Wednesday, June 16, 2010

ಬಸ್ಸುಗಳಲ್ಲಿ ಕನ್ನಡ ಹಾಡು ಮಾತ್ರ - ಬಿಎಂಟಿಸಿ ಸ್ಪಷ್ಟನೆ





ಹಿಂದಿನ "ಬೆಂ.ಮ.ಸಾ.ಸಂ. ಬಸ್ಸುಗಳಲ್ಲಿ ಕನ್ನಡ ಏಕೆ ಕೇಳಿಸುವುದಿಲ್ಲ?" ಲೇಖನಕ್ಕೆ ಪೂರಕವಾಗಿ ಈ ಬರಹ.

ಕಳೆದ ಕೆಲವು ವಾರಗಳಿಂದ ಜಾಗೃತ ಕನ್ನಡ ಗ್ರಾಹಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಕನ್ನಡ ಹಾಡನ್ನೇ ಪ್ರಸಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ಇದರ ಅನುಷ್ಠಾನಕ್ಕೆ ಮುಂದಾಗಿತ್ತು. ಬಸ್ಸಿನಲ್ಲಿ ಪ್ರಯಾಣಿಸುವ ಈ ಎಲ್ಲಾ ಕನ್ನಡ ಗ್ರಾಹಕರು ಬೆಂ.ಮ.ಸಾ.ಸಂ.ಯ ಮಿಂಚೆ ವಿಳಾಸಕ್ಕೆ ಪತ್ರ ಬರೆದು ಮನವರಿಕೆ ಸಲ್ಲಿಸಿ ಏಕೆ ಬಸ್ಸುಗಳಲ್ಲಿ ಕನ್ನದ ಹಾಡಿನ ಪ್ರಸಾರ ಪ್ರಸ್ತುತ ಎಂದು ತಿಳಿಹೇಳಿದ್ದರು. ಹಲವರ ಮಿಂಚೆಗೆ ಪ್ರತಿಕ್ರಿಯಿಸಿ ಉತ್ತರ ನೀಡಿದ್ದ ಬೆಂ.ಮ.ಸಾ.ಸಂ. ವ್ಯವಸ್ಥಾಪಕರು ಬಸ್ಸುಗಳಲ್ಲಿ ಕನ್ನಡ ಹಾಡನ್ನೇ ಹಾಕುವ ಕ್ರಮ ಜರುಗಿಸುವುದಾಗಿ ಸೂಚಿಸಿದ್ದರು.

ಜಾಗೃತ ಕನ್ನಡ ಗ್ರಾಹಕ ಗುಂಪಿನ ಚಟುವಟಿಕೆಯಿಂದ ನಗರ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಇನ್ನು ಕೆಲವರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಮನೆಗಳ ಬಳಿ ಇರುವ ಬಸ್ ಘಟಕಗಳಿಗೆ ತೆರಳಿ (ಡಿಪೋ), ಘಟಕದ ಮುಖ್ಯಸ್ಥರನ್ನು ಭೇಟಿ ಮಾಡಿ ಕನ್ನಡ ಹಾಡು ಹಾಕುವ ಬಗ್ಗೆ ಮನವಿ ಸಲ್ಲಿಸಿ ಬಂದಿದ್ದರು. ಇನ್ನು ಕೆಲವರು ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ, ಬ್ಲಾಗ್ ಗಳಲ್ಲಿ ಪತ್ರ ಬರೆದು ಬೆಂ.ಮ.ಸಾ.ಸಂ ಯ ಗಮನ ಸೆಳೆದಿದ್ದರು. ಸಂಯುಕ್ತ ಕರ್ನಾಟಕದ ೧೮ನೇ ಮೇ ೨೦೦೮ ರ ಪತ್ರಿಕೆಯಲ್ಲಿ ಈ ಕುರಿತಾಗಿ ಕೆಲವು ದೂರುಗಳು ದಾಖಲಾಗಿದ್ದವು.

ಬೆಂ.ಮ.ಸಾ.ಸಂ. ಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಇಂದಿನ ಸಂ.ಕ.ದಲ್ಲಿ ಒಂದು ಸಾರ್ವಜನಿಕ ಸ್ಪಷ್ಟನೆ ನೀಡಿ ಬಸ್ಸುಗಳಲ್ಲಿ ಕನ್ನಡ ಹಾಡು ಪ್ರಸಾರ ಮಾಡುವ ಆದೇಶ ಹೊರಡಿಸಿರುವುದಾಗಿ ತಿಳಿಸಿ ಕನ್ನಡ ಅನುಷ್ಠಾನದ ನಿಲುವಿಗೆ ಬದ್ಧರಾಗಿದ್ದಾರೆ. ಅವರಿಗೆ ಈ ಮೂಲಕ ಅಭಿನಂದನೆಗಳು.

