್ತಿದ್ದಾರೆ.
ಸಂದರ್ಶಕ: ಹಾಗಾದರೆ ಸಾಂಸ್ಕೃತಿಕ ಸಂಘಟನೆಗೆ ಕರ್ನಾಟಕದಲ್ಲಿ ಎಡೆಯೇ ಇಲ್ಲವೇ?
ಅನಕೃ: ಏಕಿಲ್ಲ- ನಮ್ಮ ನಿಮ್ಮಂತಹ ಪುರೋಗಾಮಿಗಳು ಸತ್ತು ಹೋಗಿದ್ದಾರೆಯೇ? ವೈಯುಕ್ತಿಕವಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾಡೋಣ. ಬೇರೆ ಭಾಷೆಗಳಿಂದ ಧಾರಾಳವಾಗಿ ಬೆಳಕನ್ನು ತೆಗೆದುಕೊಳ್ಳೋಣ - ನಮ್ಮ ಬೆಳಕನ್ನು ಅವರಿಗೆ ಔದಾರ್ಯದಿಂದ ನೀಡೋಣ
ಸಂದರ್ಶಕ: ಹಿಂದಿಯ ಬಗ್ಗೆ ಇಂದಿನ ನಮ್ಮ ಧೋರಣೆಯೇನು?
ಅನಕೃ: ಸ್ನೇಹ ಮತ್ತು ಸೌಹಾರ್ದ. ಹಿಂದೀ ಪ್ರಚಾರಕರಲ್ಲಿಯೂ ಸಾಕಷ್ಟು ವಿಚಾರಪರಿವರ್ತನೆಯಾಗಿದೆ. ಸಂಸ್ಕೃತಿಯ ಕಡೆಗೆ ಅವರ ಲಕ್ಷ್ಯ ಹೋಗಿದೆ. ಮೈಸೂರಿನ ಕೆಲವು ಹಿಂದೀ ಪ್ರಚಾರಕ ಕೇಂದ್ರಗಳು ಕನ್ನಡ ದಿನಗಳನ್ನು ಆಚರಿಸುತ್ತಿದ್ದಾರೆ. ಕನ್ನಡ ಸಾಹಿತ್ಯ, ಸಾಹಿತಿಗಳ ಸ್ನೇಹ, ಸೌಹಾರ್ದವನ್ನು ಬಯಸುತ್ತಿದ್ದಾರೆ. ಅಪಪ್ರಚಾರವನ್ನು ಬಿಡುತ್ತಿದ್ದಾರೆ. ನಮಗೆ ಬೇಕಾದುದೂ ಇದೆ ತಾನೇ. ಕನ್ನಡಕ್ಕೆ ಧಕ್ಕೆ ತಗಲದಂತೆ ಹಿಂದೀ ಪ್ರಚಾರ ಮಾಡಿಕೊಳ್ಳಲಿ. ಹಿಂದೀ ಜನ ಕನ್ನಡಿಗರಾಗಿ ಅವರ ಕರ್ತವ್ಯ ಮೊದಲು ನಮ್ಮ ಭಾಷೆಗೆ, ಆನಂತರ ಹಿಂದಿಗೆ ಎಂಬುದನ್ನು ಗ್ರಹಿಸಲಿ. ಎಲ್ಲ ಘರ್ಷಣೆಯೂ ಕೊನೆಗಾಣುತ್ತದೆ. ಹಿಂದೀ ಪ್ರಸಾರದ ರೀತಿಯಲ್ಲಿ ಕನ್ನಡ ಪ್ರಸಾರವಾಗಬೇಕು. ಹಿಂದೂಸ್ಥಾನದ ಬೇರೆ ಬೇರೆ ಪ್ರಾಂತ್ಯಗಳಿಗೆ ಕನ್ನಡ ಪ್ರಸಾರಕರನ್ನು ಕಳುಹಿಸಿಕೊಡಬೇಕು. ಬೇರೆ ಬೇರೆ ಭಾಷೆಗಳಲ್ಲಿ ಕನ್ನಡ ಗ್ರಂಥಗಳ ಅನುವಾದ ಬರುವಂತೆ ಮಾಡಬೇಕು. ಹಿಂದೀ ಪ್ರಚಾರಕರ ನಿಷ್ಠೆ, ಕೆಚ್ಚು ಸ್ಥೈರ್ಯ, ಕರ್ತವ್ಯಪ್ರೇಮ ಕನ್ನಡ ಸೇವಕರಲ್ಲಿಯೂ ಮೂಡಿಬರಬೇಕು.
ಸಂದರ್ಶಕ: ಹಿಂದಿಯ ಏಕಭಾಷಾ-ಏಕಲಿಪಿಯ ವಾದಕ್ಕೆ ನಿಮ್ಮ ಉತ್ತರವೇನು?
ಅನಕೃ: ಅದನ್ನು ದೇಶ ಸ್ವಾತಂತ್ರ್ಯ ಬಂದ ಮೇಲೆ ಇಟ್ಟುಕೊಳ್ಳೋಣ. ಆಗ ಹಿಂದಿಯೇ ಭಾರತದ ಭಾಷೆಯಾಗುತ್ತದೆಯೋ, ಕನ್ನಡವೇ ಆಗುತ್ತದೆಯೋ, ಇಂಗ್ಲೀಷಾಗುತ್ತದೆಯೋ ಖಚಿತವಾಗಿ ಹೇಳಬಲ್ಲವರು ಯಾರು? ರಾಷ್ಟ್ರೀಯತೆ ಒಂದು ಸಾಧಿಸಿದ ಮೇಲೆ - ಅಂತರ ರಾಷ್ಟ್ರೀಯತೆಯ ಸಮಸ್ಯೆಯೇಳುತ್ತದೆ. ಆಗ ನಮ್ಮ ವ್ಯವಹಾರ ಕೇವಲ ಭರತಖಂಡಕ್ಕೆ ಮುಗಿಯುವುದಿಲ್ಲ. ಜಗತ್ತಿನ ಸಂಬಂಧ ನಿಕಟವಾಗುತ್ತದೆ. ಆಗ ಜಗತ್ತಿನ ಭಾಷೆಯನ್ನೂ ನಾವು ಅವಲಂಭಿಸಬೇಕಾಗುತ್ತದೆ.
ಸಂದರ್ಶಕ: ಎಲ್ಲಿಂದ ಎಲ್ಲಿಗೆ ಬಂದರೂ ನೀವು ಕನ್ನಡಕ್ಕೇ ಮೊದಲು ಬೆಲೆ ಕೊಡುವುದು.
ಅನಕೃ: ನಿಸ್ಸಂದೇಹವಾಗಿ. "ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರುವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡು ಬಂದರೂ ವಿಧಿಯಲ್ಲ. ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ. "

