Sunday, November 29, 2009

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ!

*****

*****
೨೦೦೮ರ ಮೇ ತಿಂಗಳಿನಲ್ಲಿ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶುರುವಾದಾಗ ಅಲ್ಲಿನ ಕನ್ನಡ ವಾತಾವರಣದಲ್ಲಿನ ಕೊರತೆಗಳಲ್ಲಿ, ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳು ಅಲಭ್ಯವಾದದ್ದು ಸಹ ಒಂದು. ನಿಲ್ದಾಣದಲ್ಲಿ ಚೆಕ್ ಇನ್ ಸಮಯದಲ್ಲಿ ವಿಮಾನ ಸಂಸ್ಥೆಯವರು (ಜೆಟ್, ಕಿಂಗ್ ಫಿಷರ್, ಎಮಿರೇಟ್ಸ್, ಸಿಂಗಪೂರ್ ಏರ್ ಲೈನ್ಸ್ ... ಹೀಗೆ) ಉಚಿತವಾಗಿ ಆ ದಿನದ ವಾರ್ತಾ ಪತ್ರಿಕೆ ಒದಗಿಸುವ ಪರಿಪಾಠವಿದೆ. ಎರಡು ಮಾತಿಲ್ಲ ಇವರು ಒದಗಿಸುವ ಪತ್ರಿಕೆಗಳೆಲ್ಲ ಆ ದಿನದ ಇಂಗ್ಲೀಷ್ ದೈನಿಕಗಳು. ಹಾಗೆಯೆ ಒಳಾಂಗಣದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದವರು ಪತ್ರಿಕೆಗಳನ್ನು ಅಲ್ಲಲ್ಲಿ ಉಚಿತವಾಗಿ ದೊರಕುವ ವ್ಯವಸ್ಥೆ ಮಾಡಿದ್ದಾರೆ. ವಿಮಾನ ಸಂಸ್ಥೆಯವರು ಹಾಗು ವಿಮಾನ ನಿಲ್ದಾಣ ಪ್ರಾಧಿಕಾರ ಈ ಪತ್ರಿಕೆಗಳನ್ನು ಕೊಂಡು ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೋ ಅಥವ ವಾರ್ತಾ ದೈನಿಕ ಸಂಸ್ಥೆಗಳವರು ಮಾರಾಟ ಉತ್ತೇಜಕ ಯೋಜನೆಯಡಿಯಲ್ಲಿ ಉಚಿತವಾಗಿ ಇದನ್ನು ವಿಮಾನ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೋ ವಿವರಗಳು ಗೊತ್ತಿಲ್ಲ. ಹಾಗೊಂದು ವೇಳೆ ವಿಮಾನ ಯಾನ ಸಂಸ್ಥೆಯವರು ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ಕೇವಲ ಇಂಗ್ಲೀಷ್ ಪತ್ರಿಕೆಗಳನ್ನು ಕೊಂಡು ಪ್ರಯಾಣಿಕರಿಗೆ ಉಚಿತವಾಗಿ ಕೊಡುತ್ತಿದ್ದರೆ ಇವರು ಕನ್ನಡ ಗ್ರಾಹಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಬಹುದಾಗಿದೆ.

****

ಬೆಂಗಳೂರಿನಿಂದ ಇತರ ರಾಜ್ಯದ ನಗರಗಳಿಗೆ-ಹೊರದೇಶಕ್ಕೆ ಹೋಗುವ ವಿಮಾನಗಳು ಹಾಗಿರಲಿ, ಇವತ್ತಿಗೂ ಬೆಂಗಳೂರು-ಮಂಗಳೂರು, ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ವಿಮಾನದಲ್ಲಿ ಕನ್ನಡ ಪತ್ರಿಕೆಗಳು, ಕನ್ನಡದಲ್ಲಿ ಗ್ರಾಹಕ ಸೇವೆ (ವಿಮಾನದಲ್ಲಿನ ಘೋಷಣೆ, ಸುರಕ್ಷತೆ ಮಾಹಿತಿ, ಇತ್ಯಾದಿ) ದೊರಕುದಿರುವುದು ವಿಪರ್ಯಾಸವಾಗಿದೆ. ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರ ೨೦೦೮-೨೦೦೯ನೇ ಸಾಲಿನಲ್ಲಿ ಕೈಗೊಂಡ ಕಾರ್ಯಕ್ರಮದ ಪ್ರಗತಿಯಲ್ಲಿ! ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದಿದೆ. ಆದರೆ ಯಾವ ರೀತಿ ಇಲ್ಲಿ ಕನ್ನಡ ಅನುಷ್ಠಾನವಾಗಿದೆ ಎಂಬ ಮಾಹಿತಿ ತರಿಸಿಕೊಂಡು ವರದಿ ಮಾಡುವ ಬಗ್ಗೆ ಯೋಚಿಸಿದಂತೆ ಕಂಡು ಬಂದಿಲ್ಲ.

****

ಮೊಟ್ಟ ಮೊದಲಿಗೆ ಇಲ್ಲಿ ಕನ್ನಡ ಪತ್ರಿಕೆ ದೊರೆಯುವಂತೆ ಮಾಡಿದ್ದು ಕನ್ನಡಪ್ರಭ ಬಳಗ. ನಿಲ್ದಾಣದ ಒಳಾಂಗಣದಲ್ಲಿ "ಲೈಪ್ ಸ್ಟೈಲ್" ಎಂಬ ಪುಸ್ತಕಗಳ ಮಳಿಗೆಯಲ್ಲಿ ಕನ್ನಡಪ್ರಭ ಮಾರಾಟವಾಗುತ್ತಿತ್ತು.




