Thursday, January 20, 2011

ಕಿಂಗ್ ಫಿಷರ್ ವಿಮಾನದ ಗ್ರಾಹಕ ಸೇವೆಯಲ್ಲಿ ಕನ್ನಡ!

*****

ನೆನ್ನೆಯ ದಿನ (೨೦/೦೧/೨೦೧೧) ತಾವು ಕರೆ ಮಾಡಿ "ಕಿಂಗ್ ಫಿಷರ್" ವಿಮಾನ ಯಾನ ಸಂಸ್ಥೆಗೆ ೭/೧/೨೦೧೧ ರಂದು ಮಿಂಚೆ ಮೂಲಕ ಒಂದು ಪತ್ರ ಕಳಿಸಿದ್ದೆ. ಕಿಂಗ್ ಫಿಷರ್ ನ ವಿಮಾನಗಳಲ್ಲಿ, ಅದು ಹಾರಾಡುವ ವಿಮಾನ ನಿಲ್ದಾಣಗಳು, ಭಾರತದ ವಿವಿದೆಡೆ ಅವರು ಹೊಂದಿರುವ ಕಚೇರಿಗಳು, ಅವರ ಗ್ರಾಹಕ ಸಹಾಯವಾಣಿ ಕೇಂದ್ರಗಳಲ್ಲಿ ಹೀಗೆ ಇವರ ಯಾವುದೇ ರೀತಿಯ ಗ್ರಾಹಕ ಸೇವೆಯಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ಏಕೆ ಸೇವೆ ಒದಗಿಸುತ್ತಿಲ್ಲ ಎಂದು ಗ್ರಾಹಕನಾಗಿ ಕೇಳಿದ್ದೆ. ಆ ಪತ್ರವನ್ನು ಗಮನಿಸಿ ಕಿಂಗ್ ಫಿಷರ್ ಕಚೇರಿಯಿಂದ ನನಗೆ ಕರೆ ಮಾಡಿ, ಪತ್ರದಲ್ಲಿ ನಾನು ತಿಳಿಸಿರುವಂತೆ "ಕಿಂಗ್ ಫಿಷರ್" ವಿಮಾನ ಯಾನ ಸಂಸ್ಥೆ ಆದಷ್ಟು ಬೇಗ ತನ್ನ ಗ್ರಾಹಕ ಸೇವೆಯಲ್ಲಿ ಆಯಾ ರಾಜ್ಯದ ಭಾಷೆಗಳನ್ನು ಅಳವಡಿಸಿಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಿದೆ ಎಂಬ ವಿಷಯ ತಿಳಿಸಿರುತ್ತಾರೆ.

ಅವರಿಗೆ ನಾನು ಕಳುಹಿಸಿದ್ದ ಪತ್ತ ......

*****

೭ ಜನವರಿ ೨೦೧೧

ಡಾ. ವಿಜಯ್ ಮಲ್ಯ
ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್,
ಕಿಂಗ್ ಫಿಷರ್ ವಿಮಾನ ಯಾನ ಸಂಸ್ಥೆ

ಮಾನ್ಯರೇ,

ನಾನು ಕಿಂಗ್ ಫಿಷರ್ ವಿಮಾನದಲ್ಲಿ ಹಲವು ಬಾರಿ ಪ್ರಯಾಣಿಸಿದ್ದೇನೆ ಮತ್ತು ಕೆಲವೊಮ್ಮೆ ಗ್ರಾಹಕ ಮರುಮಾಹಿತಿಯನ್ನು ನೀಡಿದ್ದರೂ ಯಾವುದೇ ಉತ್ತರ ಕಿಂಗ್ ಫಿಷರ್ ಸಂಸ್ಥೆಯಿಂದ ಬಾರದಿರುವುದು ಅತಿಥಿಗಳಿಗೆ(guest) ಕಿಂಗ್ ಫಿಷರ್ ಸಂಸ್ಥೆ ನೀಡುವ ಮಾನ್ಯತೆ ಏನು ಎಂದು ಸಾಬೀತಾಗಿದೆ. ಹಾಗಾಗಿ ನೇರವಾಗಿ ತಮಗೆ ವಿಷಯ ತಿಳಿಸಲು ಈ ಪ್ರಯತ್ನ. ೨೭ನೇ ನವಂಬರ್ ೨೦೧೦ (27th November 2010)ರಂದು ನಾನು ೧೮.೪೫ಕ್ಕೆ ಹೊರಟ ಐಟಿ ೩೪೩೨ (IT3432-Time 18:45)ಕೊಲ್ಕೊತ್ತಾ ದಿಂದ ಬೆಂಗಳೂರಿಗೆ ಪ್ರಯಾಣಿಸಿದೆ. ಸೀಟು ಸಂಖ್ಯೆ ೧೬ ಇ (seat number 16E)ನಲ್ಲಿ ಕುಳಿತಿದ್ದ ನಾನು ಅಂದು ವಿಮಾನ ಹೊರಟ ಕೂಡಲೆ ನಡೆದ ಘಟನೆಯೊಂದನ್ನು ಗಮನಿಸಿದ್ದೆ. ಕೂಡಲೆ ಆ ಕುರಿತು ನಿಮಗೆ ತಿಳಿಸಲು ಮರುಮಾಹಿತಿ ಅರ್ಜಿ ಪಡೆದಿದ್ದೆ. ಆದರೆ ನನ್ನ ಕೆಲಸದ ಒತ್ತಡದ ನಡುವೆ ಇದನ್ನು ಬರೆಯಲು ಈಗ ಸಾಧ್ಯವಾಗಿದೆ.

