Sunday, February 21, 2010

ಎಕೂಷೆ ಫೆಬ್ರವರಿ, ಲೋಕ ತಾಯಿ ನುಡಿ ದಿನ........

*****

"೨೧ನೇ ಫೆಬ್ರವರಿ ೧೯೫೨" ನಮ್ಮ ಪಕ್ಕದ ಬಾಂಗ್ಲಾದೇಶಿಗರ ಚರಿತ್ರೆಯಲ್ಲಿನ ಒಂದು ಐತಿಹಾಸಿಕ ದಿನ. ೧೯೪೭ ರಲ್ಲಿ ಭಾರತ ಮತ್ತು ಪಾಕಿಸ್ತಾನವೆಂಬ ಎರಡು ಹೊಸ ದೇಶಗಳು ಉದಯವಾದಾಗ, ಪೂರ್ವ ಬಂಗಾಳಿಗಳು ಪಾಕಿಸ್ತಾನದಲ್ಲಿ ಸೇರಿದ್ದರು. ಪೂರ್ವ ಬಂಗಾಳಿಗಳ ಈಗಿನ 'ಬಾಂಗ್ಲಾದೇಶ'ಅಂದು ಪೂರ್ವ ಪಾಕಿಸ್ತಾನವೆನಿಸಿಕೊಂಡಿತ್ತು. ಪಾಕಿಸ್ತಾನ ಸರ್ಕಾರದ ಆಡಳಿತಗಾರರು, 'ಉರ್ದು' ಪಾಕಿಸ್ತಾನದ ಅಧಿಕೃತ ಭಾಷೆ ಎಂದು ಘೋಶಿಸಿದರು.

ಭಾಷಾ ಸ್ವಾಭಿಮಾನಿಗಳಾದ ಪೂರ್ವ ಬಂಗಾಳಿಗರನ್ನು ಇದು ಸಹಜವಾಗಿ ಕೆರಳಿಸಿತ್ತು. ಅಲ್ಲಿನವರೆಗೆ ಬಂಗಾಳಿಗಳಿಗೆ, ಉರ್ದುವಿನ ತಲೆ-ಬುಡ ಸಹ ತಿಳಿದಿರಲಿಲ್ಲ. ಅವರ ಭಾಷೆ-ಸಂಸ್ಕೃತಿಯೇನಿದ್ದರೂ ಅದು ಕೇವಲ ಬಂಗಾಳಿ ಮಾತ್ರವಾಗಿತ್ತು. ಪಾಕಿಸ್ತಾನ ಉದಯವಾದ ಕೇವಲ ಆರು ತಿಂಗಳಿನಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷ ಚಳುವಳಿ ಪ್ರಾರಂಭವಾಯ್ತು. ಆದರೆ ಪಾಕಿಸ್ತಾನದ ಆಡಳಿತಗಾರರು ಇದಕ್ಕೆ ಪೂರಕವಾಗಿ ಸ್ಪಂದಿಸದೆ ಉರ್ದುವನ್ನು ಬಂಗಾಳಿಗಳ ಮೇಲೆ ಹೇರಲು ಮುಂದಾದರು. ಆಗಿನ ಪಾಕಿಸ್ತಾನದ ಗವರ್ನರ್ ಜನರಲ್ ಜಿನ್ನಾ "ಪೂರ್ವ ಪಾಕಿಸ್ತಾನದ ಬಂಗಾಳಿಗಳ 'ಬಂಗಾಳಿ' ಭಾಷೆ ಕೇವಲ ಆ ಪ್ರಾಂತ್ಯದ ಭಾಷೆ, ಪಾಕಿಸ್ತಾನದ ಅಧಿಕೃತ, ಆಡಳಿತ, ರಾಷ್ಟ್ರ ಭಾಷೆ ಕೇವಲ ಉರ್ದು ಎಂದು ಘೋಶಿಸಿ, ಇದಕ್ಕೆ ವಿರೋಧ ವ್ಯಕ್ತಪಡಿಸುವವರು ಪಾಕಿಸ್ತಾನದ ಶತ್ರುಗಳು ಎಂಬ ಹೇಳಿಕೆ ನೀಡಿದಾಗ ಪೂರ್ವ ಬಂಗಾಳ ಹೊತ್ತಿ ಉರಿಯಿತು. ಅಲ್ಲಿಂದ ಬಂಗಾಳಿ ಭಾಷಾ ಚಳುವಳಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಾ ಮುಂದುವರೆಯಿತು.