ನಂತರದಲ್ಲಿ ಪ್ರಜಾವಾಣಿ, ಉದಯವಾಣಿ, ಸುಧಾ, ಮಯೂರ, ಚಂಪಕ, ಗೃಹಶೋಭ ಹೀಗೆ ಕನ್ನಡ ಪತ್ರಿಕೆಗಳು ಅಲ್ಲಿನ ಸ್ಟಾಂಡ್ ನಲ್ಲಿ ಕಂಡು ಬಂದವು. ಈ ವರ್ಷದ ಅಕ್ಟೋಬರ್ ನವರೆಗೆ ನಾನು ಕಂಡಂತೆ ಈ ಪತ್ರಿಕೆಗಳು ಅಲ್ಲಿ ಲಭ್ಯವಿದ್ದವು. ಈ ನವಂಬರ್ ನಲ್ಲಿ ನಾಲ್ಕೈದು ಸಲ ನಾನು ಇಲ್ಲಿಂದ ಪ್ರಯಾಣಿಸುವಾಗ ಕಂಡದ್ದು ಕನ್ನಡ ಪತ್ರಿಕೆಗಳ ಮಾರಾಟ ಇಲ್ಲಿ ಮಾಯವಾಗಿರುವುದು. ಕೇಳಿದಾಗ ತಿಳಿದದ್ದು ಅಂಗಡಿಯವರು ಕನ್ನಡ ಪತ್ರಿಕೆ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರಂತೆ. ಇದು ಈ ವರ್ಷದ ರಾಜ್ಯೋತ್ಸವಕ್ಕೆ ಕನ್ನಡ ಪ್ರಯಾಣಿಕರಿಗೆ ದೊರೆತಿರುವ ಕೊಡುಗೆ! ಅದರೆ ಇಂಗ್ಲೀಷ ಜತೆಗೆ ಈಗಲೂ ಇಲ್ಲಿ ತಮಿಳು, ತೆಲುಗು, ಮಲಯಾಳಿ, ಹಿಂದಿ ಪತ್ರಿಕೆಗಳು ಮಾರಾಟಕ್ಕೆ ಲಭ್ಯವಿದೆ.

****

ಮತ್ತೊಮ್ಮೆ ಮೊನ್ನೆ ೧೭ ನೇ ನವಂಬರ್ ೨೦೦೯ ರಂದು ಇಲ್ಲಿಂದ ಪ್ರಯಾಣಿಸುವಾಗ ನಿಲ್ದಾಣದ ಒಳಾಂಗಣದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಉಚಿತವಾಗಿ ಪ್ರಯಾಣಿಕರ ಓದಿಗಾಗಿ ಇರಿಸಿದ್ದ ಪತ್ರಿಕೆಗಳ ಅಡ್ಡಣಿಗೆಯಲ್ಲಿ, ಇಂಗ್ಲೀಷ್ ಪತ್ರಿಕೆಗಳ ನಡುವೆ ಮತ್ತೊಮ್ಮೆ ಕನ್ನಡ ಪತ್ರಿಕೆಯೊಂದು ಕಂಡು ಬಂದದ್ದು "ಲವಲVK"! ಮೂಡಿಸಿತು. ಸುಮಾರು ಪ್ರಯಾಣಿಕರು ವಿ.ಕ. ಕೈಲಿ ಹಿಡಿದು ಒದುತ್ತಿದ್ದುದು ಸಹ ಕಂಡು ಬಂತು. ಆದರೆ ಸಹಜವಾಗಿ ಮತ್ತೊಂದು ಪ್ರಶ್ನೆ ಎದ್ದಿತು. ಬೆಂಗಳೂರಿನಿಂದ ಪ್ರಕಟವಾಗುವ ಎಲ್ಲಾ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿರುವ ನಿಲ್ದಾಣ ಪ್ರಾಧಿಕಾರ ಕನ್ನಡದ್ದು ಮಾತ್ರ ಏಕೆ ಒಂದೇ ಪತ್ರಿಕೆ ಮಾತ್ರ ಇರಿಸಿದೆ?

****

ಪ್ರತಿನಿತ್ಯ ಅನೇಕ ಕನ್ನಡಿಗರು ಸಹ ಈ ನಿಲ್ದಾಣದಿಂದ ಪ್ರಯಾಣ ಮಾಡುತ್ತಾರೆ. ಅವರೆಲ್ಲರೂ ಈ ಕುರಿತು ಕನ್ನಡ ಗ್ರಾಹಕ ಸೇವೆ ದೃಷ್ಟಿಯಿಂದ ಯೋಚಿಸಬೇಕಾದ್ದು ಅಗತ್ಯವಿದೆ. ಯಾವುದೇ ವಿಮಾನದಲ್ಲಿ ನಾವು ಪ್ರಯಾಣಿಸಿದಾಗ [ಬೆಂಗಳೂರಿನಿಂದ ಹೊರಡುವ / ಬೆಂಗಳೂರಿಗೆ ಬರುವ]ಕನ್ನಡ ಪತ್ರಿಕೆ ಕೇಳಬೇಕು. ಅವರ ಗ್ರಾಹಕ ಮರುಮಾಹಿತಿ ಪತ್ರದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ದೊರಕದಿರುವ ಬಗ್ಗೆ ದೂರು ದಾಖಲಿಸಬೇಕು. ಈ ರೀತಿ ಕನ್ನಡ ಪ್ರಯಾಣಿಕರಿಂದ ಸಹ ನಿಲ್ದಾಣದಲ್ಲಿ / ವಿಮಾನದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ದನಿಗೂಡಬೇಕಿದೆ . ಆಗ್ರಹಿಸುವುದರ ಮೂಲಕ ಕನ್ನಡ ಪತ್ರಿಕೆಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುವ ಅಗತ್ಯದ ಜವಾಬ್ದಾರಿಯೂ ನಮ್ಮ ಮೇಲೆ ಇದೆ!


ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

Tuesday, November 24, 2009

ನಾವು ಮೊದಲಿಗೆ ಕನ್ನಡಿಗರೋ! ಅಥವ ಭಾರತೀಯರೋ!

****

"ನಾನು ಮೊದಲು ಭಾರತೀಯ, ಆನಂತರ ಮರಾಠಿಗ, ನಾನು ಮರಾಠಿಗನಾಗಿರುವುದಕ್ಕೆ ಹೆಮ್ಮೆಯಿದೆ, ಜತೆಗೆ ಮುಂಬೈ ಕೇವಲ ಮರಾಠಿಗರದು ಮಾತ್ರವಲ್ಲ ಎಲ್ಲರಿಗೂ ಸೇರಿದ್ದು". ಇತ್ತೀಚೆಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತನ್ನ ಕ್ರಿಕೆಟ್ ಜೀವನದ ೨೦ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ನೀಡಿದ ಹೇಳಿಕೆ!

ಶಿವಸೇನೆಯ ಪ್ರಮುಖ ಬಾಳ ಠಾಕ್ರೆ "ಸಚಿನ್ ನ ಮೇಲಿನ ಹೇಳಿಕೆ ಮರಾಠಿಗರ ಮನಸ್ಸು ನೋಯಿಸಿದೆ, ಈ ರೀತಿಯ ಹೇಳಿಕೆಯ ಮೂಲಕ ಸಚಿನ್ ಮರಾಠಿ ಪಿಚ್ ನಲ್ಲಿ ರನ್ ಔಟ್ ಆಗಿದ್ದಾರೆ" ಎಂಬ ವ್ಯಂಗ್ಯಭರಿತ-ತೀಕ್ಷ್ಣ ಪ್ರತಿಕ್ರಿಯೆ ಇಡೀ ದೇಶಭಕ್ತರ! ಕೆಂಗಣ್ಣಿಗೆ ಗುರಿಯಾಗಿ 'ಠಾಕ್ರೆಗೆ ದೇಶಪ್ರೇಮಕ್ಕಿಂತ ಭಾಷಾ ಪ್ರೇಮ ಮುಖ್ಯವಾಗಿದೆ', 'ಠಾಕ್ರೆಯ ಭಾಷಾಂದತೆಯಿಂದ ರಾಷ್ಟ್ರೀಯತೆಗೆ ಅಪಾಯ', ಠಾಕ್ರೆ ಅಧಿಕ ಪ್ರಸಂಗಿ, ರಾಜಕೀಯ ಮರುಹುಟ್ಟಿಗಾಗಿ ಠಾಕ್ರೆಯ ಹುಚ್ಚು ಕುತಂತ್ರ.......ಹೀಗೆ ಇನ್ನೂ ಹಲವಾರು ರೀತಿಯಲ್ಲಿ ಠಾಕ್ರೆ ಎಲ್ಲರಿಂದಲೂ ಇನ್ನೂ ಬೈಸಿಕೊಳ್ತಾನೆ ಇದಾರೆ.

