Thursday, March 3, 2011

ಕೇಂದ್ರ ಸಚಿವರ ಬಂಗಾಳಿ ಪ್ರೇಮ! ಕನ್ನಡ ರಾಜಕಾರಣಿಗಳ ಇಚ್ಛಾಶಕ್ತಿ?

*****

ಇತ್ತೀಚಿನ ಕೇಂದ್ರ ರೈಲು ಮತ್ತು ಹಣಕಾಸು ಮುಂಗಡ ಪತ್ರಗಳನ್ನು ಕ್ರಮವಾಗಿ ಮಂಡಿಸಿದ ಮಮತಾ ಬ್ಯಾನರ್ಜಿ ಮತ್ತು ಪ್ರಣಬ್ ಮುಖರ್ಜಿ ಅವರು ತಮಗೆ ದೊರೆತ ಅವಕಾಶದಲ್ಲಿ ತಮ್ಮ ಬಂಗಾಳಿ ಪ್ರೇಮವನ್ನು ಮೆರೆದ ಉದಾಹರಣೆ ಕುರಿತಾಗಿ ಈ ಪತ್ರ. ರೈಲ್ವೇ ಸಚಿವೆ ಮಮತಾರವವರು ರೈಲ್ವೇ ಮುಂಗಡ ಪತ್ರದ ಮೂಲಕ ಪಶ್ಚಿಮ ಬಂಗಾಳದ ಜನತೆಗೆ ಬಂಪರ್ ಕೊಡುಗೆ ನೀಡುತ್ತ ಇಡೀ ಭಾರತಕ್ಕೆ ಅನ್ವಯವಾಗುವ ಎರಡು ರೈಲ್ವೇ ಸೇವೆಗಳಿಗೆ ವಿವೇಕಾನಂದರ ನೆನಪಿನಲ್ಲಿ 'ವಿವೇಕ್ ರೈಲು' ಮತ್ತು ರವೀಂದ್ರನಾಥ ಠಾಗೋರರ ನೆನಪಿನಲ್ಲಿ 'ಕವಿ ಗುರು' ಎಕ್ಸ್ ಪ್ರೆಸ್ ಎಂಬ ಹೆಸರಿಟ್ಟು ತಮ್ಮ ಬಂಗಾಳಿ ಪ್ರೇಮವನ್ನು ಮೆರೆದಿದ್ದಾರೆ. ಕಳೆದ ರೈಲು ಬಜೆಟ್ ನಲ್ಲಿ ಸೇರ್ಪಡೆಗೊಂಡಿದ್ದ 'ತುರಂತೋ' ರೈಲು ಸೇವೆ ಸಹ ಅವರ ಬಂಗಾಳಿ ಪ್ರೇಮಕ್ಕೆ ಸಾಕ್ಷಿ. ಹಣಕಾಸು ಬಜೆಟ್ ಮಂಡಿಸಿದ ಪ್ರಣಬ್ ಮುಖರ್ಜಿಯವರು ಪೈಪೋಟಿಗೆ ಬಿದ್ದಂತೆ 'ಠಾಗೋರರ' ನೆನಪಿನಲ್ಲಿ ಕೋಟಿ ರೂಗಗಳ ಅಂತರ ರಾಷ್ಟ್ರೀಯ ಮಟ್ಟದ ಬಹುಮಾನ ಪ್ರಕಟಿಸುವ ಮೂಲಕ 'ರವೀಂದ್ರ'ರ ಹೆಸರನ್ನು ವಿಶ್ವವ್ಯಾಪಿ ಮಾಡಲು ಮುಂದಡಿಯಿಟ್ಟಿದ್ದಾರೆ.