೨೧ ನೇ ಫೆಬ್ರವರಿ ೧೯೫೨ ರಂದು ಡಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಚಳುವಳಿಯನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುವ ತವಕದಲ್ಲಿ ಅಲ್ಲಿನ ವಿಧಾನ ಸಭೆಗೆ ನುಗ್ಗಲು ಯತ್ನಿಸಿದರು. ಅಂದು ಚಳುವಳಿಗಾರರು-ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಪೋಲಿಸರು ಡಾಕಾ ವಿಶ್ವವಿದ್ಯಾನಿಲಯದಲ್ಲಿ ಲಾಠಿ ಪ್ರಯೋಗ, ಅಶ್ರುವಾಯು ಸಿಡಿಸಿ ಕೊನೆಗೆ ಗುಂಡಿನ ಮಳೆಗೆರೆದರು. ಅಬ್ದುಲ್ ಬರಕತ್, ರಫೀಕುದ್ದೀನ್ ಅಹ್ಮದ್, ಶಫಿಯುರ್ ರಹಮಾನ್.. ಹೀಗೆ ಇನ್ನಿತರರು ಬಂಗಾಳಿ ಭಾಷೆಗೆ ಸಾರ್ವಭೌಮತೆ ದೊರಕಿಸಿಕೊಡಲು ಗುಂಡಿಗೆ ಎದೆಯೊಡ್ಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಈ ಪ್ರಾಣತ್ಯಾಗ ಬಂಗಾಳಿಗಳ ಭಾಷಾ ಚಳುವಳಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ಇನ್ನೂ ತೀವ್ರತರವಾದ ಹೋರಾಟಗಳಿಗೆ ನಾಂದಿಯಾಯಿತು. ಕೊನೆಗೂ ಪಾಕಿಸ್ತಾನ ಆಡಳಿತ ೧೯೫೪ ರ ಮೇ ನಲ್ಲಿ ಉರ್ದುವಿನ ಜತೆಗೆ ಬಂಗಾಳಿಯನ್ನು ಸಹ ಅಧಿಕೃತ ಆಡಳಿತ ಭಾಷೆಯಾಗಿ ಘೋಷಿಸಿತು.

ನಂತರದಲ್ಲಿ ೧೯೭೧ ರ ಮಾರ್ಚ್ ನಲ್ಲಿ ಪೂರ್ವ ಬಂಗಾಳಿಗಳು, ಪಾಕಿಸ್ತಾನದ ಆಡಳಿತದಿಂದ ಹೊರಬಂದು "ಬಾಂಗ್ಲಾದೇಶ" ವೆಂಬ ಹೆಸರಿನಲ್ಲಿ ಸ್ವತಂತ್ರ ದೇಶವನ್ನು ಸ್ಥಾಪಿಸಿಕೊಂಡದ್ದು ಸಹ ಇತಿಹಾಸ. ೧೯೯೯ ರಲ್ಲಿ ಯುನೆಸ್ಕೋ, ಬಂಗಾಳಿಗಳ ಭಾಷಾ ಚಳವಳಿಯಲ್ಲಿ ಹುತಾತ್ಮರಾದವರನ್ನು ನೆನೆಯುವ ಸಲುವಾಗಿ ಹಾಗು ತಾಯಿನುಡಿಯ ಮಹತ್ವದ ಅರಿವನ್ನು ಪಸರಿಸಲು "ಫೆಬ್ರವರಿ ೨೧ನ್ನು" ಲೋಕ ತಾಯ್ನುಡಿಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

