ನಾಡಪ್ರೇಮ ಮತ್ತು ಭಾಷೆಯ ಮೇಲಿನ ಅಭಿಮಾನದಿಂದ ಭಾರತದ ಆಯಾ ರಾಜ್ಯಗಳಲ್ಲಿ ಅಲ್ಲಿನ ಭಾಷೆಯಲ್ಲಿ ತಮ್ಮ ವಾಹನಗಳ ನೋಂದಣಿ ವಿವರವನ್ನು ಬರೆಸಿರುವುದುನ್ನು ನಾವು ಕಾಣಬಹುದಾಗಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಬರೆಸಿರುವ ಇಂತಹ ಫಲಕ ಕಂಡಾಗ ಅದು ನಮಗೆ ನಮ್ಮ ನುಡಿಯ ಹಿರಿಮೆಯ ಮತ್ತು ಜಾಗೃತಿಯ ಸಂಕೇತವೆನಿಸುವುದು ಸಹಜ. ಈ ನಿಟ್ಟಿನಲ್ಲಿ ರಾಜ್ಯೋತ್ಸವ, ಭಾಷಾ ಸಮ್ಮೇಳನಗಳಲ್ಲಿ ಇತರ ಕನ್ನಡ ಪರ ಕಾಳಜಿಯನ್ನು ವ್ಯಕ್ತಪಡಿಸುವ ಜತೆಗೆ, ವಾಹನಗಳ ನೋಂದಣಿ ವಿವರವನ್ನು ಕನ್ನಡದಲ್ಲಿ ಬರೆಸುವ ಜಾಗೃತಿ ಅಭಿಯಾನವನ್ನು ಕನ್ನಡ ಪರ ಸಂಘಟನೆಗಳು ಹಮ್ಮಿಕೊಳ್ಳುತ್ತಾ ಬಂದಿರುವುದನ್ನು ನಾವು ಗಮನಿಸಬಹುದು.
ವಿಷಾದವೆಂದರೆ ಭಾರತದ ಒಪ್ಪುಕೂಟದಲ್ಲಿ ಈ ರೀತಿಯ ಭಾಷಾ ಪ್ರೇಮ ಮೆರೆಯುವುದು ಕಾನೂನು ಬಾಹಿರ! ಭಾರತದ ಸಾರಿಗೆ ಇಲಾಖೆಯ ಕಾಯ್ದೆ ರಾಜ್ಯಭಾಷೆಗಳಲ್ಲಿ ನೋಂದಣಿ ವಿವರ ಬರೆಸುವ ಬಗ್ಗೆ ಎಲ್ಲೂ ಉಲ್ಲೀಖಿಸಿಲ್ಲ. ಆದರೂ ಆಯಾ ರಾಜ್ಯದ ಸಂಚಾರಿ ಪೋಲಿಸರು ತಮ್ಮ ಭಾಷೆಯಲ್ಲಿನ ನೋಂದಣಿ ಫಲಕ ಕಂಡು ಹೆಮ್ಮೆ ಪಡುತ್ತಾರೆಯೇ ವಿನಾ ಎಲ್ಲೂ ಇದನ್ನು ಕಾನೂನು ಉಲ್ಲಂಘನೆಯೆಂದು ಪರಿಗಣಿಸಿದ ಉದಾಹರಣೆಯಿಲ್ಲ. ಆದರೆ ಇತ್ತೀಚೆಗೆ ಬೆಂಗಳೂರು ಸಂಚಾರಿ ಪೋಲಿಸರು ಕನ್ನಡದಲ್ಲಿ ನೋಂದಣಿ ವಿವರ ಇರುವ ವಾಹನಗಳನ್ನು ಹಿಡಿದು ಕಾನೂನು ಉಲ್ಲಂಘನೆಯಡಿ ದಂಡ ವಿಧಿಸುವ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆ ನಡೆಸುವವರು ಕನ್ನಡ ನೋಂದಣಿ ಸಂಖ್ಯಾ ಫಲಕ ಹಾಕಿಸಿಕೊಳ್ಳುತ್ತಿದ್ದಾರೆ, ಇಲ್ಲಿ ನೆಲೆಸಿರುವ ಪರಭಾಷಿಗರಿಗೆ ಇದರಿಂದ ಅನಾನುಕೂಲವಾಗುತ್ತಿದೆ ಮತ್ತು ನಮ್ಮ ಪೋಲಿಸರಿಗೂ ಕನ್ನಡ ಒದುವುದು ದುಸ್ಸಾಧ್ಯ ಎಂಬ ವಾದದ ಸಮರ್ಥನೆ ನಮ್ಮ ಪೋಲಿಸ್ ಅಧಿಕಾರಿಗಳದ್ದಾಗಿದೆ.