ಸಚಿನ್ ತೆಂಡೂಲ್ಕರ್ ಹುಟ್ಟಿದ್ದು-ಬೆಳೆದದ್ದು ಕ್ರಿಕೆಟ್ ಆಟ ಪ್ರಾರಂಭಿಸಿದ್ದು ಮುಂಬೈನಲ್ಲಿ, ನಂತರ ಪಶ್ಚಿಮ ಭಾರತ, ಶೇಷ ಭಾರತ, ಭಾರತ ನಂತರ "ಪ್ರಪಂಚದ ಇಲವೆನ್" ನಲ್ಲೂ ಆಡಿ, ಇಡೀ ಪ್ರಪಂಚದಲ್ಲೆ ಮನೆಮಾತಾಗಿರುವುದು ಗೊತ್ತಿರುವುದೆ. ತನ್ನ ೧೬ನೆಯ ವಯಸ್ಸಿನಲ್ಲಿಯೇ ಅವಕಾಶ ದೊರೆತದ್ದು ಮತ್ತು ತನ್ನ ಕ್ರಿಕೆಟ್ ಜೀವನದ ೨೦ ನೆಯ ವರ್ಷದ ನಂತರವೂ ಇನ್ನೂ 'ಚಿರಂಜೀವಿಯಾಗಿ' ಕ್ರಿಕೆಟ್ ಆಟ ಮುಂದುವರೆಸಲು ಸಚಿನ್ ಗೆ ಸಾಧ್ಯವಾಗಿರುವ ಕಾರಣಗಳಲ್ಲಿ, ಭಾರತ ಕ್ರಿಕೆಟ್ ನಲ್ಲಿ ಬೇರೂರಿರುವ "ಮರಾಠಿ" ಲಾಬಿ ಸಹ ಮುಖ್ಯವಾದದ್ದು. ಹಾಗಾಗಿ ಸಚಿನ್ ಮರಾಠಿಗನೆ. ಅದೇ ಅವನ ಬೇರು, ಅನನ್ಯತೆ, ಅಭಿನ್ನತೆ, ಸ್ವಸ್ವರೂಪ, ಗುರುತು ಮತ್ತು ಚಹರೆ ಎಲ್ಲಾ. ಅವನು ಮರಾಠಿಗ ಎಂದು ಹೇಳಿಕೊಳ್ಳುವುದೇ ತಾನೊಬ್ಬ ಭಾರತೀಯ ಎಂದು ಘೋಷಿಸಿಕೊಂಡಂತೆ. ಅದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿರಲಿಲ್ಲ. ಭಾರತದಲ್ಲೇ ನಾನು ಭಾರತೀಯ ಎಂದು ಹೇಳಿಕೊಳ್ಳುವುದು, ಎಲ್ಲಿಯವನು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆಯಲ್ಲವೆ. ಮುಂಬೈಗೆ ಆಡಲು ಶುರುಮಾಡಿದ ಮೇಲಲ್ವೆ ಸಚಿನ್ ಭಾರತ ತಂಡಕ್ಕೆ ಬಂದದ್ದು. ಮಹಾರಾಷ್ಟ್ರ - ಮಂಬೈ ನಡುವೆ ರಣಜಿ ಪಂದ್ಯ ನಡೆಯುವಾಗ ಮುಂಬೈಯನ್ನು ಪ್ರತಿನಿಧಿಸುವ ಸಚಿನ್, ಮಹಾರಾಷ್ಟ್ರವನ್ನು ಸೋಲಿಸಲು ಆಟ ಆಡ್ತಾನೆ ಹೊರತು ನಾನು ಮರಾಠಿಗನಾಗಿ ಮಹಾರಾಷ್ಟ್ರಾನ ಸೋಲಿಸೋದು ಹೇಗೆ ಅಂತ ಸುಮ್ಮನೆ ವಿಕೆಟ್ ಬೀಸಿ ಹೊರಹೋಗುವುದಿಲ್ಲವಲ್ಲ. ಒಬ್ಬ ಆಟಗಾರನಾಗಿ ಸಚಿನ್, ಹೇಳಿಕೊಳ್ಳಬೇಕಾದ್ದು ಆಟಗಾರನಿಗಿರಬೇಕಾದ ಮನೋಭಾವ ಮಾತ್ರ. ಹಾಗಾಗಿ ತಾನು "ಮೊದಲು ಭಾರತೀಯ" ಅಂತ ಹೇಳಿಕೊಳ್ಳದೆ "ನಾನು ಇಡೀ ಪ್ರಪಂಚದ ಕ್ರಿಕೆಟ್ ಆಟದ ಸಮುದಾಯಕ್ಕೆ ಸೇರಿದವನು. ಪ್ರಪಂಚದ ಇಡೀ ಕ್ರಿಕೆಟ್ ಸಮುದಾಯ ಒಂದೇ" ಎಂಬ ಮಾತು ಸಚಿನ್ ಹೇಳಿದ್ದಿದ್ದರೆ, ಬಹುಷಃ ಠಾಕ್ರೆ ಸಾಮ್ನಾದಲ್ಲಿ ಸುಮ್ನೆ ಇದ್ದು ಬಿಡುತ್ತಿದ್ದರೇನೋ! ನಮ್ಮ ದೇಶಭಕ್ತರುಗಳು! ಸಹ, ದೇಶ ಕಟ್ಟುವ ತಮ್ಮ ಬಿಡುವಿಲ್ಲದ ಸಮಯವನ್ನು ಸುಮ್ಮನೆ ಠಾಕ್ರೆ ವಿರುದ್ಧ ಹರಿಹಾಯುವುದನ್ನು ತಪ್ಪಿಸುವಂತಾಗಿರುತ್ತಿತ್ತೇನೋ?

****
ಇನ್ನು ಸಚಿನ್ ನ ಮತ್ತೊಂದು ಹೇಳಿಕೆ 'ಮುಂಬೈ ಎಲ್ಲರಿಗೂ ಸೇರಿದ್ದು'. ಈ ರೀತಿಯ ಹೇಳಿಕೆ ಮರಾಠಿ ಪ್ರಿಯರಿಗೆ (ಭಾಷಾವಾರು ಪ್ರಾಂತ್ಯಗಳಿಂದ ಕೂಡಿ, ಒಂದು ಒಕ್ಕೂಟದ ದೇಶವಾದ ಭಾರತದಲ್ಲಿನ ಮಹಾರಾಷ್ಟ್ರದ ನೆಲದ ಮಕ್ಕಳಿಗೆ) ಖಂಡಿತ ಸಂತೋಷ ತರುವ ವಿಷಯವಲ್ಲ. ನಮ್ಮಲ್ಲಿ ಖ್ಯಾತಿವಂತರು ಈ ರೀತಿಯ ಅರ್ಥವಿಲ್ಲದ ಅರ್ಧ ಹೇಳಿಕೆ ಕೊಡುವಲ್ಲಿ ನಿಸ್ಸೀಮರಾಗಿಬಿಟ್ಟಿದ್ದಾರೆ. ಸಚಿನ್ ಮುಂದುವರೆದು "ಯಾರು ಎಲ್ಲಿ ಬೇಕಾದರೂ ಹೋಗಿ ನೆಲೆಸಿ, ಎಲ್ಲಿ ನೆಲೆಸುವಿರೋ (ನಿಮ್ಮ ಅಭಿವ್ಯಕ್ತಿಯನ್ನುಳಿಸಿಕೊಂಡು) ಅಲ್ಲಿನವರಾಗಿ. ಅಂದರೆ, "ಯಾರು ಬೇಕಾದರೂ ಮುಂಬೈಗೆ ಬನ್ನಿ, ಬಂದು ನಿಮ್ಮದೆ ದ್ವೀಪ ಸಮೂಹ ಮಾಡಿಕೊಳ್ಳಬೇಡಿ. ಮುಂಬೈಗೆ ಬಂದ ಮೇಲೆ ಮರಾಠಿ ಸಾಗರದಲ್ಲಿ ಬೆರೆತು ಮರಾಠಿ ಐಕ್ಯತೆಯಿಂದ ಭಾರತ ದೇಶದ ಒಕ್ಕೂಟದ ಒಗ್ಗಟ್ಟಿಗೆ ಶ್ರಮಿಸಿ" ಎಂಬ ಹೇಳಿಕೆ ಇತ್ತಿದ್ದರೆ ಸಚಿನ್ 'ಸೋಗಿನ ಬುದ್ದಿ ಜೀವಿಯಲ್ಲ' ಎಂಬ ನಿಲುವಿಗೆ ಬರಬಹುದಿತ್ತು.