********

ಹಿಂದಿ ಹೇರಿಕೆ ಕುರಿತಾದ ಅನಕೃ ಅವರ ೬೫ ವರ್ಷಗಳ ಹಿಂದಿನ ಈ ಲೇಖನ ಇಂದಿಗೂ ಪ್ರಸ್ತುತವಾಗಿದೆಯಲ್ಲವೆ?. ಕೇಂದ್ರದಲ್ಲಿ ನಮ್ಮನ್ನಾಳುವವರು ಹಿಂದಿಯಂತೆಯೇ, ಕನ್ನಡವನ್ನೊಳಗೊಂಡ ಭಾರತದ ಇತರ ಭಾಷೆಗಳ ಬೆಳವಣಿಗೆಗೆ- ಪ್ರಸಾರಕ್ಕೆ ಸಹ ಮನಸ್ಸು ಮಾಡಿ ಭಾರತ ಸದಾಕಾಲ "ಅನೇಕತೆಯಲ್ಲಿ ಏಕತೆ" ಯನ್ನು ಕಾಪಾಡಿಕೊಂಡು, ಏಕತ್ರವಾದ ಸಮಗ್ರತೆಯನ್ನು ಮುನ್ನಡೆಸಿಕೊಂಡು ಹೋಗಲು ಅನಕೃ ಅವರ ಈ ಲೇಖನ ಸದಾಕಾಲದ ಜಾಗೃತಿಯ ಧ್ವನಿಯಾಗಿದೆಯಂತನಿಸುತ್ತದೆಯಲ್ಲವೇ?



