Monday, December 21, 2009

ಕನ್ನಡದ ಬದ್ಧತೆಯಿರುವವರನ್ನು ಆರಿಸಿ ಪಾಲಿಕೆಗೆ ಕಳಿಸಿ....

*****

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ-ನಿಯತಕಾಲಿಕೆ-ಪುಸ್ತಕಗಳ ಮಾರಾಟ ಸ್ಥಗಿತಗೊಂಡಿರುವ ಬಗ್ಗೆ ಹಿಂದೆ ಹೇಳಿದ್ದೆ.

ಕೆಲ ದಿನಗಳ ಹಿಂದೆ, ನಿಲ್ದಾಣದ ಒಳಾಂಗಣದಲ್ಲಿ (ಸುರಕ್ಷೆ ತಪಾಸಣೆಯ ನಂತರ) ವಿಮಾನ ನಿಲ್ದಾಣ ಪ್ರಾಧಿಕಾರ ಉಚಿತವಾಗಿ ಪ್ರಯಾಣಿಕರ ಓದಿಗಾಗಿ ಇರಿಸಿದ್ದ ಪತ್ರಿಕೆಗಳ ಅಡ್ಡಣಿಗೆಯಲ್ಲಿ, ಇಂಗ್ಲೀಷ್ ಪತ್ರಿಕೆಗಳ ನಡುವೆ "ವಿಜಯ ಕರ್ನಾಟಕ" ಕಾಣಿಸಿಕೊಂಡಿತ್ತು. ಬೆಂಗಳೂರಿನಿಂದ ಪ್ರಕಟವಾಗುವ ಎಲ್ಲಾ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿರುವ ನಿಲ್ದಾಣ ಪ್ರಾಧಿಕಾರ ಕನ್ನಡದ್ದು ಮಾತ್ರ ಏಕೆ ಒಂದೇ ಪತ್ರಿಕೆ ಮಾತ್ರ ಇರಿಸಿದೆ ಎಂದು ಅವರನ್ನು ಪ್ರಶ್ನಿಸಿದ್ದೆ. ಇವತ್ತು ಇದೇ ಜಾಗದಲ್ಲಿ ವಿ.ಕ ಪಕ್ಕ "ಪ್ರಜಾವಾಣಿ" ಸಹ ಕಂಡು ಬಂತು.



ಆದಷ್ಟು ಬೇಗ ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ಹೊಸದಿಗಂತ, ಸಂಜೆವಾಣಿ, ಈಸಂಜೆ ಹೀಗೆ ಎಲ್ಲಾ ಕನ್ನಡ ಪತ್ರಿಕೆಗಳು ಅಲ್ಲಿ ದೊರೆಯುವಂತಾಗಬೇಕು. ಇಲ್ಲಿಂದ ಪ್ರಯಾಣಿಸುವ ಕನ್ನಡ ಗ್ರಾಹಕರು ಜಾಗೃತರಾಗಿ ಕನ್ನಡ ಪತ್ರಿಕೆಗಳಿಗೆ ಬೇಡಿಕೆ-ಆಗ್ರಹ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ

*****

ಮತ್ತೊಂದು ವಿಪರ್ಯಾಸವೆಂದರೆ ಇಲ್ಲಿ ಪ್ರಕಟವಾಗುವ ಜಾಹೀರಾತುಗಳು. ಇದು ಜಾಹೀರಾತು ಹೊರಡಿಸಬಯಸುವವರು ಮತ್ತು ಅವರನ್ನು ದಾರಿ ತಪ್ಪಿಸುವ ಜಾಹೀರಾತು ಸಂಸ್ಥೆಗಳ ಧಾರ್ಷ್ಟ್ಯ ಪ್ರದರ್ಷನ ಎಂದು ಹೇಳಬಹುದಾಗಿದೆ.