****
ವಿಪರ್ಯಾಸ ನೋಡಿ ಹೀಗಿದೆ:

"ಹಲವು ಹಿರಿಯರು ಸ್ವಹಿತ ಲೆಕ್ಕಿಸದೆ, ತ್ಯಾಗ, ಹೋರಾಟದ ನಂತರವೇ ಭಾಷೆಯ ಆಧಾರದ ಮೇಲೆ ಭಾಷಾವಾರು ರಾಜ್ಯಗಳಾಗಿ ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದದ್ದು. ಹಾಗಾಗಿ ಭಾರತ ಹಲವು ವೈವಿಧ್ಯಗಳ-ವೈಶಿಶ್ಟ್ಯಗಳ ದೇಶ, ಇಲ್ಲಿನ ದೇಶವಾಸಿಗಳಿಗೆ, ಯಾರು ಎಲ್ಲಿ ಬೇಕಾದರು ಹೋಗಿ ನೆಲಸುವ ಅವಕಾಶ ಇದೆ. ಯಾರು ಬೇಕಾದ್ರೂ ಎಲ್ಲಿಗೇ ಹೋಗಿ ನೆಲೆಸಿ, ಎಲ್ಲಿ ಹೋಗಿ ನೆಲೆಸುತ್ತೀರೋ ಅಲ್ಲಿಯವರಾಗಿ, ಅಲ್ಲಿನ ಆಚಾರ-ವಿಚಾರ-ಭಾಷೆ-ಸಂಸ್ಕೃತಿಯಲ್ಲಿ ಬೆರೆಯಿರಿ. " ಎಂದು ಹೇಳುವವನು ಮತ್ತು ಅನಿಯಂತ್ರಿತ ವಲಸೆ ತಡೆ ಹಿಡಿದು ಸ್ಥಳೀಯ ವೈಶಿಷ್ಟ್ಯ ಕಾಪಾಡಿ, ಸ್ಥಳೀಯರಿಗೆ, ನೆಲದ ಮಕ್ಕಳಿಗೆ, ಪ್ರದೇಶದ ಭಾಷೆಗೆ ಹೆಚ್ಚಿನ ಅವಕಾಶ ದೊರಕಿಸಿ. ಆ ಮೂಲಕ ಆ ಪ್ರಾಂತ್ಯದ ಬಲಪಡಿಸುವಿಕೆ - ಒಗ್ಗಟ್ಟು ಸಾಧ್ಯ. ಇದು ಒಟ್ಟು ಭಾರತ ದೇಶದ ಒಗ್ಗಟ್ಟನ್ನು ಬಲಪಡಿಸಿದಂತೆ" ಎಂದು ಹೇಳುವವನು ಇವತ್ತು ಭಾಷಾಂಧ-ಪ್ರಾಂತ್ಯಾಂಧ ಮತ್ತು ದೇಶದ್ರೋಹಿಯೆನ್ನಿಸಿಕೊಳ್ಳುತ್ತಿದ್ದಾನೆ.

ಯಾವನು ಎಲ್ಲಿ ಬೇಕಾದ್ರೂ ಹೋಗಬಹುದು, ಅವನಿಗಿಷ್ಟ ಬಂದಂಗೆ ನಡಕೋಬಹುದು. ಇದು ಭಾರತ ದೇಶದ ಸಂವಿಧಾನ ಕೊಟ್ಟಿರೋ ಹಕ್ಕು . ವಲಸಿಗರ ಅನುಕೂಲಕ್ಕೆ, ಅವರ ಉದ್ಧಾರಕ್ಕೆ ಮುಂಬೈ, ಬೆಂಗಳೂರು ಹೀಗೆ ಇತರ ದೊಡ್ಡ ಪಟ್ಟಣಗಳನ್ನು ಪ್ರತ್ಯೇಕ ನಗರ ರಾಜ್ಯಗಳನ್ನಾಗಿ ಪರಿವರ್ತಿಸಿ ಬಿಡೋಣ ಇಲ್ಲವೇ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಿ ಎಂದು ಕರೆ ನೀಡುವವನು ಇವತ್ತು ದೇಶಪ್ರೇಮಿಯಾಗಿ ಕಂಡು ಬರುತ್ತಿದ್ದಾರೆ.