*****

Thursday, September 3, 2009

ಮಲೈಚಾಮಿ ಹೇಳಿದ "ಒಪ್ಪುಕೂಟದ"ನಿಜವಾದ ಅರ್ಥ.

ಬಿಹಾರ, ಮದ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನದ ಶಾಲೆಗಳಲ್ಲಿ ಮಕ್ಕಳು ಕಲಿಯುವುದು ಎರಡು ಭಾಷೆ, ಒಂದು ಅಲ್ಲಿನ ಪ್ರದೇಶದ ಭಾಷೆ ಹಿಂದಿ ಮತ್ತು ಎರಡನೇದು ಇವತ್ತು ಜಗತ್ತು ಅನುಸರಿಸುತ್ತಿರುವ! ಭಾಷೆ ಇಂಗ್ಲೀಷು. ಹಾಗೆಯೆ ಈ ಭಾಗಗಳಿಂದ ದೆಹಲಿಯ ಸದನಕ್ಕೆ ಹೋಗುವ ಬಹುತೇಕ ಸಂಸದರು ಮಾತನಾಡುವುದು ಕೇವಲ ಹಿಂದಿ, ಕೆಲವರು ಇಂಗ್ಲೀಷನ್ನು ಸಹ ಮಾತನಾಡಬಹುದು. ಹೀಗೆ ಅವರು ಮಾತನಾಡುವ ಹಿಂದಿ, "ಭಾರತದ ರಾಷ್ಟ್ರಭಾಷೆ" ಎಂದು ಆಗಾಗ ಲೋಕಸಭೆಯಲ್ಲಿ ಗೊಂದಲ-ಗದ್ದಲವೆಬ್ಬಿಸುವುದು ಇವರ ಸಂಸತ್ತಿನ ಕಲಾಪದ ಕೆಲಸಗಳಲ್ಲೊಂದಾಗಿದೆ.

ಹಿಂದಿಯೊಂದನ್ನು ಮಾತ್ರ ಈ ದೇಶದ ಏಕೈಕ ರಾಷ್ಟ್ರ ಭಾಷೆ ಆಗದಂತೆ, ಈ ಹಿಂದಿ ಭೂತ ನಮ್ಮ ಕನ್ನಡ, ಪಕ್ಕದ ತೆಲುಗು ಹಾಗು ಭಾರತದ ಇತರ ಸ್ವತಂತ್ರ ಭಾಷೆಗಳನ್ನು ಸಂಪೂರ್ಣವಾಗಿ ತಿಂದು ಮುಗಿಸಿಬಿಡದಂತೆ ತಡೆಹಿಡಿದದ್ದು ೧೯೬೫ ರ ತಮಿಳರ ಹಿಂದಿ ವಿರುದ್ಧದ ಚಳವಳಿ. ತಮಿಳರ ಆ ಹಿಂದಿ ವಿರೋಧಿ ಚಳವಳಿಯಿಂದ ೧೯೬೭ ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ರಾಷ್ಟ್ರೀಯ ಪಕ್ಷ! ಕಾಂಗ್ರೆಸ್ ಇನ್ನೂ ಇದುವರೆವಿಗೆ ತಮಿಳು ಪರ ದ್ರಾವಿಡ ಪಕ್ಷಗಳನ್ನು ಸ್ವತಂತ್ರವಾಗಿ ಎದುರಿಸಿ-ಸೋಲಿಸಿ ರಾಜ್ಯದಲ್ಲಿ ಆಳ್ವಿಕೆ ಮಾಡಲಾಗಿಲ್ಲ. ಈ ಸ್ವಾಭಿಮಾನದ ಹೋರಾಟದ ಫಲವಾಗಿಯೇ ಅಲ್ಲಿಯ ಶಾಲೆಗಳಲ್ಲಿ ಹಿಂದಿಯನ್ನು ಕಲಿಸುವ-ಮಕ್ಕಳ ಮೇಲೆ ಮೂರು ಭಾಷೆ ಹೇರುವುದನ್ನು ತಡೆ ಹಿಡಿಯಲಾಗಿದೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕೇವಲ ತಮಿಳು ಮಾತ್ರ ಕಲಿತು ಸಂಸತ್ತಿಗೆ ಹೋಗುವ ತಮಿಳುನಾಡಿನ ಸಂಸದರು ತಮ್ಮ ರಾಜ್ಯಕ್ಕೆ -ಜನತೆಗೆಎಲ್ಲಾ ರೀತಿಯಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಎಲ್ಲರಿಗಿಂತ ಮೂಂಚೂಣಿಯಲ್ಲಿದ್ದಾರೆ.