ಹಿನ್ನಲೆ:

ಅಂದು ಸಂಜೆ ಸುಮಾರು ೫:೦೦ ಘಂಟೆ ಸುಮಾರಿನಲ್ಲಿ ವಿಮಾನ ನಿಲ್ದಾಣದ ಹೊರಭಾಗದ ಟಿಕೆಟಿಂಗ್ ಕೌಂಟರಿನಲ್ಲಿ ನಾನು ಬಂದಾಗ ಗಮನಿಸಿದ್ದು

೧] ಕೇವಲ ಒಬ್ಬ ಯುವತಿ ಮತ್ತು ಒಬ್ಬ ಯುವಕ ಟಿಕೆಟಿಂಗ್ ವಿತರಣೆಯಲ್ಲಿ ನಿರತರಾಗಿದ್ದರು. ಇವರು ಎಲ್ಲರೊಡನೆ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಕೌಂಟರಿನಲ್ಲಿ ಪ್ರಸ್ತುತ ಪಡಿಸಿದ ಎಲ್ಲ ಮಾಹಿತಿ - ವಿವರಗಳು ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇತ್ತು. ಅತಿಥಿಗಳು ಕೌಂಟರಿನ ಗಾಜಿನ ಹೊರ ನಿಂತು ಸರಿಯಾಗಿ ವ್ಯವಹರಿಸಲು ಸಾಧ್ಯವಿಲ್ಲದಂತ ಪರಿಸ್ಥಿತಿ ಇತ್ತು. ನಡು ನಡುವೆ ಟಿಕೆಟಿಂಗ್ ಸಿಬ್ಬಂಧಿ ತಮಗೆ ದೂರವಾಣಿ ಮೂಲಕ ಬರುತ್ತಿದ್ದ ಕರೆಗಳಿಗೂ ಉತ್ತರಿಸುತ್ತಿದ್ದರು. ನೇರವಾಗಿ ಒಬ್ಬರ ವ್ಯವಹಾರ ಪೂರ್ತಿ ಮುಗಿಸುವ ವ್ಯವಧಾನ-ಸಮಯ-ಸೌಲಭ್ಯ ಸಿಬ್ಬಂಧಿಗೆ ಅಲ್ಲಿರದಿದ್ದದ್ದು ಗೋಚರಿಸಿತು.

೧] ಬಹಳಷ್ಟು ಜನ ಸರತಿಯಲ್ಲಿ ಕಾಯುತ್ತಿದ್ದರು(ಹೊಸದು ಖರೀದಿಸಲು, ಪಿಎನ್ಆರ್ ಸಂಖ್ಯೆ ನೀಡಿ ಮುದ್ರಿತ ಟಿಕೆಟ್ ಪದೆಯಲು,ಮತ್ತು ಮಾಹಿತಿಗಾಗಿ). ಇಬ್ಬರೂ ಬಹಳ ಶ್ರಮ ವಹಿಸಿ ಆಧಷ್ಟು ತ್ವರಿತವಾಗಿ ಟಿಕೆಟ್ ವಿತರಿಸಲು ಪ್ರಯತ್ನಿಸುತ್ತಿದ್ದರು. ನನ್ನ ಸರತಿ ಬಂದಾಗ ಪ್ರಿಂಟಿಗ್ ಮೆಷಿನ್ ಕೆಟ್ಟು ಹೋಗಿ ಟಿಕೆಟ್ ಮುದ್ರಣ ಸ್ಥಗಿತ ಗೊಂಡಿತು. ಶೀಘ್ರ ನಿರ್ಧಾರ ತೆಗೆದುಕೊಂಡ ಯುವತಿ ಟಿಕೆಟ್ ಗೆ ಬದಲಾಗಿ ನೇರವಾಗಿ ಬೋರ್ಡಿಂಗ್ ಪಾಸು ನೀಡಲು ಶುರು ಮಾಡಿದ್ದು ಕಂಡೆ. ಆದರೆ ನನಗೆ ಮುದ್ರಿತ ಟಿಕೆಟ್ ನ ಅವಶ್ಯಕತೆ ಇದ್ದುದರಿಂದ ಟಿಕೆಟ್ ಪ್ರತಿ ಸಹ ಬೇಕು ಎಂದು ತಿಳಿಸಿದಾಗ ಅವರು ಕೂಡಲೇ ತಮ್ಮ ಐಟಿ ಸಿಬ್ಬಂಧಿಗೆ (ನಿಲ್ದಾಣದಲ್ಲೆ ಇದ್ದಿರಬಹುದು) ದೂರವಾಣಿ ಮೂಲಕ ತಿಳಿಸಿದರು. ಮತ್ತು ನನಗೆ ೧೫-೨೦ ನಿಮಿಷದ ನಂತರ ಬರಲು ತಿಳಿಸಿದರು. ನಾನು ಚೆಕ್ ಇನ್ ಮುಗಿಸಿಕೊಂಡು ಸುಮಾರು ೨೫ ನಿಮಿಷಗಳ ನಂತರ ಬಂದರೂ ಪ್ರಿಂಟರ್ ಇನ್ನೂ ಸರಿಯಾಗಿರಲಿಲ್ಲ. ಇನ್ನೂ ನೇರವಾಗಿ ಬೋರ್ಡಿಂಗ್ ಪಾಸು ವಿತರಣೆ ನಡೆಯುತ್ತಿತ್ತು. ನನ್ನಂತೆ ಕೆಲವು ಅತಿಥಿಗಳು (Guest) ತಮ್ಮ ಟಿಕೆಟ್ ಪ್ರತಿ ಪಡೆಯಲು ಕಾಯುತ್ತಿದ್ದರು. ಕೆಲ ಸಮಯದ ನಂತರ ಬಂದ ಐಟಿಯವ ಪ್ರಿಂಟರ್ ಸರಿಪಡಿಸಿದ. ನಾನು ಟಿಕೆಟ್ ಪ್ರತಿ ಪಡೆದು ಎಲ್ಲ ಔಪಚಾರಿಕತೆ ಮುಗಿಸಿ ವಿಮಾನವೇರಲು ಒಳಬಂದೆ.