*****


ತಮ್ಮ ತಾಯಿನುಡಿ ಬಂಗಾಳಿ ಕುರಿತಾದ ಬಂಗಾಳಿಗಳ ಸ್ವಾಭಿಮಾನದ ಹೋರಾಟ, ಪ್ರತಿವರ್ಷ ಫೆಬ್ರವರಿ ೨೧ ನ್ನು ಲೋಕ ತಾಯ್ನುಡಿ ದಿನವನ್ನಾಗಿ ಆಚರಿಸಲು ಯುನೆಸ್ಕೋ ನಿರ್ಧರಿಸಿದ ಹಿನ್ನಲೆ, ನುಡಿ ಹಬ್ಬ, ಹೀಗೆ ಭಾಷೆ ಕುರಿತಾದ ಹಲವು ಮಹತ್ವದ ವಿಷಯಗಳನ್ನು ಶ್ರೀ ಸುಗತ ಶ್ರೀನಿವಾಸ ರಾಜು ರವರು "ಏಕೂಷೆ ಫೆಭ್ರವರಿ ಲೋಕ ತಾಯ್ನುಡಿ ದಿನ" ಎಂಬ ತಮ್ಮ ಪುಟ್ಟ ಗ್ರಂಥದಲ್ಲಿ ಹಿಡಿದಿಟ್ಟಿದ್ದಾರೆ.

****

ಭಾಷೆಯೆಂಬುದು ಪ್ರದೇಶವೊಂದರಲ್ಲಿ ಬಳಸುವ ಸಂಪರ್ಕ ಸಾಧನ ಮಾತ್ರವಲ್ಲ. ಆದು ಆ ಪ್ರದೇಶದ ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಜೀವನ ಶೈಲಿಯ ಪ್ರತಿಬಿಂಬ. ಮನುಷ್ಯ ಅಭಿಮಾನ ಜೀವಿ,ಅವನ ಜೀವನದಲ್ಲಿ ಉಂಟಾಗುವ ಮುಖ್ಯವಾದ ಪ್ರಗತಿ ಅಭಿಮಾನದಿಂದಲೇ ಸಾಧನೆಯಾಗಬೇಕು. ದೇಶಾಭಿಮಾನ, ಕಲಾಭಿಮಾನ, ಆತ್ಮಾಭಿಮಾನದ ಜತೆಗೆ ಭಾಷಾಭಿಮಾನವೂ ಸಹ ಮನುಷ್ಯನ ಜೀವನದ ಉಸಿರಾಗಬೇಕು.

ಅ.ನ.ಕೃಷ್ಣರಾಯ

****

ಇವತ್ತು ಫೆಬ್ರವರಿ ೨೧, ಒಂದು ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಸರ್ವಸ್ವವನ್ನೂ ತ್ಯಾಗಮಾಡಿದ, ಜೀವ ತೆತ್ತ ಆ ಎಲ್ಲಾ ಹುತಾತ್ಮರನ್ನು ಒಮ್ಮೆ ನೆನೆಪಿಸಿಕೊಳ್ಳೋಣವೆ.......

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****

Tuesday, February 2, 2010

ವಿನಯ್ ಕುಮಾರ್ ಮತ್ತು ಮನೀಶ್ ಪಾಂಡೆ ಯಾಕೆ ಹೊರಗುಳಿದರು........

*****

ಕಳೆದ ಕೆಲದಿನಗಳು ಹಜೀರಾ-ಸೂರತ್ (ಗುಜರಾತ್) ನಲ್ಲಿ ಇದ್ದೆ. ಹೋಟಲ್ ರೂಮಿನಲ್ಲಿ "ಟೈಮ್ಸ್ ಆಫ್ ಇಂಡಿಯಾ" ಅಹಮದಾಬಾದ್ - ಸೂರತ್ ಆವೃತ್ತಿಯ ಪತ್ರಿಕೆ ಸಿಗ್ತಿತ್ತು. ಟೈಮ್ಸ್ ಆಫ್ ಇಂಡಿಯಾದ ಈ ಆವೃತ್ತಿಯನ್ನು ಪ್ರತಿದಿನ ತಿರುವಿ ಹಾಕುವಾಗ ಗಮನಕ್ಕೆ ಬಂದದ್ದು ಗುಜರಾತಿಗಳಿಗೆ ಸಂಬಂಧಿಸಿದ ಸುದ್ದಿಗಳಿಗೆ ಇವರು ಕೊಡುತ್ತಿದ್ದ ಪ್ರಾಮುಖ್ಯತೆ! ಇಲ್ಲಿ ಲಗತ್ತಿಸಿರುವ ಮುಖ ಪುಟದ ಕೆಲವು ಅಗ್ರ ಸುದ್ದಿಗಳನ್ನು (Leading News) ಗಮನಿಸಿ..
**