ಇಷ್ಟೇ ಅಲ್ಲದೆ ನಮ್ಮ ಸಂಚಾರಿ ಪೋಲಿಸರು, ಸಂಚಾರ ಸಮಸ್ಯೆಯ ಜಾಗೃತಿಯನ್ನು ಕೇವಲ ವಲಸಿಗರನ್ನ ಮಾತ್ರ ಗಣನೆಗೆ ತೆಗೆದುಕೊಂಡು ಇಲ್ಲಿನ ಬಹುಸಂಖ್ಯಾತ ಕನ್ನಡಿಗರನ್ನ ಮರೆತಿರುವುದನ್ನು ನಾವು ಕಾಣಬಹುದಾಗಿದೆ.ಕೆಲ ದಿನಗಳ ಹಿಂದೆ ಜನರಲ್ಲಿ ಸಂಚಾರಿ ವ್ಯವಸ್ಥೆಯ ಬಗ್ಗೆ ಒಂದು ವೀಡಿಯೋ ಮಾಡಿ ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ಪ್ರದರ್ಶನ ಮಾಡೊ ವ್ಯವಸ್ಥೆ ಮಾಡಿದ್ದಾರೆ. ವಿಪರ್ಯಾಸವೆಂದರೆ ಈ ಜಾಗೃತಿ ಚಿತ್ರ ಕನ್ನಡೇತರ ಭಾಷೆಯಲ್ಲಿರುವುದು! ಹಾಗೆಯೇ ನಗರದೆಲ್ಲೆಡೆ ಸಂಚಾರಿ ವ್ಯವಸ್ಥೆ ಕುರಿತು ಅಳವಡಿಸಿರೋ ಜಾಹೀರಾತುಗಳು, ಮತ್ತು ವಿದ್ಯುನ್ಮಾನ ಪ್ರದರ್ಶನ ಸೂಚಿಗಳಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿಲ್ಲದಿರುವುದನ್ನು ಸಹ ನಾವು ಕಾಣಬಹುದಾಗಿದೆ.
ಆಯಾ ರಾಜ್ಯದ ಯಾವುದೇ ಇಲಾಖೆಯಿರಲಿ ಅದರ ವ್ಯವಸ್ಥೆಯ ಅನುಕೂಲ ಮೊದಲಿಗೆ ಸ್ಥಳೀಯರಿಗೆ ದೊರಕಬೇಕಾದ್ದು ಸಹಜವಾದದ್ದು ಮತ್ತು ಆ ನಿಟ್ಟಿನಲ್ಲಿ ವ್ಯವಸ್ಥೆ ಕಟ್ಟುವುದು ಆಯಾ ಇಲಾಖೆಯ ಮೂಲ ಕರ್ತವ್ಯಗಳಲ್ಲೊಂದು. ಇಲ್ಲದಿದ್ದರೆ ಇದು ಮನೆಗೆ ಮಾರಿ ಊರಿಗೆ ಉಪಕಾರಿ ಯ ಕೆಲಸವಾಗುತ್ತದೆ. ಬಹುಷಃ ಕನ್ನಡಿಗರಲ್ಲದ ಅಧಿಕಾರಿಗಳು ಆಯಕಟ್ಟಿನ ಸ್ಥಾನಗಳಲ್ಲಿ ವಿರಜಮಾನರಾಗುತ್ತಿರುವುದು ಕನ್ನಡದೆಡೆಗಿನ ಈ ಉದಾಸೀನ - ಅಸಡ್ಡೆಗೆ ಮುಖ್ಯ ಕಾರಣವಿರಬಹುದು. ರಾಜ್ಯದಲ್ಲಿನ ಇತ್ತೀಚಿನ ಆಗು-ಹೋಗುಗಳಲ್ಲಿ ನಮ್ಮ ಕನ್ನಡ ಪರ ಸರ್ಕಾರ! ಕನ್ನಡಪರ ಮಂತ್ರಿಗಳಿಗೆ! ಇದನ್ನೆಲ್ಲಾ ಗಮನಿಸುವಷ್ಟು - ಯೋಚಿಸುವಷ್ಟು ಬಿಡುವಿನ ಸಮಯ ಇನ್ನು ದೊರಕುವುದು ಕಷ್ಟವೇ! ಕೇಂದ್ರದ ಸಾರಿಗೆ ಕಾಯ್ದೆಯಲ್ಲಿ ವಾಹನಗಳ ನೋಂದಣಿ ಫಲಕಗಳಲ್ಲಿ ಆಯಾ ರಾಜ್ಯದ ಭಾಷೆಯನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ತಿದ್ದುಪಡಿ ಆಗುವುದೆ ಇದಕ್ಕೆ ಕೊಡಬಹುದಾದ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ರೂಪಿಸುವುದು ಅತ್ಯಗತ್ಯವಾಗಿದೆ.
*****
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****
0 comments:
Post a Comment