ಇದು ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ಜಾಗೃತ ಕನ್ನಡ ಪ್ರಯಾಣಿಕರ ಒತ್ತಡಕ್ಕೆ ಸಂದ ಪ್ರತಿಫಲ

*****

ಈ ಜಾಗೃತಿ ನಿರಂತರವಾದದ್ದು. ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ನಾವು ಮುಂದೆ ಸಹ ಇದನ್ನು ಸದಾ ಗಮನಿಸುತ್ತಿರಬೇಕು. ಸಾರಿಗೆ ಸಂಸ್ಥೆಯ ಈ ಆದೇಶವನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೆ ಎಂದು ತಿಳಿದುಕೊಳ್ಳುವುದು ಬಹು ಮುಖ್ಯ. ಹಾಗೆ ತೊಂದರೆ ಕಂಡುಬಂದಲ್ಲಿ ಈ ಕೆಳಗಿನ ನಮೂನೆಯಲ್ಲಿ ಅವರಿಗೆ ಮಿಂಚಿಸಿ ಎಚ್ಚರಿಸಬೇಕಾದ್ದು ನಮ್ಮ ಕರ್ತವ್ಯ.

    • ಬಸ್ಸಿನಲ್ಲಿ ನಾವು ಎದುರಿಸಿದ ಸಮಸ್ಯೆ - (ಉದಾ: ಬಸ್ಸಿನ ಸಿಬ್ಬಂದಿ ಕನ್ನಡೇತರ ಹಾಡು ಹಾಕುತ್ತಿದ್ದರು,ಬಸ್ಸಿನೊಳಗಿನ ಡಿಜಿಟಲ್ ಬೋರ್ಡಿನಲ್ಲಿ ಇಂಗ್ಲಿಷ್ ಸೂಚನೆ ಮಾತ್ರ ಇತ್ತು, ಕನ್ನಡದಲ್ಲಿರಲಿಲ್ಲ, ಹೀಗೆ)
    • ನಾವು ಪ್ರಯಾಣ ಮಾಡಿದ ಬಸ್ಸಿನ ಮಾರ್ಗ ಸಂಖ್ಯೆ
    • ಬಸ್ಸಿನ ವಾಹನ ನೋಂದಣಿ ಸಂಖ್ಯೆ
    • ನಾವು ಬಸ್ಸು ಹತ್ತಿದ ಸಮಯ, ಜಾಗ ಮತ್ತು ಪ್ರಯಾಣಿಸಿ ತಲುಪಿದ ಜಾಗ
    • ಸಾಧ್ಯವಾದಲ್ಲಿ ಬಸ್ಸಿನ ಸಿಬ್ಬಂದಿಯ ಹೆಸರು

ಈ ರೀತಿಯಾಗಿ ತಿಳಿಸಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿರುತ್ತಾರೆ.
ಅವರ ಮಿಂಚೆ: bmtcmd@gmail.com, ctmobmtc@gmail.com ಅವರನ್ನೊಮ್ಮೆ ಅಭಿನಂದಿಸಲು ಎಲ್ಲರೂ ಮಿಂಚಿಸಿ..
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

****

Wednesday, June 9, 2010

ಕನ್ನಡಿಗರ ಅಭಿವೃದ್ಧಿ ಉದ್ದಿಮೆದಾರರ ಹೊಣೆ

*****

ನಾಡೊಂದರ ಸಂಸ್ಕೃತಿದತ್ತವಾದ ನೆಲ-ಜಲ-ಖನಿಜ-ಕೃಷಿ-ನಿಸರ್ಗ ಸಂಪತ್ತುಗಳ ಸದ್ಬಳಕೆ, ಅಲ್ಲಿನ ಕುಶಲಕರ್ಮಿಗಳು ತಮ್ಮ ಕುಲಕಸುಬುಗಳ ಅನುಭವದೊಂದಿಗೆ ಹೊಸ ಅವಿಷ್ಕಾರಗಳೆಡೆಗಿನ ದುಡಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಮತ್ತು ಆ ನಿಟ್ಟಿನಲ್ಲಿ ಅಲ್ಲಿನ ಆಡಳಿತಗಾರರು ನಾಡು-ನುಡಿ-ನಾಡಿಗರ ಪರವಾಗಿ ನಿಸ್ವಾರ್ಥತೆಯಿಂದ ಶ್ರಮಿಸುವುದು ಒಂದು ನಾಡಿನ ಏಳಿಗೆಯ ಪ್ರಮುಖ ಕಾರಣಗಳಾಗಿವೆ.