ವಿಮಾನ ಹೊರಟ ಮೇಲೆ

ವಿಮಾನ ಮೇಲೇರಿ ಹಾರಾಟಕ್ಕೆ ಅಣಿಯಾಗುತ್ತಿದ್ದಂತೆಯೆ ಆಸನ ೧೭ಇ (Seat 17E) ಲಿ ಇದ್ದ ವ್ಯಕ್ತಿ ಗೊಣಗುತ್ತ ತನ್ನ ಆತಂಕ ವ್ಯಕ್ತ ಪಡಿಸುತ್ತಿದ್ದ. ಅವನು ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದ ತಿಳಿಯಲಿಲ್ಲ (ಬಹುಷ: ಬಂಗಾಳಿ ಇರಬೇಕು) ಕೂಡಲೆ ಗಗನ ಸಖಿ ಆ ವ್ಯಕ್ತಿಯ ಬಳಿ ಮಾತಿಗಿಳಿದದ್ದು ಮತ್ತು ಸಹ ಅತಿಥಿಗಳು ಗಗನಸಖಿಯೊಡನೆ ವ್ಯವಹರಿಸುತ್ತಿದ್ದುದರಿಂದ ನನಗೆ ಏನು ನಡೆದಿದೆ ಎಂದು ಸ್ಪಷ್ಟವಾಯಿತು. ಈ ವ್ಯಕ್ತಿಯ ಜತೆಗೆ ಮತ್ತೊಬ್ಬ ಸಹಪ್ರಯಾಣಿಕ ೧೫ ಇ ಸೀಟಿನಲ್ಲಿ ಆಸೀನರಾಗಿದ್ದರು.

೧] ವಿಮಾನ ಕೊಲ್ಕೊತ್ತಾ ದಿಂದ ಬೆಂಗಳೂರಿಗೆ ಹಾರಾಟ ಪ್ರಾರಂಭಿಸಿತ್ತು. ಆದರೆ ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿ ದೆಹಲಿಗೆ ಹೋಗಬೇಕಾಗಿತ್ತು.

೨] ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿ ವಿಮಾನ ನಿಲ್ದಾಣದ ಕೌಂಟರಿನಲ್ಲಿ ದೆಹಲಿಗೆ ಟಿಕೆಟ್ ನೀಡಿ ಎಂದು ಕೇಳಿದ್ದ. ಆ ಸಮಯದಲ್ಲಿ ಆತನನ್ನು ಗಮನಿಸುತ್ತಿದ್ದ ಸಿಬ್ಬಂಧಿ ದೂರವಾಣಿ ಕರೆಯಲ್ಲಿ ನಿರತರಾಗಿದ್ದರು ಮತ್ತು ಈತ ಹೇಳಿದ್ದು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ

೩] ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿಗೆ ದೆಹಲಿಗೆ ಹೋಗುವ ಟಿಕೆಟ್ ವಿತರಿಸುವ ಬದಲು ಬೆಂಗಳೂರಿಗೆ ಹೋಗುವ ಬೋರ್ಡಿಂಗ್ ಪಾಸು ನೀಡಲಾಗಿತ್ತು (ಪ್ರಿಂಟರ್ ಕೆಟ್ಟಿದ್ದರಿಂದ ಅತ ಸಹ ಟಿಕೆಟ್ ಪ್ರತಿ ನಂತರ ಪಡೆದಿದ್ದ).

