
*****
ಬೆಂ.ಮೆ.ರೈ.ನಿ.ನಿ. ವ್ಯವಸ್ಥಾಪಕ ನಿರ್ದೇಶಕ ಶ್ರೀಯುತ ಶಿವಶೈಲಂ ರವರು ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಿಗೆ ಸಾಧಕರ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಿರ್ಧರಿಸಲಾಗಿರುವ ಹೆಸರುಗಳಾದ ಮಹಾತ್ಮಗಾಂಧಿ, ವಿವೇಕಾನಂದ ಪೂಜನೀಯರೆ, ಆದರೆ ಈಗಾಗಲೇ ಈ ಮಹನೀಯರ ಹೆಸರುಗಳಲ್ಲಿ ರಸ್ತೆ, ಪ್ರತಿಮೆ ಹಾಗು ಇನ್ನೂ ಇತರ ಸ್ಮಾರಕಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಇವರ ಜೀವನ ಚರಿತ್ರೆಗಳು ನಮ್ಮ ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಇವರ ನೆನಪು ಶಾಶ್ವತವಾಗಿರಲು ಅವರ ಸ್ವಂತ ಸ್ಥಳಗಳನ್ನೂ ಒಳಗೊಂಡಂತೆ ಅಖಿಲ ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹ ಅನೇಕ ಸ್ಮಾರಕಗಳು ಇವೆ. ಆದರೆ ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಿಗೆ ಮತ್ತೆ ಇವರ ಹೆಸರುಗಳನ್ನು ಇಟ್ಟರೆ ನಮ್ಮ ಕರ್ನಾಟಕದ ಸಾಧಕರನ್ನು ಯಾರು? ಯಾವಾಗ? ಎಲ್ಲಿ? ಹೇಗೆ? ನೆನೆಸಿಕೊಳ್ಳುವುದು ಎಂಬುದು ಪ್ರಶ್ನೆಯಾಗಿದೆ.
ಈ ಮೆಟ್ರೋ ರೈಲು ಓಡಾಡುವುದು ಬೆಂಗಳೂರಿನ ರಸ್ತೆಗಳಲ್ಲಿ. ಇದರಲ್ಲಿ ಓಡಾಡುವವರು ಕಾಣಬೇಕಾದ್ದು ಬೆಂಗಳೂರು -ಕರ್ನಾಟಕದ ಬೆಳವಣಿಗೆಯ ಇತಿಹಾಸ ಮತ್ತು ನಾಡು-ನುಡಿಯ ಪರಂಪರೆ ಹಾಗು ಸಂಸ್ಕೃತಿ. ಹಾಗಾಗಿ ಇದಕ್ಕಾಗಿ ಹಗಲಿರುಳು ಶ್ರಮಿಸಿದ ನಮ್ಮದೇ ಸಾಧಕರ ಪರಿಚಯಿಸುವ ಕೆಲಸವಾಗಬೇಕಾಗಿರುವುದು ಸಹಜವಾದದ್ದು. ನಮ್ಮದೇ ಊರುಗಳಲ್ಲಿ ನಮ್ಮ ಸಾಧಕರನ್ನು ನಾವು ನೆನಪಿಸಿಕೊಳ್ಳಲಾಗದಿದ್ದರೆ ಇನ್ಯಾರು ನಮಗೆ ಮಾನ್ಯತೆ ನೀಡುತ್ತಾರೆ?
ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರದ ಅರಸರು, ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ - ಕ್ರಾಂತಿಯೋಗಿ ಬಸವಣ್ಣ, ಶಿವಶರಣೆ ಅಕ್ಕಮಹಾದೇವಿ, ಸಿದ್ದಗಂಗಾ ಶಿವಕುಮಾರ ಸ್ವಾಮಿಗಳು, ಕರ್ನಾಟಕ ಏಕೀಕರಣದ ರೂವಾರಿಗಳಾದ ಆಲೂರು ವೆಂಕಟರಾಯರು, ಅನಕೃ - ನಮ್ಮ ಮೇರು ಸಿನಿಮಾ ನಟರಾದ ರಾಜಕುಮಾರ, ವಿಷ್ಣುವರ್ಧನ, ಶಂಕರ ನಾಗ್ - ಖ್ಯಾತ ಕ್ರಿಕೆಟಿಗರಾದ ಚಂದ್ರಶೇಖರ್, ವಿಶ್ವನಾಥ್, ಕುಂಬ್ಳೆ - ನಮ್ಮ ರಾಜಕೀಯ ಧುರೀಣರಾದ ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ದೇವೇಗೌಡ - ತಮ್ಮ ಉದ್ಯಮಗಳ ಮೂಲಕ ವಿಶ್ವಖ್ಯಾತರಾಗಿರುವ ಐಟಿ ದಿಗ್ಗಜ ನಾರಾಯಣ ಮೂರ್ತಿ, ಕ್ಯಾಪ್ಟನ್ ಗೋಪಿನಾಥ್ - ಜ್ಣಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು - ಕನ್ನಡದ ವಿಜ್ಞಾನಿಗಳಾದ ಸಿ.ಎನ್.ಆರ್ ರಾವ್, ಯು.ಆರ್. ರಾವ್ ಹೀಗೆ ಇನ್ನಿತರ ಕನ್ನಡ ಸಾಧಕರು ಮೆಟ್ರೋ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ?
ಗಾಂಧೀಜಿ, ವಿವೇಕಾನಂದರಂತೆ ಈ ಮೇಲಿನವರು ಸಹ ತಮ್ಮದೇ ಕ್ಷೇತ್ರಗಳಲ್ಲಿ ಸಹಸ್ರಾರು ಕನ್ನಡಿಗರಲ್ಲಿ ಕಠಿಣ ಪರಿಶ್ರಮ ಮತ್ತು ಅದಕ್ಕಿರುವ ಬೆಲೆಯನ್ನು ಶಾಶ್ವತ ವಾಗಿ ನೆಲೆಯೂರುವಂತೆ ಮಾಡಿರುವ ಹಾಗು ಪ್ರೇರೇಪಿಸುತ್ತಿರುವ ಸಾಧಕರು. ಮೊದಲು ನಮ್ಮ ಕನ್ನಡಿಗ ಸಾಧಕರ (ಕನ್ನಡಿಗರೂ ಭಾರತೀಯರೇ) ಹೆಸರು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಾಗಲಿ. ಮೆಟ್ರೋ ನಿಲ್ದಾಣಗಳು ಎಲ್ಲಾ ರೀತಿಯಲ್ಲೂ ಕನ್ನಡತನವನ್ನು ಬಿಂಬಿಸುವ ತಾಣವಾಗಲಿ. ಮಾನ್ಯ ಮುಖ್ಯಮಂತ್ರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗು ನಗರಾಡಳಿತ ಸಂಸ್ಥೆಗಳು ಮೆಟ್ರೋ ಅಧಿಕಾರಿಗಳ ಜತೆ ಚರ್ಚಿಸಿ ಮೆಟ್ರೋ ಕನ್ನಡದ ಹೊಸ ಸಂಸ್ಕೃತಿಯಾಗಿ ಬೆಳೆಯುವತ್ತ ಸೂಕ್ತ ಸಲಹೆ - ಸೂಚನೆಗಳನ್ನು ನೀಡಲಿ
*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****
2 comments:
nijavaagalu olleya hesarugalanne idabekada avashyakate ide.. haagu kannada naadigaagi shramisida ella vyaktigala hesarugalannu idodu sookta anta nanna bavane kooda..
ನಿಮ್ಮ ಅಭಿಪ್ರ್ರಾಯಕ್ಕೆ ನನ್ನ ಸಹಮತವಿದೆ.
Post a Comment