**



**



**

ಯಾವುದೇ ರಾಜ್ಯದ ಯಾವುದೇ ಮಾಧ್ಯಮಗಳು ಅಲ್ಲಿನ ಸ್ಥಳೀಯ ಸುದ್ದಿಗಳಿಗೆ, ಅಲ್ಲಿನ ಒಳಿತನ್ನು ಬಿಂಬಿಸುವುದಕ್ಕೆ, ಅವರಿಗಾದ ಅನ್ಯಾಯದ ಪ್ರತಿಭಟನೆಗೆ ವೇದಿಕೆ ಒದಗಿಸುವುದಕ್ಕೆ ಒಟ್ಟಾರೆ ಆ ರಾಜ್ಯದ ಆಗು-ಹೋಗುಗಳಿಗೆ ಸ್ಪಂಧಿಸಿ ಬದ್ಧವಾಗಿರಬೇಕಾದದ್ದು ಸಹಜವಾದದ್ದೆ.

ಆದರೆ ಇದಕ್ಕೆ ವಿರುದ್ಧವಾಗಿರುವುದು ನಮ್ಮ ಕರ್ನಾಟಕದ ಇಂಗ್ಲೀಷ್ ಮಾಧ್ಯಮಗಳು. "ಅಪ್ಪಟ ಪ್ರತಿಭೆಗಳಾದ ವಿನಯ್ ಕುಮಾರ್ ಮತ್ತು ಮನೀಷ್ ಪಾಂಡೆ ಯಾಕೆ ಹೊರಗುಳಿದರು", "ವಿಜಯನಗರದ ಕೃಷ್ಣದೇವರಾಯರ ೫೦೦ ನೇ ವರ್ಷಾಚರಣೆ" ಹೀಗೆ ಕರ್ನಾಟಕದ ಯಾವುದೇ ಪ್ರಮುಖ ವಿಷಯಗಳು "ಯಾವುದೇ ಟೈಮ್ಸ್ " ನಲ್ಲಿ ಮುಖಪುಟದ ಸುದ್ಧಿಯಾಗಲಿಲ್ಲ.

ಆದರೆ ಕೃಷ್ಣದೇವರಾಯ ಕುರಿತಾದ ಬಣ್ಣ ಬಣ್ಣದ "ಜಾಹೀರಾತು" ಮಾತ್ರ ಈ ಪತ್ರಿಕೆಗಳಲ್ಲಿ ಕಂಡು ಬಂದದ್ದು ಸತ್ಯ!

ಬೆಂಗಳೂರಿನ ಇಂಗ್ಲೀಷ್ ಪತ್ರಿಕೆಗಳಿಗೂ ಕನ್ನಡಕ್ಕೂ ಒಂದು ರೀತಿಯ ಎಣ್ಣೆ - ಸಿಗೇಕಾಯಿ ಬಾಂಧವ್ಯವೆ! ಬೆಂಗಳೂರಿನಲ್ಲಿ ಕನ್ನಡ ಮಾತ್ರ ಏಕಿದೆ? ಬೆಂಗಳೂರಿನಲ್ಲಿ ಕನ್ನಡಿಗರಿರುವುದೇ ಶೇಕಡ ೩೦ ಮಂದಿ, ವಲಸಿಗರು ಕನ್ನಡ ಕಲಿಯಬೇಕಾದ ಅವಶ್ಯಕತೆಯಿಲ್ಲ ಎಂಬ ಸುದ್ಧಿಗಳಿಗೆ ಪ್ರಚಾರ ನೀಡುವುದಕ್ಕೆ ಮರೆಯುವುದಿಲ್ಲ.

ಇದು ಹೀಗ್ಯಾಕೆ ಎಂದು ನಮ್ಮ ಇಂಗ್ಲೀಷ್ ಮಾಧ್ಯಮದವರನ್ನು ವಿಚಾರಿಸಿ. "ಸಂಕುಚಿತರಾಗಬೇಡಿ" "ವಿಶ್ವ ಮಾನವರಾಗಿ" ಎಂದು ಬುದ್ಧಿವಾದ! ಸಿಗುವುದು ಗ್ಯಾರಂಟಿ.

ಇವರ ಬುದ್ಧಿವಾದವನ್ನು ನಾವು ಒಪ್ಪಿಕೊಳ್ಳುವುದಾದರೆ ಗುಜರಾತ್ ನ ಇಂಗ್ಲೀಷ್ ಮಾಧ್ಯಮದವರು ಸಂಕುಚಿತರೆ?

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****