"೨೧ನೇ ಫೆಬ್ರವರಿ ೧೯೫೨" ನಮ್ಮ ಪಕ್ಕದ ಬಾಂಗ್ಲಾದೇಶಿಗರ ಚರಿತ್ರೆಯಲ್ಲಿನ ಒಂದು ಐತಿಹಾಸಿಕ ದಿನ. ೧೯೪೭ ರಲ್ಲಿ ಭಾರತ ಮತ್ತು ಪಾಕಿಸ್ತಾನವೆಂಬ ಎರಡು ಹೊಸ ದೇಶಗಳು ಉದಯವಾದಾಗ, ಪೂರ್ವ ಬಂಗಾಳಿಗಳು ಪಾಕಿಸ್ತಾನದಲ್ಲಿ ಸೇರಿದ್ದರು. ಪೂರ್ವ ಬಂಗಾಳಿಗಳ ಈಗಿನ 'ಬಾಂಗ್ಲಾದೇಶ'ಅಂದು ಪೂರ್ವ ಪಾಕಿಸ್ತಾನವೆನಿಸಿಕೊಂಡಿತ್ತು. ಪಾಕಿಸ್ತಾನ ಸರ್ಕಾರದ ಆಡಳಿತಗಾರರು, 'ಉರ್ದು' ಪಾಕಿಸ್ತಾನದ ಅಧಿಕೃತ ಭಾಷೆ ಎಂದು ಘೋಶಿಸಿದರು.
ಭಾಷಾ ಸ್ವಾಭಿಮಾನಿಗಳಾದ ಪೂರ್ವ ಬಂಗಾಳಿಗರನ್ನು ಇದು ಸಹಜವಾಗಿ ಕೆರಳಿಸಿತ್ತು. ಅಲ್ಲಿನವರೆಗೆ ಬಂಗಾಳಿಗಳಿಗೆ, ಉರ್ದುವಿನ ತಲೆ-ಬುಡ ಸಹ ತಿಳಿದಿರಲಿಲ್ಲ. ಅವರ ಭಾಷೆ-ಸಂಸ್ಕೃತಿಯೇನಿದ್ದರೂ ಅದು ಕೇವಲ ಬಂಗಾಳಿ ಮಾತ್ರವಾಗಿತ್ತು. ಪಾಕಿಸ್ತಾನ ಉದಯವಾದ ಕೇವಲ ಆರು ತಿಂಗಳಿನಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷ ಚಳುವಳಿ ಪ್ರಾರಂಭವಾಯ್ತು. ಆದರೆ ಪಾಕಿಸ್ತಾನದ ಆಡಳಿತಗಾರರು ಇದಕ್ಕೆ ಪೂರಕವಾಗಿ ಸ್ಪಂದಿಸದೆ ಉರ್ದುವನ್ನು ಬಂಗಾಳಿಗಳ ಮೇಲೆ ಹೇರಲು ಮುಂದಾದರು. ಆಗಿನ ಪಾಕಿಸ್ತಾನದ ಗವರ್ನರ್ ಜನರಲ್ ಜಿನ್ನಾ "ಪೂರ್ವ ಪಾಕಿಸ್ತಾನದ ಬಂಗಾಳಿಗಳ 'ಬಂಗಾಳಿ' ಭಾಷೆ ಕೇವಲ ಆ ಪ್ರಾಂತ್ಯದ ಭಾಷೆ, ಪಾಕಿಸ್ತಾನದ ಅಧಿಕೃತ, ಆಡಳಿತ, ರಾಷ್ಟ್ರ ಭಾಷೆ ಕೇವಲ ಉರ್ದು ಎಂದು ಘೋಶಿಸಿ, ಇದಕ್ಕೆ ವಿರೋಧ ವ್ಯಕ್ತಪಡಿಸುವವರು ಪಾಕಿಸ್ತಾನದ ಶತ್ರುಗಳು ಎಂಬ ಹೇಳಿಕೆ ನೀಡಿದಾಗ ಪೂರ್ವ ಬಂಗಾಳ ಹೊತ್ತಿ ಉರಿಯಿತು. ಅಲ್ಲಿಂದ ಬಂಗಾಳಿ ಭಾಷಾ ಚಳುವಳಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಾ ಮುಂದುವರೆಯಿತು.
೨೧ ನೇ ಫೆಬ್ರವರಿ ೧೯೫೨ ರಂದು ಡಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಚಳುವಳಿಯನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುವ ತವಕದಲ್ಲಿ ಅಲ್ಲಿನ ವಿಧಾನ ಸಭೆಗೆ ನುಗ್ಗಲು ಯತ್ನಿಸಿದರು. ಅಂದು ಚಳುವಳಿಗಾರರು-ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಪೋಲಿಸರು ಡಾಕಾ ವಿಶ್ವವಿದ್ಯಾನಿಲಯದಲ್ಲಿ ಲಾಠಿ ಪ್ರಯೋಗ, ಅಶ್ರುವಾಯು ಸಿಡಿಸಿ ಕೊನೆಗೆ ಗುಂಡಿನ ಮಳೆಗೆರೆದರು. ಅಬ್ದುಲ್ ಬರಕತ್, ರಫೀಕುದ್ದೀನ್ ಅಹ್ಮದ್, ಶಫಿಯುರ್ ರಹಮಾನ್.. ಹೀಗೆ ಇನ್ನಿತರರು ಬಂಗಾಳಿ ಭಾಷೆಗೆ ಸಾರ್ವಭೌಮತೆ ದೊರಕಿಸಿಕೊಡಲು ಗುಂಡಿಗೆ ಎದೆಯೊಡ್ಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಈ ಪ್ರಾಣತ್ಯಾಗ ಬಂಗಾಳಿಗಳ ಭಾಷಾ ಚಳುವಳಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ಇನ್ನೂ ತೀವ್ರತರವಾದ ಹೋರಾಟಗಳಿಗೆ ನಾಂದಿಯಾಯಿತು. ಕೊನೆಗೂ ಪಾಕಿಸ್ತಾನ ಆಡಳಿತ ೧೯೫೪ ರ ಮೇ ನಲ್ಲಿ ಉರ್ದುವಿನ ಜತೆಗೆ ಬಂಗಾಳಿಯನ್ನು ಸಹ ಅಧಿಕೃತ ಆಡಳಿತ ಭಾಷೆಯಾಗಿ ಘೋಷಿಸಿತು.