೪] ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿಗೆ ಬೋರ್ಡಿಂಗ್ ಪಾಸಿನಲ್ಲಿದ್ದ ಮತ್ತು ಟಿಕೆಟ್ ನಲ್ಲಿ ಮುದ್ರಿಸಿದ್ದ ವಿವರ ತಿಳಿಯಲಿಲ್ಲ. ಕಾರಣ ಆತನಿಗೆ ಇಂಗ್ಲೀಷ್ ಓದಲು ಬರುತ್ತಿರಲಿಲ್ಲ.

೫] ಆತ ಟಿಕೆಟ್ ಪದೆದು ನಿಲ್ದಾಣದ ಒಳಭಾಗಕ್ಕೆ ಬಂದಾಗ ಆಗಲೆ ಬೆಂಗಳೂರಿಗೆ! ತೆರಳುವ ವಿಮಾನದ ಸಮಯ ಮೀರುತ್ತಿತ್ತು. ಕಿಂಗ್ ಫಿಷರ್ ಸಿಬ್ಬಂಧಿಯೊಬ್ಬ ಈ ವ್ಯಕ್ತಿಯನ್ನು ಎಲ್ಲಿಗೆ ಹೋಗಬೇಕು ಅಂತ ಇಂಗ್ಲೀಷಿನಲ್ಲಿ ಕೇಳಿದ್ದಾನೆ. ಈತ ಉತ್ತರಿಸಲಾಗದೆ ಬೋರ್ಡಿಂಗ್ ಪಾಸು ತೋರಿಸಿದ್ದಾನೆ. ಅದನ್ನು ನೋಡಿದ ಕೂಡಲೆ ಆ ಸಿಬ್ಬಂಧಿ ಅತನನ್ನು ಬೆಂಗಳೂರು ವಿಮಾನಕ್ಕೆ ತೆರಳುವ ಬಸ್ಸಿನಲ್ಲಿ ಕೂರಿಸುವ ಔದಾರ್ಯ ತೋರಿದ್ದಾನೆ!

೬] ವಿಮಾನ ಹತ್ತುವಾಗ ಅಲ್ಲಿ ಬೆಂಗಳೂರು ಅಂತ ಬರೆದಿತ್ತು ಅದನ್ನು ನೀವ್ಯಾಕೆ ಗಮನಿಸಲಿಲ್ಲ ಎಂದು ಗಗನಸಖಿ ಮುಗ್ದತೆ-ಮುಗುಳುನಗೆಯಿಂದ ಪ್ರಶ್ನಿಸಿದಳು. ಅದು ನಾನು ದೆಹಲಿ ಅನ್ಕೊಂಡೆ ಅಂತ ವ್ಯಕ್ತಿ ಉತ್ತರಿಸಿದ. ಏಕೆಂದ್ರೆ ಅದು ಅವನಿಗೆ ಗೊತ್ತಿರುವ! ಭಾಷೆಯಲ್ಲಿ ಬರೆದಿರಲಿಲ್ಲ.

ನಂತರ ಗಗನಸಖಿ ಮತ್ತು ಪೈಲಟ ನಡುವೆ ಮಾತು ಕತೆ ನಡೆಯಿತು. ಕೊನೆಗೆ ಹೈದರಾಬಾದು ಮೂಲಕ ಬೆಂಗಳೂರಿಗೆ ಹೊರಟಿದ್ದ ಆ ವಿಮಾನದಲ್ಲಿ, ಹೈದರಾಬಾದಿನಲ್ಲಿ ಆ ಇಬ್ಬರು "ಅತಿಥಿ" ಗಳನ್ನು ಇಳಿಸಲಾಯಿತು. ನಂತರ ಗಗನಸಖಿಯಿಂದ ತಿಳಿದದ್ದು. ಅಂದು ರಾತ್ರಿ ಅವರಿಬ್ಬರಿಗೂ ಹೈದರಾಬಾದಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ಮುಂದಿನ ದಿನ ಉಚಿತವಾಗಿ ದೆಹಲಿಗೆ ಕಳುಹಿಸುವ ಏರ್ಪಾಡು ಮಾಡಲಾಗಿದೆ ಎಂದು!