ವಿಪರ್ಯಾಸ ನೋಡಿ, ಕರ್ನಾಟಕದ ರಾಜಕಾರಣಿಗಳಿಗೆ - ಅಧಿಕಾರಿಗಳಿಗೆ ಸ್ವಯಂ ಆಗಿ ಈ ರೀತಿಯ ಕರ್ನಾಟಕದ ಸ್ವಾಭಿಮಾನದ ಸಂಕೇತಗಳು - ನಾಡು ನಾಡಿಗರ ಬಗೆಗಿನ ಒಲವು ಮೂಡಿರುವುದನ್ನು ನಾವು ಎಂದೂ ಕಂಡಿಲ್ಲ. ಕನಿಷ್ಠ ಈ ಮೇಲಿನ ಉದಾಹರಣೆ ಅವರನ್ನು ಚಿಂತಿಸುವಂತೆ ಮಾಡುತ್ತದೆ ಎಂದರೂ ಅದು ತಪ್ಪಾಗುತ್ತದೆ. ಇವರಿಗೆ ಕನ್ನಡ - ಕನ್ನಡದ ಬಗೆಗಿನ ಮಾತು ರಾಷ್ಟ್ರೀಯತೆಯೆಂಬ ಗುಂಗಿನಲ್ಲಿ ಸಂಕುಚಿತವಾಗಿ ಬಿಡುತ್ತದೆ. ಇದು ನಮ್ಮ ಹೃದಯ ವೈಶಾಲ್ಯದ ಕರ್ಮ!

ಬೆಂಮೆರೈನಿನಿ ಇನ್ನೇನು ಆರಂಭವಾಗಲಿರುವ ತನ್ನ ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಿಗೆ ಕನ್ನಡಿಗ ಸಾಧಕರ ಹೆಸರಿಡಲು ಮುಂದಾಗಿಲ್ಲದಿರುವುದು. ಬೆಂಮಸಾಸಂ ಒಡಗೂಡಿ ತರಲಿರುವ ಜಂಟಿ ಪಾಸುಗಳಿಗೆ 'ಸರಲ್' ಮತ್ತು 'ಸರಾಗ್' ಎಂಬ ಹಿಂದಿ ಅರ್ಥ ಬರುವ ಹೆಸರಿಡಲು ಯೋಜಿಸಿರುವುದು. ಬೆಂಮಸಾಸಂ ತನ್ನ ಸೇವೆಗೆ 'ಬಿಗ್ 10' ಎಂಬ ಹೆಸರು ಇಟ್ಟುಕೊಂಡಿರುವುದು, ಇವ್ಯಾವುದನ್ನೂ ಕುರಿತು ನಮ್ಮ ಆಡಳಿತಗಾರರು ಚಕಾರವೆತ್ತದೆ ಸುಮ್ಮನಿರುವುದು ನಮ್ಮ ನಿರಭಿಮಾನಕ್ಕೆ ಕೆಲ ಉದಾಹರಣೆಗಳು. ನಮ್ಮ ಊರುಗಳಲ್ಲಿನ ಯೋಜನೆಗೆ ನಮ್ಮ ಸಂಕೇತಗಳಿರಬೇಕು ಎಂದು ಧನಿ ಎತ್ತದ, ಕನ್ನಡ ಇಚ್ಛಾಶಕ್ತಿಯಿಲ್ಲದ ನಮ್ಮ ರಾಜಕಾರಣಿಗಳಿಂದ ಕೇಂದ್ರ ಸರ್ಕಾರದ ಆದೇಶಕ್ಕಾಗಿ ಇನ್ನೂ ಕಾಯಬೇಕಾಗಿರುವ 'ಬ್ಯಾಂಗಲೋರ್ - ಬೆಂಗಳೂರಾಗಿ' ಬದಲಾಗಬೇಕಾಗಿರುವುದು ಮತ್ತು ನಮ್ಮ ಹೊಸ ವಿಮಾನ ನಿಲ್ದಾಣ 'ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ' ವಾಗಬೇಕಾಗಿರುವುದು ಕೇವಲ ನಮ್ಮ ಹಗಲುಗನಸಾಗಿ ಮಾತ್ರ ಮುಂದುವರೆದಿದೆ

*****



*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****