ನಂತರದಲ್ಲಿ ೧೯೭೧ ರ ಮಾರ್ಚ್ ನಲ್ಲಿ ಪೂರ್ವ ಬಂಗಾಳಿಗಳು, ಪಾಕಿಸ್ತಾನದ ಆಡಳಿತದಿಂದ ಹೊರಬಂದು "ಬಾಂಗ್ಲಾದೇಶ" ವೆಂಬ ಹೆಸರಿನಲ್ಲಿ ಸ್ವತಂತ್ರ ದೇಶವನ್ನು ಸ್ಥಾಪಿಸಿಕೊಂಡದ್ದು ಸಹ ಇತಿಹಾಸ. ೧೯೯೯ ರಲ್ಲಿ ಯುನೆಸ್ಕೋ, ಬಂಗಾಳಿಗಳ ಭಾಷಾ ಚಳವಳಿಯಲ್ಲಿ ಹುತಾತ್ಮರಾದವರನ್ನು ನೆನೆಯುವ ಸಲುವಾಗಿ ಹಾಗು ತಾಯಿನುಡಿಯ ಮಹತ್ವದ ಅರಿವನ್ನು ಪಸರಿಸಲು "ಫೆಬ್ರವರಿ ೨೧ನ್ನು" ಲೋಕ ತಾಯ್ನುಡಿಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
*****
ತಮ್ಮ ತಾಯಿನುಡಿ ಬಂಗಾಳಿ ಕುರಿತಾದ ಬಂಗಾಳಿಗಳ ಸ್ವಾಭಿಮಾನದ ಹೋರಾಟ, ಪ್ರತಿವರ್ಷ ಫೆಬ್ರವರಿ ೨೧ ನ್ನು ಲೋಕ ತಾಯ್ನುಡಿ ದಿನವನ್ನಾಗಿ ಆಚರಿಸಲು ಯುನೆಸ್ಕೋ ನಿರ್ಧರಿಸಿದ ಹಿನ್ನಲೆ, ನುಡಿ ಹಬ್ಬ, ಹೀಗೆ ಭಾಷೆ ಕುರಿತಾದ ಹಲವು ಮಹತ್ವದ ವಿಷಯಗಳನ್ನು ಶ್ರೀ ಸುಗತ ಶ್ರೀನಿವಾಸ ರಾಜು ರವರು "ಏಕೂಷೆ ಫೆಭ್ರವರಿ ಲೋಕ ತಾಯ್ನುಡಿ ದಿನ" ಎಂಬ ತಮ್ಮ ಪುಟ್ಟ ಗ್ರಂಥದಲ್ಲಿ ಹಿಡಿದಿಟ್ಟಿದ್ದಾರೆ.
****
ಭಾಷೆಯೆಂಬುದು ಪ್ರದೇಶವೊಂದರಲ್ಲಿ ಬಳಸುವ ಸಂಪರ್ಕ ಸಾಧನ ಮಾತ್ರವಲ್ಲ. ಆದು ಆ ಪ್ರದೇಶದ ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಜೀವನ ಶೈಲಿಯ ಪ್ರತಿಬಿಂಬ. ಮನುಷ್ಯ ಅಭಿಮಾನ ಜೀವಿ,ಅವನ ಜೀವನದಲ್ಲಿ ಉಂಟಾಗುವ ಮುಖ್ಯವಾದ ಪ್ರಗತಿ ಅಭಿಮಾನದಿಂದಲೇ ಸಾಧನೆಯಾಗಬೇಕು. ದೇಶಾಭಿಮಾನ, ಕಲಾಭಿಮಾನ, ಆತ್ಮಾಭಿಮಾನದ ಜತೆಗೆ ಭಾಷಾಭಿಮಾನವೂ ಸಹ ಮನುಷ್ಯನ ಜೀವನದ ಉಸಿರಾಗಬೇಕು.
ಅ.ನ.ಕೃಷ್ಣರಾಯ
****
ಇವತ್ತು ಫೆಬ್ರವರಿ ೨೧, ಒಂದು ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಸರ್ವಸ್ವವನ್ನೂ ತ್ಯಾಗಮಾಡಿದ, ಜೀವ ತೆತ್ತ ಆ ಎಲ್ಲಾ ಹುತಾತ್ಮರನ್ನು ಒಮ್ಮೆ ನೆನೆಪಿಸಿಕೊಳ್ಳೋಣವೆ.......
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!
*****