ಮುಂದಿನ ಕ್ರಮ

ನನ್ನ ಮೇಲಿನ ದಾಖಲೆಗೆ ಕೊಲ್ಕೊತ್ತಾ ವಿಮಾನನಿಲ್ದಾಣದಲ್ಲಿ ಕಿಂಗ್ ಫಿಷರ್ ಸಂಸ್ಥೆ ತನ್ನ ಗ್ರಾಹಕ(ಅತಿಥಿ)ರಿಗೆ ಸೇವೆಯನ್ನು ಉತ್ತಮಗೊಳಿಸಲು ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ತಮಗೆ ಈಗಾಗಲೆ ತಿಳಿದು ಸೂಕ್ತವಾದುದನ್ನು ಮಾಡುತ್ತೀರಿ ಎಂಬ ನಂಬಿಕೆಯಿದೆ

ಈ ಘಟನೆಯ ಮೂಲಕ ನಾನು ಹೇಳಬಯಸುವುದು

ಒಬ್ಬ ಸಾಮಾನ್ಯ ಪ್ರಜೆಯೂ ಯಾರ ಮೇಲೂ ಅವಲಂಬಿತನಾಗದೆ, ವಿಮಾನಗಳಲ್ಲಿ ಯಾವುದೇ ತೊಂದರೆಗಳಿಲ್ಲದೆ ಪ್ರಯಾಣ ಮಾಡುವ ವ್ಯವಸ್ಥೆ ನಮ್ಮಲ್ಲಿ ಇನ್ನೂ ಜಾರಿಯಲ್ಲಿಲ್ಲದರುವುದು ವಿಪರ್ಯಾಸ. ಭಾರತದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ಅವನಿಗೆ ಕಡ್ಡಾಯವಾಗಿ ಇಂಗ್ಲೀಷ್ ಜ್ಞಾನ ಇರಬೇಕು ಎಂಬ ನಿಯಮ - ಕೀಳರಿಮೆ ನಮ್ಮಲ್ಲಿ ಉಂಟುಮಾಡಲಾಗಿದೆ. ಭಾರತದಲ್ಲಿ ಇಂಗ್ಲಿಷ್ ಬರದವನು ವಿಮಾನದಲ್ಲಿ ಕುಳಿತರೆ ವಿಮಾನ ಮೇಲೆ ಹಾರಲ್ಲ ಎಂಬ ಹಾಸ್ಯ ಚಟಾಕಿ ಸಹ ಚಾಲ್ತಿಯಲ್ಲಿದೆ. ಆದರೆ ವಿದೇಶಗಳಲ್ಲಿ ಇದಕ್ಕೆ ತದ್ವಿರುದ್ಧ. ಅಲ್ಲಿ ಸಾಧ್ಯವಾದದ್ದು ನಮ್ಮಲ್ಲಿ ಏಕೆ ಸಾಧ್ಯವಾಗಿಲ್ಲ. ಅದು ಸಾಧ್ಯವಾಗಿಸುವುದು ಅಷ್ಟು ಕಠಿಣವೆ. ಒಮ್ಮೆಯಾದರೂ ಇದನ್ನು ಯೋಚಿಸಿದ್ದೀರ? ಭಾರತದ ವಿಮಾನ ಯಾನ ಸೇವೆ, ವಿಮಾನ ನಿಲ್ದಾಣಗಳಲ್ಲಿ ಏಕೆ ಆಯಾ ಪ್ರದೇಶದ ಭಾಷೆಗಳ ಬಳಕೆ ಇಲ್ಲ. ಇತರ ದೇಶಗಳಲ್ಲಿ ತಂತ್ರಜ್ಞಾನ ಬೆಳೆದಂತೆ ಅದರ ಜತೆಗೆ ಅವರ ಭಾಷೆ ಸಹ ಬೆಳೆದಿರುತ್ತೆ. ಅವರ ಭಾಷೆಗೆ ಅವರು ಆ ರೀತಿ ಕಾಪಾಡಿಕೊಂಡು ಬಂದಿದ್ದಾರೆ. ಮತ್ತು ಆ ಮೂಲಕ ಅವರು ಹೆಚ್ಚು ಹೆಚ್ಚು ಜನರನ್ನು (ಗ್ರಾಹಕ-ಅತಿಥಿ)ಗಳನ್ನು ತಲುಪಿದ್ದಾರೆ. ಕೊಲಂಬೋದಲ್ಲಿ, ಬಾಂಗ್ಲಾದೇಶದಲ್ಲಿ, ಸಿಂಗಪುರದಲ್ಲಿ, ದುಬೈ, ಸೌದಿ ಜತೆಗೆ ಯೂರೋಪ್ ನ ಎಲ್ಲ ದೇಶದಲ್ಲಿ ಅಲ್ಲಿಯ ಸ್ಥಳೀಯ ಭಾಷೆಗೆ ವಿಮಾನ ಯಾನ ಸೇವೆಯಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ಅದೇ ಬೆಂಗಳೂರಿನಲ್ಲಿ ನಾನು ಒಂದು ವಿಮಾನ ಟಿಕೆಟ್ ಖರೀದಿಸಲು ನನ್ನದಲ್ಲದ ಇಂಗ್ಲೀಷ್ ಮತ್ತು ಸುಳ್ಳೆ ಸುಳ್ಳಾಗಿ ಈ ದೇಶದ ರಾಷ್ಟ್ರ ಭಾಷೆಯೆಂದು ಪ್ರಚಲಿತದಲ್ಲಿರುವ ಹಿಂದಿಯಲ್ಲಿ ಮಾತಾಡ ಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ.