ಹೇಳಿ ಈ ಜಾಹೀರಾತು ಇಂಗ್ಲೀಷ್ ಲಿಪಿ ಬಲ್ಲ ಹಿಂದಿಯವರಿಗ, ಅಥವ ಕನ್ನಡಿಗರು ಹಿಂದಿಯನ್ನು ಇಂಗ್ಲೀಷ್ ನಲ್ಲಿ ಓದಿ ನಮ್ಮ ಬಗ್ಗೆ ತಿಳಿದುಕೊಳ್ಳಲಿ ಎಂಬ ಇವರ ಉದ್ಧಟತನವ? ನಾರ್ವೇ ದೇಶದ ಮೂಲದ "ಯೂನಿನಾರ್" ಎಂಬ ಈ ಮೊಬೈಲ್ ಸಂಸ್ಥೆ ತನ್ನ ದೇಶದ ವಿಮಾನ ನಿಲ್ದಾಣದಲ್ಲಿ ಇದೇ ರೀತಿ ಜಾಹೀರಾತು ಹೊರಡಿಸಲು ಈ ಜಾಹೀರಾತು ಸಂಸ್ಥೆಗಳಿಗೆ ಅವಕಾಶ ಕೊಡುತ್ತದೆಯ? ಬೆಂಗಳೂರಿಗೆ ಬಂದು ಹೋಗುವ ಪರಭಾಷಿಕರಿಗಿಂತ ನಾರ್ವೇ ವಿಮಾನ ನಿಲ್ದಾಣಗಳಲ್ಲಿ ಬಂದು ಹೋಗುವ ಹೆಚ್ಚಿನ ನಾರ್ವೇತರರನ್ನು ನಾನು ನೋಡಿದ್ದೇನೆ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾರೇ ಜಾಹೀರಾತು ಹೊರಡಿಸಲಿ ಅದು ಕನ್ನಡಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಬೇಕಾಗಿರುವ ಜಾಹೀರಾತಾಗಿರಬೇಕು. ಇವರ ಜಾಹೀರಾತನ್ನು ಕನ್ನಡದಲ್ಲಿ "ಇದು ನನ್ನ ನಂಬರ್" ಅಂತ ಮುಂಬೈನ 'ಛತ್ರಪತಿ ಶಿವಾಜಿ' ಅಥವ ಚೆನ್ನೈ ನ 'ಅಣ್ಣಾ' ವಿಮಾನ ನಿಲ್ದಾಣದಲ್ಲಿ ಮಾಡಿಸಿ ಅಂತ ಹೇಳ್ತಿಲ್ಲ. ಅಲ್ಲಿ ಕ್ರಮವಾಗಿ ಮರಾಠಿ ಮತ್ತು ತಮಿಳನಲ್ಲಿ ಮಾಡಿಸಬೇಕಾದ್ದು ಜಾಹೀರಾತು ಸಂಸ್ಥೆಗಳ ಹೊಣೆಗಾರಿಕೆ.

ಅಲ್ಲಲ್ಲಿಯ ಸ್ಥಳೀಯ ಭಾಷೆ, ಜನಾಂಗಕ್ಕೆ ಆಧ್ಯತೆ ಎಂಬುದು ಪ್ರಚಲಿದಲ್ಲಿರುವಂತೆ, ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರುವುದು ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ, ಹಾಗಾಗಿ ಕರ್ನಾಟಕದಲ್ಲಿನ ಯಾವುದೇ ಹೊಸ ವ್ಯವಹಾರದಲ್ಲಿ ಕನ್ನಡ ಅನುಷ್ಠಾನವಾಗಬೇಕೆಂಬುದು ಕನ್ನಡಿಗನ ಸಹಜ ಬೇಡಿಕೆಗೆ ಪೂರಕವಾಗುತ್ತದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಆಧ್ಯತೆ ಒದಗಿಸುವ ಮೂಲಕ, ವ್ಯವಹಾರಸ್ಥರು ಕನ್ನಡಿಗನ ಮನ್ನಣೆಗೆ ಪಾತ್ರವಾಗುತ್ತಾರೆ. (ಹಾಗೆಯೆ ಇತರ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಗಳಿಗೆ ಪ್ರಧಾನತೆ ಒದಗಿಸಿ ಅಲ್ಲಿನ ಸ್ಥಳೀಯರ ಮನ ಗೆಲ್ಲುವುದು ವ್ಯವಹಾರದ ಒಂದು ದಾರಿ).