ಒಕ್ಕೂಟ (Federal) ವ್ಯವಸ್ಥೆಯ ಭಾರತ ದೇಶದಲ್ಲಿ, ಏಳಿಗೆಗೆ ಸಾಧನವಾಗಿ ಪ್ರತಿ ರಾಜ್ಯಗಳಲ್ಲೂ ಹೊಸ ಉದ್ದಿಮೆಗಳು ಪ್ರಾರಂಭವಾಗಬೇಕಾದ್ದು ಅತ್ಯಗತ್ಯ . ಯಾವುದೇ ಹೊಸ ಯೋಜನೆಗಳು ಒಂದು ಪ್ರದೇಶದಲ್ಲಿ ಕಾರ್ಯರೂಪಗೊಂಡಾಗ ಅಲ್ಲಿ ದೊರಕಬಹುದಾದಂತ ಕೆಲಸ ಅವಕಾಶಗಳಿಗಾಗಿ ಸ್ಥಳೀಯ ಉದ್ಯೋಗಾಕಾಂಕ್ಷಿ ಕಾತರ ಮತ್ತು ನೀರೀಕ್ಷೆಗಳಿಂದ ಎದುರು ನೋಡುವುದು ಸಹ ಸಹಜವಾದದ್ದು. ಹಾಗಾಗಿ ರಾಜ್ಯ ಸರ್ಕಾರಗಳು ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಬಹು ಪ್ರಮುಖ ಕಾರಣ ತನ್ನ ಜನಗಳಿಗೆ ಉದ್ಯೋಗ ಸೃಷ್ಟಿ ಆಗುವ ಕಾರಣಕ್ಕಾಗಿಯೇ ಮತ್ತು ಅದು ಆಯಾ ರಾಜ್ಯದ ಜನರ ಅನುಕೂಲಗಳಿಗೆ ಪರಿವರ್ತನೆಯಾಗಬೇಕಾಗಿರುವುದು.

ಕಳೆದ ಜೂನ್ ೩ ಮತ್ತು ೪ ರಂದು ಕರ್ನಾಟಕ ಸರ್ಕಾರ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ, ಕೋಟ್ಯಾಂತರ ರೂ ಬಂಡವಾಳವನ್ನು ಕರ್ನಾಟಕದಲ್ಲಿ ತೊಡಗಿಸಲು ವಿವಿಧ ಉದ್ದಿಮೆದಾರರೊಡನೆ ಮಾತುಕತೆ-ಒಪ್ಪಂದ ಮಾಡಿಕೊಂಡಿದೆ. ಹೀಗೆ ಕರ್ನಾಟಕ ರಾಜ್ಯ ಸರ್ಕಾರ, ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗಲು ಒಂದು ಹೆಜ್ಜೆ ಮುಂದಿರಿಸಿದೆ. ಒಕ್ಕೂಟ ವ್ಯವಸ್ಥೆಯಲ್ಲಿನ ಒಂದು ರಾಜ್ಯದ ಈ ಕರ್ತೃತ್ವ ಶಕ್ತಿ, ಕಾರ್ಯತತ್ಪರತೆ, ಉದ್ಯಮಶೀಲತೆಯನ್ನು ಕೇಂದ್ರ ಸರ್ಕಾರ ಗಮನಿಸಿ ಹುರಿದುಂಬಿಸುವುದು ಅತ್ಯಗತ್ಯವಾದದ್ದು. ಇದು ಒಕ್ಕೂಟದ ಇತರ ರಾಜ್ಯಗಳನ್ನು ಅತ್ತೆಡೆ ಗಮನಿಸುವಂತೆ ಅವರಲ್ಲೂ ತನ್ನ ನಾಡಿಗರ ಅಭಿವೃದ್ಧಿಗೆ ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳಬೇಕೆನ್ನುವೆಡೆಗೆ ಕಣ್ಣು ತೆರೆಸುವ ಪ್ರಯತ್ನವಾಗಿಸಬೇಕು. ಇದು ಎಲ್ಲಾ ರಾಜ್ಯಗಳನ್ನು ಸುಭದ್ರಗೊಳಿಸಿ ಒಕ್ಕೂಟವನ್ನು ಬಲಪಡಿಸುವ ಬಹುದೊಡ್ಡ ಸಾಧನ. .

ಇಡೀ ಪ್ರಪಂಚದಲ್ಲಿ ಅಲ್ಲಲ್ಲಿಯ ಸ್ಥಳೀಯ ಭಾಷೆ, ಜನಾಂಗಕ್ಕೆ ಆಧ್ಯತೆ ಎಂಬುದು ಪ್ರಚಲಿತದಲ್ಲಿರುವಂತೆ, ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರುವುದು ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ, ಹಾಗಾಗಿ ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಲು ಮುಂದಾಗಿರುವವರೆಲ್ಲರೂ ತಮ್ಮ ವ್ಯವಹಾರದ ಎಲ್ಲೆಡೆಗಳಲ್ಲಿ ಕನ್ನಡ-ಕನ್ನಡಿಗರ ಅಭಿವೃದ್ಧಿಗೆ ಶ್ರಮಿಸುವುದು ಸಹ ಉದ್ದಿಮೆದಾರರ ಸಹಜ ಹೊಣೆಗಾರಿಕೆಯಾಗಬೇಕಿದೆ. ನಮ್ಮನ್ನಾಳುವವರು ಈ ಜವಾಬ್ದಾರಿಯ ಅರಿವನ್ನು, ಇಲ್ಲಿಗೆ ಬರುವ ಎಲ್ಲಾ ಉದ್ದಿಮೆದಾರರಲ್ಲಿ ಸದಾ ಜಾಗೃತಿಯಾಗಿರಿಸಿದಾಗ ಮಾತ್ರ ಕರ್ನಾಟಕ ಸರ್ಕಾರದ ಈ ಸಾಧನೆಗೆ ಸಾರ್ಥಕತೆ ಸಿಗುತ್ತದೆ.

*****




ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