ಕಳೆದ ಜುಲೈ ೨೦, ೨೦೦೯ ರಂದು ದೆಹಲಿ ರಾಜ್ಯಸಭೆಯ ಕಲಾಪವೊಂದರಲ್ಲಿ ಹಿಂದಿ ಭಾಷಿಕ ಸಂಸದರು "ಹಿಂದಿ ಕಲಿತವ ಮಾತ್ರ ರಾಷ್ಟ್ರ ಪ್ರೇಮಿ" ಎಂಬ ಅತಿರೇಕದ ರಾಷ್ಟ್ರಪ್ರೇಮ ಮೆರೆದ ಮತ್ತೊಂದು ಘಟನೆಗೆ ಕಾರಣರಾಗಿದ್ದಾರೆ. ಇವರ ಉಪಟಳ ತಾಳಲಾರದೆ ಗಲಿಬಿಲಿಗೊಂಡು ತಬ್ಬಿಬ್ಬಾದ ನಮ್ಮ ಸಂಸದ ಜೈರಾಮ ರಮೇಶ್ ಅವರ ನೆರವಿಗೆ ಬಂದದ್ದು ತಮಿಳುನಾಡಿನ ದ್ರಾವಿಡ ಪಕ್ಷದ ಕೆ. ಮಲೈಚಾಮಿ. ಮಲೈಚಾಮಿ ಅಂದು ಸಂಸತ್ತಿನಲ್ಲಿ ತಮ್ಮ ಪ್ರಶ್ನೆ ಮತ್ತು ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತ ಹೇಳಿದ್ದು ಹಿಂದಿ ಭಾರತದ ಕೆಲವು ರಾಜ್ಯಗಳ ಭಾಷೆ ಮಾತ್ರ ಇದನ್ನು ನಮ್ಮ ಮೇಲೆ ಹೇರಬಹುದಾದರೆ ನಮ್ಮ ಭಾಷೆಗಳನ್ನು ಇವರ ಮೇಲೆ ನಾವ್ಯಾಕೆ ಹೇರಬಾರದು.

ಎಲ್ಲಿಯವರೆಗೆ ಹಿಂದಿ ಭಾಷಿಕ ಮಕ್ಕಳಿಗಿಲ್ಲದ ಮೂರು ಭಾಷೆ ಸೂತ್ರ ಕನ್ನಡದ ಮಕ್ಕಳಿಗೆ ಮಾತ್ರ ಹೊರೆಯಾಗಿರುವವರೆಗೆ, ಎಲ್ಲಿಯವರೆಗೆ ಒಪ್ಪುಕೂಟದ (Federal) ನಿಜವಾದ ಅರ್ಥ ಏನೆಂದು ಈ ಹಿಂದಿ ಭಾಷಿಕ ನಾಯಕರಿಗೆ ನಮ್ಮನ್ನಾಳುವವರು ಹೇಳಲು ಸಮರ್ಥರಾಗುವುದಿಲ್ಲವೋ, ಎಲ್ಲಿಯವರೆಗೆ ನಿಜವಾದ ಒಪ್ಪುಕೂಟವೆಂದರೆನೆಂದು ಅರ್ಥ ಮಾಡಿಕೊಂಡವರನ್ನು ಮತ್ತು ಅದಕ್ಕಾಗಿ ದುಡಿಯುವವರನ್ನು ಮಾತ್ರ ನಾವು ಆರಿಸಿ ನಮ್ಮ ಸಂಸತ್ತಿಗೆ ಕಳುಹಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಸುದ್ಧಿಗಳನ್ನು ನಾವು ಆಗಾಗ್ಗೆ ಕೇಳುತ್ತಲೆ ಇರಬೇಕಾಗುತ್ತದೆ.


*****