ಜಾಹೀರಾತುಗಳಲ್ಲಿ ಕನ್ನಡ ಕಡ್ಡಾಯಗೊಳಿಸಿರುವ ಬಗ್ಗೆ ನಮ್ಮ ಸರ್ಕಾರದ ಆದೇಶವಿದೆ. ನಮ್ಮ ಸರ್ಕಾರದ ಎಲ್ಲಾ ಮಂತ್ರಿವರೇಣ್ಯರು, ಆಡಳಿತಗಾರರು ಇಲ್ಲಿ ಓಡಾಡುತ್ತಾರೆ. ಇಲ್ಲಿನ ಒಳಾಂಗಣದಲ್ಲಿನ ಒಂದೇ ಒಂದು ಜಾಹೀರಾತಿನಲ್ಲಿ ಕನ್ನಡವಿಲ್ಲ!. ತಲೆಯೆತ್ತಿ ಒಮ್ಮೆ ಇಂತಹುವುಗಳನ್ನು ಅವರು ನೋಡಿ ಕ್ರಮ ಎಂದು ತೆಗೆದುಕೊಳ್ಳುವರೋ ಎಂಬುದೆ ಪ್ರಶ್ನೆಯಾಗಿದೆ. ಅಥವ ಇಂತಹುವಗಳನ್ನು ನೋಡಿ ಸರಿಪಡಿಸುವಂತಹವರನ್ನು ಮಾತ್ರ ಆರಿಸಿ ಕಳುಹಿಸುವ ಜವಾಬ್ದಾರಿ ಸಹ ನಮ್ಮ ಮೇಲಿದೆ.

ಇನ್ನೇನು ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹತ್ತಿರದಲ್ಲಿದೆ. ಬೆಂಗಳೂರಿನಲ್ಲಿ ಇರುವ ಎಲ್ಲಾ ಜಾಹೀರಾತುಗಳಲ್ಲಿ, ನಾಮಫಲಕಗಳಲ್ಲಿ, ಎಲ್ಲಾ ರೀತಿಯಲ್ಲಿ ಕನ್ನಡಕ್ಕೆ ಮಾನ್ಯತೆ ದೊರಕಬೇಕೆ? ಹಾಗಾದ್ರೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಬದ್ಧತೆಯಿರುವವರನ್ನು ಆರಿಸಿ ಪಾಲಿಕೆಗೆ ಕಳಿಸಿ.

*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****

Monday, December 7, 2009

ಹೈದರಾಬಾದು ರಾಜ್ಯ ನೋಟಿನಲ್ಲಿ ಕನ್ನಡ, ಈಗಿನ ಆಡಳಿತದಲ್ಲಿ!

*****

ಗಮನಿಸಿ, "ಹಳೆಯ ಒಂದು ರೂಪಾಯಿಯ ಚಿತ್ರ".




ಆದರೆ ಇದು ಭಾರತ ಸರ್ಕಾರ ಹೊರಡಿಸಿದ್ದಲ್ಲ! ಕನ್ನಡದಲ್ಲಿ ಒಂದು ರೂಪಾಯಿ ಎಂದು ಬರೆದಿರುವುದರಿಂದ ನಮ್ಮ ಸರ್ಕಾರ ಏನಾದ್ರೂ ಮಾಡಿಸಿರಬಹುದು ಎಂದು ಎಲ್ಲರಿಗೂ ಅನ್ನಿಸಿರಬಹುದು. ಅಲ್ಲ, ಆಗಿನ ನಿಜಾಮರ ಹೈದರಾಬಾದು ರಾಜ್ಯದ ಆಡಳಿತದಲ್ಲಿ ಚಲಾವಣೆಯಲ್ಲಿದ್ದ ಒಂದು ರೂಪಾಯಿಯ ಚಿತ್ರ. ಹೌದು ಆ ಪ್ರದೇಶದಲ್ಲಿ ವ್ಯವಹರಿಸುವವ ಅನುಕೂಲಕ್ಕಾಗಿ ಅಂದು ಆ ಪ್ರದೇಶದಲ್ಲಿ ಪ್ರಚಲಿತವಿದ್ದ ಭಾಷೆಗಳಲ್ಲೇ ನೋಟಿನ ಮೇಲೆ ಬರೆಸಿದ್ದರು. ರಾಯಚೂರು, ಗುಲ್ಬರ್ಗ, ಬೀದರ್ ಹೀಗೆ ಅಚ್ಚ ಕನ್ನಡದ ಪ್ರದೇಶಗಳು ಆಗ ಹೈದರಾಬಾದು ರಾಜ್ಯದ ಆಳ್ವಿಕೆಯಲ್ಲಿದ್ದು ಅಲ್ಲಿ ನೆಲೆಸಿದ್ದ ಕನ್ನಡಿಗರ ಅನುಕೂಲಕ್ಕಾಗಿ ನೋಟಿನ ಮೇಲೆ ಕನ್ನಡವನ್ನು ಸಹ ಬಳಸಿದ್ದರು.