ಪ್ರಪಂಚದ ಇತರ ಭಾಗಗಳ ಜನರು ತಮ್ಮ ಪ್ರದೇಶಗಳಲ್ಲಿ ತಮ್ಮದೆ ಬಾಷೆಯಲ್ಲಿ ಗ್ರಾಹಕ ಸೇವೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದ ಜನರ ಭಾಷೆ ಕನ್ನಡವಾಗಿದ್ದು, ಕಿಂಗ್ ಫಿಷರ್ ನ ಕರ್ನಾಟಕದ ಚಟುವಟಿಕೆ ಮತ್ತು ಗ್ರಾಹಕ ಸೇವೆ ಕನ್ನಡದಲ್ಲೆ ಇರಬೇಕಾದ್ದು ಸಹಜವಾದದ್ದು ಅಲ್ಲವೆ. ಆ ನಿಟ್ಟಿನಲ್ಲಿ

೧] ಕರ್ನಾಟಕದ ನಿಮ್ಮ ಸಂಸ್ಥೆಯ ಎಲ್ಲ ಕಾರ್ಮಿಕರಿಗೂ ಸಾಮಾನ್ಯ ಕನ್ನಡ ಭಾಷೆಯ ಪರಿಜ್ಞಾನ ಇರಬೇಕು.

೨] ಕರ್ನಾಟಕದಲ್ಲಿನ ನಿಮ್ಮ ಉದ್ಯೋಗಳು ಕನ್ನಡಿಗನಿಗೆ ಸಿಗುವಂತಾದರೆ ಅದು ಇನ್ನೂ ಹೆಚ್ಚು ಪರಿಣಾಮಕಾರಿ

೩] ನಗರದಲ್ಲಿನ ನಿಮ್ಮ ಕಚೇರಿ ವಿಮಾನ ನಿಲ್ದಾಣದ ನಿಮ್ಮ ಕಚೇರಿ ಹಾಗು ಇತರೆಡೆ ಪ್ರದರ್ಶಿತವಾಗುವ ಎಲ್ಲ ರೀತಿಯ ಫಲಕಗಳಲ್ಲಿ ಕನ್ನಡ ಕಂಡು ಬರಬೇಕು

೪] ನಿಲ್ದಾಣದಲ್ಲಿನ ನಿಮ್ಮ ಘೋಷಣೆ ಹೆಚ್ಚು ಹೆಚ್ಚಾಗಿ ಕನ್ನಡ ಭಾಷೆಯಲ್ಲಿ ಪ್ರಸಾರವಾಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು

೫] ವಿಮಾನ ಪ್ರಯಾಣಕ್ಕೆ ಸಂಬಂಧ ಪಡುವ ಎಲ್ಲ ಮುದ್ರಿತ ವಸ್ತುಗಳಲ್ಲಿ, ಟಿವಿ ಪರದೆ, ದರ್ಶಿಕೆಗಳಲ್ಲಿ ಕನ್ನಡ ಭಾಷೆಯ ಬಳಕೆ ಇರಬೇಕು

೬]ಅತಿಥಿಗಳನ್ನ ಆಹ್ವಾನಿಸುವುದರಲ್ಲಿ, ಬೀಳ್ಕೊಡುವುದರಲ್ಲಿ ನಿಮ್ಮ ಸಿಬ್ಬಂಧಿಯವರು ಕನ್ನಡವನ್ನು ಬಳಸುವಂತಾಗಬೇಕು

೫] ವಿಮಾನದಲ್ಲಿ ಕನ್ನಡ ದಿನ ಪತ್ರಿಕೆ, ಮ್ಯಾಗಜೀನ್ ಗಳು, ಮನರಂಜನೆ ಟಿವಿ ಯಲ್ಲಿ ಕನ್ನಡ ಹಾಡುಗಳು, ಚಿತ್ರಗಳು ಮೂಡಿಬರಬೇಕು

೬] ಮುಖ್ಯವಾಗಿ ಸುರಕ್ಷೆ ಸೂಚನೆಗಳನ್ನು ಕನ್ನಡದಲ್ಲಿ ಸಹ ಹೇಳುವಂತಾಗಬೇಕು.