****


ಕಿತಾಪತಿಯ ಜನ ಕರ್ಣಾಟಕತ್ವ, ಮಹಾರಾಷ್ಟ್ರತ್ವ, ಆಂದ್ರತ್ವಗಳಿಗೂ ನಮ್ಮ ಭಾರತೀಯತ್ವಕ್ಕೂ ವಿರೋಧ ಭಾವದ ಆರೋಪಣೆ ಮಾಡುತ್ತಾರೆ. "ನಮ್ಮ ಕರ್ನಾಟಕತ್ವ ಎಂದೆಂದಿಗೂ ಭಾರತೀಯತ್ವಕ್ಕೆ ವಿರುದ್ಧವಾದುದಲ್ಲ, ನಾವು ಕರ್ನಾಟಕಕ್ಕೆ ಜಯಘೋಷಮಾಡುವುದು ಭಾರತ ಮಾತೆಗೆ ಜಯಘೋಷ ಮಾಡಿದಂತೆ" ಎಂದು ಹೇಳಿದವರು ನಮ್ಮ ರಾಷ್ಟ್ರಕವಿ ಕುವೆಂಪು.


ನಾವೇ ಏರ್ಪಡಿಸಿಕೊಂಡ ಪ್ರದೇಶವೊಂದರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಾದ, ಸಂಘರ್ಷ, ಚಿಂತನೆ ಎಲ್ಲವೂ ಸಾಮಾನ್ಯ ಆದರೆ ಅದೆಲ್ಲವೂ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕು. ಎಲ್ಲಿ ಆ ಪ್ರದೇಶದ ಸ್ಥಳೀಯರ ಹಿತಚಿಂತನೆಗಳು ಕಡೆಗಣಿಸಲ್ಪಡುತ್ತವೋ, ಸ್ಥಳಿಯೇತರರ ಕೈ ಮೇಲಾಗುವುದಕ್ಕೆ ರೀತಿನಿಯಮಗಳು ಬದಲಾಗುತ್ತವೋ ಆಗ ಆ ಪ್ರದೇಶದ ಒಗ್ಗಟ್ಟು ಹೇಗೆ ಮುಂದುವರೆಯಲು ಸಾಧ್ಯ. ಈ ರೀತಿಯ ಒಗ್ಗಟ್ಟು ಮುರಿಯುವ ಘಟನೆಗಳು ನಾಳೆ ಆಯಾ ಪ್ರದೇಶಗಳ ಪ್ರತ್ಯೇಕ ರಾಷ್ಟ್ರಗಳ ನಿರ್ಮಾಣಕ್ಕೆ ಸಂಭವನೀಯ ಕಾರಣಗಾಳಾಗುವುದರಲ್ಲಿ ಸಂದೇಹಗಳಿಲ್ಲ ಎಂಬ ಮಾತುಗಳನ್ನು ಮೊನ್ನೆ ನಡೆದ ಕನ್ನಡ ಕಾರ್ಯಕ್ರಮವೊಂದರಲ್ಲಿ 'ಚಂಪಾ' ಹೇಳುತ್ತಿದ್ದರು.

ಪ್ರಾಂತೀಯತೆ ಎಂದರೆ ಪ್ರಾಂತದ ದುರಭಿಮಾನವಲ್ಲ. ಪ್ರಾಂತೀಯತೆಯೇ ಸರ್ವಸ್ವವಲ್ಲವೆಂಬುದು ಕರ್ನಾಟಕರಿಗೆ ಗೊತ್ತಿದೆ. ಅನ್ಯರು ಕಲಿಸುವದು ಬೇಡ. ಕರ್ನಾಟಕರು ಇಂದಿನ ವರೆಗೆ ಎಂದೂ ಅಧಿಕೃತವಾಗಿ ರಾಷ್ಟ್ರೀಯತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ, ಹೋಗುವುದಿಲ್ಲ. ಪ್ರಾಂತೀಯತೆಯನ್ನು ಜಾತೀಯತೆಗೆ ಹೋಲಿಸುವುದು ತಪ್ಪು.ಕರ್ನಾಟಕಕ್ಕೆ ಭಾರತದಂತೆ ಸ್ವಾಧೀನ ಕರ್ತೃತ್ವವು ಬೇಡ. ಭಾರತಾಧೀನ ಕರ್ತೃತ್ವ ಬೇಕಿದೆ. ಸರ್ವತಂತ್ರತ್ವವು ಬೇಡ. ದತ್ತ ಸ್ವಾತಂತ್ರ್ಯವು ಬೇಕು. ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು. ಎಂಬ ನಿಲುವು ತಳೆದಿದ್ದವರು ಕರ್ನಾಟಕದ ಏಕೀಕರಣದ ರೂವಾರಿ ಆಲೂರು ವೆಂಕಟರಾಯರು



"ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರು ವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ, ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ" ಎಂದು ರಾಷ್ಟ್ರೀಯತೆಯ ಬಗ್ಗೆ ಪ್ರತಿಪಾದಿಸಿದವರು ಅ.ನ.ಕೃಷ್ಣರಾಯರು

****



ನಿಜವಾದ ರಾಷ್ಟ್ರೀಯತೆಯಂದರೆನೆಂದು ನೆನಪು ಮಾಡುವ ಕುವೆಂಪು-ಚಂಪಾ-ಆಲೂರು-ಅನಕೃ ರವರಂತಹ ಮಾತುಗಳಿಗೆ ಇಂದು ಬೆಲೆಯಿಲ್ಲದೆ ಸೋಗಿನ ರಾಷ್ಟ್ರೀಯ ಪ್ರತಿಪಾದನಾವಾದಿಗಳಿಗೆ ಎಲ್ಲೆಡೆ ಮನ್ನಣೆ ದೊರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ.