ಮತ್ತೊಂದು ಚಿತ್ರ ಗಮನಿಸಿ.




ಇದು ೧೯೩೦, ಮೈಸೂರು ಸಂಸ್ಥಾನದಲ್ಲಿನ ಪ್ರದೇಶಗಳಲ್ಲಿನ ನೋಂದಣಿ ಕೆಲಸಗಳಿಗಾಗಿ ಪ್ರಚಲಿತದಲ್ಲಿದ್ದ ಛಾಪಾ ಕಾಗದ. ಆಗ ಛಾಪಾ ಕಾಗದದ ಮೇಲಿನ ಬರಹ, ನೋಂದಣಿ ಕಚೇರಿಗಳಲ್ಲಿನ ಮೊಹರು ಎಲ್ಲೆಡೆ ಕನ್ನಡ ವ್ಯಾಪಕವಾಗಿ ಬಳಸಲ್ಪಡುತ್ತಿತ್ತು.

ಇವೆಲ್ಲಾ ಮುಗಿದು ಭಾರತ ದೇಶ ಸ್ಥಾಪನೆಯಾಯ್ತು. ಭಾಷಾವಾರು ಪ್ರಾಂತ್ಯಗಳಾಗಿ ಪ್ರದೇಶಗಳನ್ನು ವಿಂಗಡಿಸಲಾಯ್ತು. ಬಹುತೇಕ ಕನ್ನಡ ಮಾತನಾಡುವವರೆಲ್ಲ ಮೈಸೂರು ರಾಜ್ಯ ಹೆಸರಿನಲ್ಲಿ ಒಂದಾದರು. ಆಮೇಲೆ ಮೈಸೂರು ಕರ್ನಾಟಕವೂ ಆಯ್ತು. ಇಲ್ಲಿನ ಆಡಳಿತದ ಎಲ್ಲಾ ಹಂತಗಳಲ್ಲಿ ಕಡ್ಡಾಯ ಕನ್ನಡ ಬಳಕೆಯ ಕಾನೂನು, ಮತ್ತೊಂದು ಮಗದೊಂದು ಆಯ್ತು. ಆದರೆ ನಂತರದಲ್ಲಿ ಕನ್ನಡಿಗರು ಉಪಯೋಗಿಸಬೇಕಾಗಿ ಬಂದ ಛಾಪಾ ಪತ್ರದ ಕಥೆ ಏನಾಯ್ತು?



ನಂತರ ಅದು ಇದೂ ಹಗರಣಗಳು ನಡೆದು ಇದನ್ನು ಈಗ ಬ್ಯಾಂಕುಗಳ ಮೂಲಕ ವಿತರಿಸುವ ಕೆಲಸ ಶುರುವಾಗಿದೆ.

ಮೊನ್ನೆ ಗೆಳೆಯ ವಿವೇಕ್ ತಮ್ಮ ನೋಂದಣಿ ಕೆಲಸವೊಂದರ ಸಲುವಾಗಿ ಪಡೆದ ಛಾಪಾ ಕಾಗದದಲ್ಲಿ ಬಂದೊದಗಿರುವ ಪರಸ್ಥಿತಿ ಬಗ್ಗೆ ಗಮನಿಸಲು ಅದರ ಪ್ರತಿ ಕಳುಹಿಸಿದ್ದರು.




ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೂಲಕ ವಿತರಿಸಲ್ಪಟ್ಟ, ಕರ್ನಾಟಕ ಸರ್ಕಾರದ ಹೆಸರಿರುವ, ಆದರೆ ಒಂದೇ ಒಂದು ಕನ್ನಡ ಅಕ್ಷರವಿಲ್ಲದ ಛಾಪಾ ಪತ್ರ ಇದಾಗಿದೆ.