ಬೆಂಗಳೂರು - ಕರ್ನಾಟಕದಲ್ಲಿ ಎಲ್ಲವು ಕನ್ನಡದಲ್ಲಿ ಇರಬೇಕೆಂದು ಹೇಳುತ್ತಿರುವುದು, ಭಾರತದ ಇತರ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯ ಬಳಕೆಯಾಗಬೇಕು ಎನ್ನುವುದೇ ಅಗಿದೆ. ಇದು ಸರಿಯಾಗಿ, ಯಶಸ್ವಿಯಾಗಿ ನೆರವೇರಿದಲ್ಲಿ ಮೇಲೆ ನಾನು ತಿಳಿಸಿದಂತೆ ಕೊಲ್ಕೊತ್ತ - ಬೆಂಗಳೂರು ವಿಮಾನದಲ್ಲಿ ನಡೆದ ಘಟನೆ ಮರುಕಳಿಸುವುದಿಲ್ಲ. ಒಬ್ಬ ಸಾಮಾನ್ಯ ಪ್ರಜೆಯೂ ಯಾವುದೇ ಅಂಜಿಕೆ-ಕೀಳರಿಮೆ ಇಲ್ಲದೆ ಬದುಕಲು ಅವಾಕಾಶ ಮಾಡಿಕೊಡುತ್ತದೆ.

ಇದನ್ನು ಕಾರ್ಯಗತಗೊಳಿಸಲು "ಇಚ್ಛಾಶಕ್ತಿ" ತೋರುವ ಮೊದಲಿಗರು ನೀವಾಗುತ್ತೀರಿ ಎಂಬ ಆಶಯದೊಂದಿಗೆ.

*****

ಇದು ಆದಷ್ಟು ಬೇಗ ಅನುಷ್ಠಾನಗೊಂಡಲ್ಲಿ "ಕಿಂಗ್ ಫಿಷರ್" ಸಂಸ್ಥೆ ಆಯಾ ರಾಜ್ಯಗಳ ಭಾಷೆಯಲ್ಲಿ "ಗ್ರಾಹಕ ಸೇವೆ" ಒದಗಿಸುವ ಮೊದಲ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಚಿನ್ನದ ಗರಿ ಸೇರಿಸುವ
ಇಚ್ಛಾಶಕ್ತಿಯ ನಿರ್ಣಯವನ್ನು ಕಿಂಗ್ ಫಿಷರ್ ಸಂಸ್ಥೆ ತೆಗೆದುಕೊಳ್ಳಬೇಕಿದೆ.

ಗ್ರಾಹಕರಾಗಿ ನಾವು ನಮ್ಮ ಭಾಷೆಯಲ್ಲಿ ಸೇವೆಯನ್ನು ಕೇಳುವುದು ನಮ್ಮ ಹಕ್ಕು. ಆದರೆ ನಮ್ಮ ಈ ಮೂಲಭೂತ ಹಕ್ಕನ್ನು ಚಲಾವಣೆಗೆ ತರಲು ನಾವು ಆಗ್ರಹ ಪಡಿಸಬೇಕಾಗಿರುವ ಪರಿಸ್ಥಿತಿ ಇರುವುದು ಮಾತ್ರ ವಿಪರ್ಯಾಸ.


ಕಲ್ಯಾಣ ರಾಮನ್ ಚಂದ್ರಶೇಖರನ್

Tuesday, January 11, 2011

ಬಿಎಂಟಿಸಿ - ಬಿಟಿಎಂ ಬಡಾವಣೆ ಅಲ್ಲ, ಅದು ಕುವೆಂಪು ನಗರ..

*****
ಉದಯವಾಣಿ, ಬೆಂಗಳೂರು ೧೧ ಜನವರಿ ೨೦೧೧, ಜನತಾವಾಣಿಯಲ್ಲಿ ಪ್ರಕಟವಾದ ಪತ್ರ
*****


*****
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

****

Friday, January 7, 2011

೨೦೧೧ ರಲ್ಲಿ ಕನ್ನಡ ಎಲ್ಲೆಲ್ಲೂ ಪುಟಿಯಲಿ

*****



*****
ಹೊಸದಿಗಂತ ೧.೧.೨೦೧೧ ರ ಪತ್ರಮಿತ್ರದಲ್ಲಿನ ಶ್ರೀಯುತ ಕೋಟೇಶ್ವರ ಸೂರ್ಯನಾರಾಯಣರಾವ್ ರ "೨೦೧೧ ರಲ್ಲಿ ಕನ್ನಡ ಎಲ್ಲೆಲ್ಲೂ ಪುಟಿಯಲಿ" ಪತ್ರ ಕಂಡು ಸಂತೋಷವಾಯಿತು. ಬಸವನಗುಡಿಯಲ್ಲಿ ಅಂಗಡಿಗಳನ್ನು ಹೊಂದಿರುವವರೆಲ್ಲರೂ ಇನ್ನು ಮುಂದೆ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ಮಾತನಾಡುವ ವ್ಯವಸ್ಥೆಯನ್ನು ಬಸವನಗುಡಿ ವ್ಯಾಪಾರಿಗಳ ವೇದಿಕೆಯ ವತಿಯಿಂದ ಚಾಲನೆ ನೀಡಿರುವುದು ಸ್ವಾಗತಾರ್ಹ.

ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಆದರೆ ಇದಕ್ಕಾಗಿ ಒತ್ತಾಯ ಮಾಡಬೇಕಾಗಿರುವ ಪರಿಸ್ಥಿಸಿ ಇಂದು ಬೆಂಗಳೂರಿನಲ್ಲಿದೆ. ಅಂಗಡಿ ಮಳಿಗೆಗಳಿಗೆ ಸಂಬಂಧಿಸಿದಂತೆ ಅಂಗಡಿಗಳಲ್ಲಿನ ನಾಮಫಲಕ ಪ್ರದರ್ಶನ, ಅವರ ಜಾಹೀರಾತುಗಳು, ಅವರು ಮಾರುವ ಉತ್ಪನ್ನಗಳ ವಿವರ, ಖರೀದಿಗಾಗಿ ಅವರು ಕೊಡುವ ರಶೀತಿ, ಕೊಳ್ಳುವ ವಸ್ತುವನ್ನು ನಾವು ಕೊಂಡೊಯ್ಯಲು ಅವರು ನೀಡುವ ಪ್ಲಾಸ್ಟಿಕ್ ಚೀಲ ಮತ್ತು ಅದರ ಮೇಲೆ ಮೂಡಿ ಬರುವ ಬರಹ. ಹೋಟಲ್ ಗಳಲ್ಲಿನ ತಿಂಡಿ ದರ ಪಟ್ಟಿ, ತಿಂಡಿಯ ವಿವರ. ಬ್ಯಾಂಕು-ವಿಮಾ-ಹಣಕಾಸು ಸಂಸ್ಥೆಯಲ್ಲಿ ಕೊಡ ಮಾಡುವ ಮಾಹಿತಿಗಳ ವಿವರ. ಬಸ್ಸಿನಲ್ಲಿ ಪ್ರಯಾಣಿಸುವಾಗ ಅಲ್ಲಿ ದೊರೆಯುವ ಮನರಂಜನೆ, ಹೀಗೆ ಇವೆಲ್ಲವೂ ಗ್ರಾಹಕ ಸೇವೆಯ ದೃಷ್ಟಿಯಿಂದ ಬಹುಮುಖ್ಯವಾದದ್ದು. ಈ ಎಲ್ಲೆಡೆ ಆ ಸೇವೆ ಅಲ್ಲಿನ ಪ್ರದೇಶದ ಭಾಷೆಯಲ್ಲಿರಬೇಕಾದ್ದು ಸಹಜವಾದದ್ದು. ಇದು ಬಹುತೇಕ ವಿದೇಶಗಳೆಲ್ಲೆಡೆ ಚಾಲ್ತಿಯಲ್ಲಿರುವ ನೀತಿ ಮತ್ತು ನಿಯಮ. ಇದು ಭಾರತದಲ್ಲೂ ಪ್ರಚಲಿತಕ್ಕೆ ಬಂದಲ್ಲಿ ಆಯಾ ಪ್ರದೇಶಗಳಿಗೆ ವಲಸೆ ಹೋಗುವವರಿಗೆ ಅಲ್ಲಿನ ಭಾಷೆ ಕಲಿಯಬೇಕಾದ ಅನಿವಾರ್ಯತೆ ಹುಟ್ಟಿಸಿ ಅವರುಗಳು ಸಹ ಬಂದು ನೆಲಸುವ ಪ್ರದೇಶ ಸಂಸ್ಕೃತಿಯೆಡೆ ಆಕರ್ಷಿತರಾಗಿ ಅಲ್ಲಿನ ಮುಖ್ಯ ವಾಹಿನಿಯಲ್ಲಿ ಬೆರೆಯುವ ಒಂದು ಸಾಧನವಾಗುತ್ತದೆ.


ಬಸವನಗುಡಿ ಅಂಗಡಿ ಮಾಲೀಕರ ಸಂಘ ಈ ಹೊಸ ವರ್ಷದಲ್ಲಿ ಕನ್ನಡ ಜನತೆಗೆ ಕನ್ನಡದಲ್ಲಿ ಗ್ರಾಹಕ ಸೇವೆ ಒದಗಿಸುವಲ್ಲಿ ಇಟ್ಟಿರುವ ಮೊದಲ ಹೆಚ್ಚೆಯ ಕೊಡುಗೆಯಿದಾಗಿದೆ. ಇದು ಬೆಂಗಳೂರಿನ ಇತರ ಬಡಾವಣೆಗಳಲ್ಲಿನ ವ್ಯಾಪಾರಿ ಸಂಘಗಳು ಮತ್ತು ಅಂಗಡಿ ಮಳಿಗೆಗಳ ಮಾಲೀಕರಿಗೂ ಪ್ರೇರೇಪಣೆ ನೀಡಲಿ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಕೃತಿ-ಕಲೆ-ಸಾಹಿತ್ಯ-ಕಲಾವಿದರ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸುವುದು ಸೇರಿದಂತೆ ಈ ಮೇಲೆ ತಿಳಿಸಿದ ಎಲ್ಲ ವ್ಯವಸ್ಥೆಯಲ್ಲೂ ಕನ್ನಡದಲ್ಲಿ ಸೇವೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಲಿ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ


*****