ಚಂದ್ರಶೇಖರನ್ ಕಲ್ಯಾಣ ರಾಮನ್
****

Sunday, November 1, 2009

"ಸಹಿ"ಗನ್ನಡದಿಂದ ಗ್ರಾಹಕ ಸೇವೆಯಲ್ಲಿ ಕನ್ನಡ!

*****



ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸದಿಂದ, ಬ್ಯಾಂಕೊಂದರಲ್ಲಿ (ಕರ್ನಾಟಕದಲ್ಲಿ!) ವ್ಯವಹರಿಸುವಾಗ ಅನುಭವಿಸಿದ ಕಿರಿಕಿರಿಯ ಅನುಭವವನ್ನು "ಕನ್ನಡ, ಕನ್ನಡ ಹಾ ಸಹಿಗನ್ನಡ" ಲೇಖನದ ಮೂಲಕ ('ಹಾಯಿದೋಣಿ' ಅಂಕಣ, ಸಾಪ್ತಾಹಿಕ ಪುರವಣಿ, ಪ್ರಜಾವಾಣಿ, ೧ನೇ ನವಂಬರ್ ೨೦೦೯) ಶ್ರೀಯುತ ಲಕ್ಷ್ಮಣ ಕೊಡಸೆಯವರು ಕನ್ನಡಿಗರ ಹಕ್ಕಾಗಬೇಕಾಗಿರುವ "ಕನ್ನಡದಲ್ಲಿ ಗ್ರಾಹಕ ಸೇವೆ"ಯ ಬಗ್ಗೆ ಕನ್ನಡಿಗರು ತೋರಿರುವ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಘೋಷಣೆಗೆ ಆಕರ್ಷಣೆಗೊಳ್ಳುವುದು, ಕನ್ನಡ ಭಾಷೆಯನ್ನುಳಿಸಲು ಸರ್ಕಾರವೇ ಕ್ರಮ ತೆಗೆದುಕೊಳ್ಳಬೇಕೆಂದುಕೊಳ್ಳುವುದು, ಇತರ ಭಾಷಿಕರಿಗೆ ಹೋಲಿಸಿಕೊಂಡು ನಾವು ನಿರಭಿಮಾನಿಗಳೆಂದುಕೊಳ್ಳುವ ಈ ಯಾವುದು ನಮ್ಮ ಕನ್ನಡ ಭಾಷೆಯ ಉನ್ನತಿಗೆ ಪರಿಹಾರವಲ್ಲ. ಕನ್ನಡಕ್ಕೆ ಶಕ್ತಿ ತುಂಬುವ ಕೆಲಸದಲ್ಲಿ ನಮ್ಮ-ನಿಮ್ಮಂತ ಶ್ರೀ ಸಾಮಾನ್ಯನ ಪಾತ್ರ ಬಹಳ ಹಿರಿದಾದದ್ದು ಎಂಬ ಮಾತುಗಳನ್ನು ಕೊಡಸೆಯವರು ಈ ಮೂಲಕ ತಿಳಿಹೇಳಿದ್ದಾರೆ.

ಸಹಿ ಎಂಬುದು ವ್ಯಕ್ತಿಯೊಬ್ಬನ ವೈಯುಕ್ತಿಕ ಸಂಕೇತ, ತನ್ನ ಅಭಿ ವ್ಯಕ್ತಿಯ ಲಾಂಛನ ಎಂಬುದು ನೂರಕ್ಕೆ ನೂರು ಸತ್ಯ. ಅಂತೆಯೇ ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿ ಹೊರ ಹೊಮ್ಮಿರುವ ಭಾರತದ, ಕರ್ನಾಟಕ ಪ್ರಾಂತ್ಯದ ಭಾಷೆ ಕನ್ನಡ ಎಂಬುದು ಸಹ ಅಷ್ಟೆ ಸತ್ಯವಾದದ್ದು. ಕರ್ನಾಟಕದಲ್ಲಿ ಕನ್ನಡದ ಬಳಕೆಗೆ, ಕನ್ನಡಿಗರ ಅಭಿವೃದ್ಧಿಗೆ ಸಂವಿಧಾನ ನಮಗೆ ಸವಲತ್ತು ಒದಗಿಸಿದೆ. ಇದರಂತೆ ಕರ್ನಾಟಕದಲ್ಲಿನ ಎಲ್ಲಾ ವ್ಯವಹಾರಸ್ಥರು ಕನ್ನಡ ಅರಿತವರಾಗಿ ತಮ್ಮ ಎಲ್ಲಾ ವ್ಯವಹಾರದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕಾಗಿರುವುದು ಅವರ ಮೂಲ ಧರ್ಮವಾಗಬೇಕಾದದ್ದು ಸಹಜವಾದದ್ದು. ಮುಖ್ಯವಾಗಿ ನಾವು ಎಲ್ಲರೊಡನೆ ಕನ್ನಡದಲ್ಲಿ ವ್ಯವಹರಿಸುವಂತಾದರೆ ಮಾತ್ರ ನಮ್ಮ ಹಕ್ಕಿಗೂ ಬೆಲೆ ಬರುತ್ತದಲ್ಲವೆ? ಇಲ್ಲಿ ನಾವು ಗಮನಿಸಬೇಕಾಗಿರುವುದು, ನಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವುದರಿಂದ ಸಣ್ಣ ರೀತಿಯಲ್ಲಿ ನಾವು ಒಂದು ಆಂದೋಲವನ್ನೇ ಹುಟ್ಟು ಹಾಕಬಹುದಾಗಿದೆ.