ಇದು ಕೇವಲ ಛಾಪಾ ಕಾಗದದ ಕಥೆ ಮಾತ್ರವಲ್ಲ. ಕನ್ನಡಿಗ ಜನ ಸಾಮಾನ್ಯರು ಇವತ್ತು ಬ್ಯಾಂಕು, ವಿಮಾ ಸಂಸ್ಥೆ, ಹೋದರೆ ಅರ್ಜಿ, ನಮೂನೆ ಕನ್ನಡದಲ್ಲಿರುವುದಿಲ್ಲ. ಕನ್ನಡದಲ್ಲಿ ಮಾತನಾಡಿದರೆ ಸೇವೆ ನಿರಾಕರಣೆಯಾಗುತ್ತದೆ. {ಇಂತಹ ಕಡೆ ಹೋದರೆ ಕೇವಲ ಇಂಗ್ಲೀಷ್-ಹಿಂದಿಯಲ್ಲಿ ಮಾತನಾಡಬೇಕಾಗುವ ವಾತಾವರಣ ಅಲ್ಲಿರುತ್ತೆ).

ಇವತ್ತು ಕನ್ನಡದ "ಭಾರತೀಯ ಅಂಚೆ" ಹೆಸರು ಮಾಯವಾಗಿ ಅದು 'INDIA POST', ಹಿಂದಿಯ 'ಭಾರತೀಯ ಡಾಕ್' ಆಗಿ ಪರಿವರ್ತನೆಯಾಗಿದೆ.




ಬೆಂಗಳೂರಿನ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಹೆಸರಿನ ಲಾಂಛನದಿಂದ ನಿಧಾನವಾಗಿ ಕನ್ನಡ ಮಾಯವಾಗಿದೆ. ನಮ್ಮ ಕರ್ನಾಟಕ ಸರ್ಕಾರ ಕನ್ನಡ ಅನುಷ್ಠಾನ ವರ್ಷ ಅಂತ ಘೋಷಣೆ ಮಾಡತ್ತೆ! ಇದರ ಜತೆಗೆ ಕನ್ನಡ ಅಭಿವೃದ್ಢಿ ಎಂಬ ಪ್ರಾಧಿಕಾರವೊಂದು ಕನ್ನಡಿಗರ ರಕ್ಷಣೆಗಿದೆ! ಆದರೆ ಎಲ್ಲೆಡೆ ಕನ್ನಡ ಅನುಷ್ಠಾನ ಮಾಡುವ ಇಚ್ಛಾಶಕ್ತಿ ಮಾತ್ರ ಇವರ್ಯಾರಲ್ಲೂ ಕಂಡು ಬರುತ್ತಿಲ್ಲ.

*****

ಜಿ. ಎಸ್. ಮೇಲ್ಕೋಟೆ: ಮೇಲಿನ ಒಂದು ರೂಪಾಯಿ ಚಿತ್ರದಲ್ಲಿನ ಸಹಿ ನೋಡಿ. ನಿಜಾಮರ ಹೈದರಾಬಾದು ರಾಜ್ಯ ಆಡಳಿತದಲ್ಲಿ ತೊಡಗಿಸಿಕೊಂಡಿದ್ದ ಒಬ್ಬ ಕನ್ನಡಿಗ. ಆ ಸಮಯದಲ್ಲಿ ಅಲ್ಲಿ ಪ್ರಚಲಿತವಿದ್ದ (ಕನ್ನಡವನ್ನೂ ಸೇರಿ) ಭಾಷೆಗಳನ್ನು ನೋಟಿನಲ್ಲಿ ಸೇರಿಸಲು ಬಹುಷ: ಸಲಹೆ ನೀಡಿದ್ದು ಇವರೆ ಇರಬಹುದು! ಹೈದರಾಬಾದಿನ ಕನ್ನಡ ಸಾಹಿತ್ಯ ಕೂಟವನ್ನು ಕಟ್ಟಿ ಬೆಳೆಸಿದವರು. ನಂತರದಲ್ಲಿ ಇವರು ಹೈದರಾಬಾದ್ನಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿ ಭಾರತ ಸರ್ಕಾರದಲ್ಲೂ ಸೇವೆ ಸಲ್ಲಿಸಿದ್ದವರು.

*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

****