ಹೌದು ಕರ್ನಾಟಕದಲ್ಲಿ, 'ಕನ್ನಡದಲ್ಲಿ ಗ್ರಾಹಕ ಸೇವೆ' ಕುರಿತಾಗಿ ನಾನು ಇಲ್ಲಿ ಹೇಳ್ತಾ ಇದೀನಿ. ಬ್ಯಾಂಕಿನಲ್ಲಿ ಕನ್ನಡ ಇಲ್ಲ ಅಂದ್ರೆ, ಅವರು ಕನ್ನಡದಲ್ಲಿ ಸೇವೆ ಕೊಡ್ದೆ ಇರೋದು ಒಂದು ಕಾರಣವಾದರೆ, ನಾವು ಕನ್ನಡ ಉಪಯೋಗಿಸದೆ ಇರೋದು ಇನ್ನೊಂದು ಕಾರಣ. ಅದಕ್ಕಗಿ ನಾವು ಹೀಗೆ ಮಾಡಬಹುದಲ್ಲವೇ.

೧] ಕೇವಲ ಸಹಿ ಮಾತ್ರವಲ್ಲ! ಇನ್ನು ಮುಂದೆ ನಾವು ನಮ್ಮ ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲೇ ಬರೆಯೋಣ
೨] ಬ್ಯಾಂಕಿನ ಎಟಿಎಂ ಉಪಯೋಗಿಸುವಾಗ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳೋಣ
೩] ಬ್ಯಾಂಕಿನೊಡನೆ ಯಾವುದೇ ವ್ಯವಹಾರವಿರಲಿ ಪತ್ರ ವ್ಯವಹಾರ ಕನ್ನಡದಲ್ಲೇ ಮಾಡೋಣ
೪] ಬ್ಯಾಂಕಿನ ಕರೆ ಕೇಂದ್ರಗಳಿಂದ ಕರೆ ಬಂದಾಗ ಅಥವ ನಾವು ಅವರಿಗೆ ಕರೆ ಮಾಡಿದಾಗ ಕನ್ನಡದಲ್ಲಿ ಮಾತನಾಡಲು ಆಗ್ರಹಿಸೋಣ
೫] ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ, ಬ್ಯಾಂಕಿಗೆ ಹಣ ತುಂಬುವಾಗ, ಹಣ ತೆಗೆಯುವಾಗ ಕನ್ನಡದ ಅರ್ಜಿ ನಮೂನೆಗಳಿಗೆ ಆಗ್ರಹಿಸೋಣ. ಅವರು ಕೊಡುವ ನಮೂನೆಗಳಲ್ಲಿ ಕನ್ನಡದಲ್ಲೇ ಎಲ್ಲ ವಿವರಗಳನ್ನು ನಮೂದಿಸೋಣ.
ಇದು ಬ್ಯಾಂಕಿನವರಿಗೆ ಕನ್ನಡದ ಅನಿವಾರ್ಯತೆಯನ್ನು ಹುಟ್ಟು ಹಾಕುತ್ತದೆ. ಕನ್ನಡಿಗರಿಗೆ ಕೆಲಸ ದೊರೆಯುತ್ತದೆ. ಕನ್ನಡ ಬರದ ಕೆಲಸಗಾರರು ಕನ್ನಡ ಕಲಿಯಬೇಕಾದ ಅನಿವಾರ್ಯತೆಯನ್ನು ಉಂಟು ಮಾಡುತ್ತದೆ.

ಇದು ಕೇವಲ ಬ್ಯಾಂಕ್ ಗೆ ಮಾತ್ರ ಸೀಮಿತವಲ್ಲ. ನಾವು ಗ್ರಾಹಕ ಸೇವೆ ಪಡೆಯೋ ಎಲ್ಲೆಡೆ (ರೈಲು, ಬಸ್ಸು ಟಿಕೆಟ್ಟು ಖರೀದಿಸುವಾಗ, ವಿಮಾ ಕಂಪನಿಗಳೊಡನೆ ವ್ಯವಹರಿಸುವಾಗ, ಮೊಬೈಲ್ ಕಂಪನಿಗಳ ಕರೆ ಕೇಂದ್ರದವರೊಡನೆ ಮಾತನಾಡುವಾಗ, ಅಂಗಡಿ-ಮುಂಗಟ್ಟು-ಮಾಲ್ ಗಳಲ್ಲಿ ವ್ಯವಹರಿಸುವಾಗ) ಕನ್ನಡವನ್ನು ಈ ರೀತಿ ನಾವು ಉಪಯೋಗಿಸುವ ಹಕ್ಕು ನಮಗಿದೆ.


ಇದು ಅಭಿಮಾನ ಮತ್ತು ನಮ್ಮ ಅಂತಂಗದ ಧ್ವನಿಯಾಗಿ ಹೊರಹೊಮ್ಮುವಂತಾಗಬೇಕು ಎಂಬುದು ಕೊಡಸೆಯವರ ಅಭಿಲಾಷೆ.

ಎಲ್ಲರಿಗೂ "ಕರ್ನಾಟಕ ರಾಜ್ಯೋತ್ಸವ" ಶುಭಾಶಯಗಳು.

ಚಂದ್ರಶೇಖರನ್ ಕಲ್ಯಾಣ ರಾಮನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****